ADVERTISEMENT

585 ಎಕರೆ ಭೂಸ್ವಾಧೀನ: ಶೀಘ್ರ ಹಸ್ತಾಂತರ

ಚಿಕ್ಕಮಗಳೂರು–ಬೇಲೂರು ರೈಲು ಮಾರ್ಗ 3 ವರ್ಷದಲ್ಲಿ ಪೂರ್ಣ: ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 16:50 IST
Last Updated 28 ಅಕ್ಟೋಬರ್ 2024, 16:50 IST
ಕೇಂದ್ರ ಸಚಿವ ವಿ. ಸೋಮಣ್ಣ, ಕುಟುಂಬ ಸಮೇತರಾಗಿ ಹಾಸನಾಂಬೆಯ ದರ್ಶನ ಪಡೆದರು
ಕೇಂದ್ರ ಸಚಿವ ವಿ. ಸೋಮಣ್ಣ, ಕುಟುಂಬ ಸಮೇತರಾಗಿ ಹಾಸನಾಂಬೆಯ ದರ್ಶನ ಪಡೆದರು   

ಪ್ರಜಾವಾಣಿ ವಾರ್ತೆ

ಹಾಸನ: ‘ಚಿಕ್ಕಮಗಳೂರು-ಬೇಲೂರು-ಆಲೂರು ರೈಲ್ವೆ ಯೋಜನೆ ಮೂರು ವರ್ಷದಲ್ಲಿ ಪೂರ್ಣಗೊಳ್ಳಲಿದೆ’ ಎಂದು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು.

ನಗರದಲ್ಲಿ ಸೋಮವಾರ ಹಾಸನಾಂಬ ದರ್ಶನ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ರೈಲು ಮಾರ್ಗಕ್ಕೆ 585 ಎಕರೆ ಜಾಗವನ್ನು ಜಿಲ್ಲಾಧಿಕಾರಿ ಭೂಸ್ವಾಧೀನ ಮಾಡಿದ್ದಾರೆ. ತಕ್ಷಣದಲ್ಲೇ ಇಲಾಖೆಗೆ ಹಸ್ತಾಂತರವಾಗಲಿದೆ’ ಎಂದರು.

ADVERTISEMENT

‘ನಾನು ಸಚಿವನಾದ ಮೇಲೆ ಕರ್ನಾಟಕ ರಾಜ್ಯದಲ್ಲಿ 11 ಯೋಜನೆಗಳು, 1,800 ಹೊಸಲೈನ್‌ಗಳಿಗೆ ಚಾಲನೆ ದೊರಕಿದೆ. ತುಮಕೂರು, ರಾಯದುರ್ಗ, ದಾವಣಗೆರೆ, ಗದಗ ಸೇರಿ ಹಲವೆಡೆ ಕೆಲಸ ನಡೆಯುತ್ತಿದೆ. ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ₹43 ಸಾವಿರ ಕೋಟಿ ರೂಪಾಯಿಗಳ‌ ಯೋಜನೆಗಳನ್ನೂ ಕೈಗೆತ್ತಿಕೊಳ್ಳಲಾಗಿದೆ’ ಎಂದರು.

‘44 ಸಾವಿರ ಡಬಲ್ ಲೈನ್‌ ರೈಲು ಮಾರ್ಗ, ಶೇ 98 ರಷ್ಟು ಎಲೆಕ್ಟ್ರಿಫಿಕೇಷನ್‌ನೊಂದಿಗೆ ಹೊಸಲೈನ್‌ಗಳನ್ನ ತ್ವರಿತಗತಿಯಲ್ಲಿ ರೂಪಿಸಲು ಕ್ರಮ ತೆಗೆದುಕೊಂಡಿದ್ದೇವೆ. 104 ವಂದೇಭಾರತ್ ರೈಲುಗಳು ಇಡೀ ದೇಶದ 24 ರಾಜ್ಯಗಳಲ್ಲಿ 294 ಜಿಲ್ಲಾ ಕೇಂದ್ರಗಳಲ್ಲಿ ಸುತ್ತಾಡುತ್ತಿವೆ. ಕರ್ನಾಟಕ ರಾಜ್ಯದಲ್ಲೆ 10 ರೈಲುಗಳು ಓಡಾಡುತ್ತಿವೆ’ ಎಂದರು.

‘ಹೊಸದಾಗಿ 30 ಸಾವಿರ ಹೊಸ ಬೋಗಿಗಳ ಅಳವಡಿಕೆ ಪ್ರಾರಂಭವಾಗಿದ್ದು, ಪ್ರತಿ ಪ್ಯಾಸೆಂಜರ್ ರೈಲಿಗೆ 3–4 ಬೋಗಿಗಳನ್ನು ಅಳವಡಿಸಲಾಗುತ್ತಿದೆ. ತುಮಕೂರಿನಿಂದ ಬೆಂಗಳೂರಿಗೆ ಮೆಮೊ ರೈಲು ಆರಂಭಿಸಲಾಗಿದೆ. ಅದೇ ರೈಲು ಹಾಸನದಿಂದ ಬೆಂಗಳೂರಿಗೆ ಸಂಚರಿಸುವ ವ್ಯವಸ್ಥೆ ಮಾಡಲು ಚಿಂತನೆ ನಡೆದಿದೆ’ ಎಂದರು.

‘ರೈಲ್ವೆ ಇಲಾಖೆಯು ವಿಶ್ವದ ಭೂಪಟದಲ್ಲಿ ಐದನೇ ಸ್ಥಾನದಲ್ಲಿತ್ತು. ಅದನ್ನು ಮೂರನೇ ಸ್ಥಾನಕ್ಕೆ ತರಲು ತೀರ್ಮಾನಿಸಲಾಗಿದೆ. ನವೆಂಬರ್ 1ಮತ್ತು 2 ರಂದು ಪ್ರಧಾನಮಂತ್ರಿ ಅವರು ಇಲಾಖೆ ಪ್ರಗತಿ ಪರಿಶೀಲನೆ ಮಾಡಲಿದ್ದಾರೆ’ ಎಂದರು.

‘ಪತ್ರಕರ್ತರಿಗೆ, ಹಿರಿಯ ನಾಗರಿಕರಿಗೆ ನೀಡುತ್ತಿದ್ದ ರೈಲ್ವೆ ಪಾಸ್ ನಿಂತಿದೆ. ಮತ್ತೆ ಪಾಸ್‌ ಕೊಡಲು ನನ್ನದೂ ಒತ್ತಾಯವಿದೆ. ಪ್ರಧಾನಮಂತ್ರಿ ಸ್ಪಂದಿಸುತ್ತಾರೆಂಬ ವಿಶ್ವಾಸವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.