
ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವರ್ಷ ಜಿಲ್ಲೆಗೆ ಮೂರನೇ ಬಾರಿಗೆ ಭೇಟಿ ನೀಡುತ್ತಿದ್ದು, ಜೊತೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಬರಲಿದ್ದಾರೆ. ಈ ಹಂತದಲ್ಲಿ ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ಯೋಜನೆಗಳು ಪೂರ್ಣಗೊಳ್ಳಲಿವೆಯೇ ಎನ್ನುವ ಕುತೂಹಲ ಜಿಲ್ಲೆಯಲ್ಲಿ ಜನರಲ್ಲಿ ಮೂಡಿದೆ.
ಜಿಲ್ಲೆಯಾದ್ಯಂತ ಪ್ರಮುಖವಾಗಿ ಕೃಷಿ ಕ್ಷೇತ್ರ ಸಂಕಷ್ಟದಲ್ಲಿದೆ. ಜಿಲ್ಲೆಯ ರೈತರು ಬೆಳೆದ ಯಾವ ಬೆಳೆಗಳೂ ಕೈಗೆ ಸಿಕ್ಕಿಲ್ಲ. ನಿರಂತರ ಮಳೆ, ಹವಾಮಾನ ವೈಪರೀತ್ಯದಿಂದ ಮೆಕ್ಕೆಜೋಳ, ರಾಗಿ, ಕಾಫಿ, ಕಾಳುಮೆಣಸು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇತ್ತೀಚಿನ ಸಮೀಕ್ಷೆಯಲ್ಲಿ 12 ಸಾವಿರಕ್ಕೂ ಹೆಚ್ಚು ರೈತರ ಜಮೀನಿನಲ್ಲಿ ಬೆಳೆದ ಜೋಳ. ಬಿಳಿ ಸುಳಿ ರೋಗಕ್ಕೆ ತುತ್ತಾಗಿರುವುದು ದೃಢಪಟ್ಟಿದೆ. ನಿರಂತರ ಮಳೆಯಿಂದ ಇದೀಗ ರಾಗಿಯೂ ನೆಲಕಚ್ಚುವ ಆತಂಕ ರೈತರನ್ನು ಕಾಡುತ್ತಿದೆ. ಇನ್ನೊಂದೆಡೆ ಕಾಫಿ, ಕಾಳುಮೆಣಸು ಇಳುವರಿಯಲ್ಲಿ ಶೇ 50ಕ್ಕಿಂತ ಅಧಿಕ ನಷ್ಟ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎನ್ನುವುದು ಕೃಷಿಕರ ಒತ್ತಾಯ.
ಮುಗಿಯದ ಆನೆ ಸಮಸ್ಯೆ: ಜಿಲ್ಲೆಯ ಮತ್ತೊಂದು ಪ್ರಮುಖ ಸಮಸ್ಯೆಯಾಗಿರುವ ಕಾಡಾನೆಗಳಿಗೆ ಕಡಿವಾಣ ಹಾಕಬೇಕಿದೆ. ಮಾನವ–ಆನೆ ಸಂಘರ್ಷ ಹೆಚ್ಚುತ್ತಲೇ ಇದ್ದು, ಸರ್ಕಾರ ಭದ್ರ ಅಭಯಾರಣ್ಯದಲ್ಲಿ ಆನೆ ಧಾಮ ನಿರ್ಮಿಸಲು ಮುಂದಾಗಿದೆ. ಆದರೆ, ಜಿಲ್ಲೆಯಲ್ಲಿರುವ ಆನೆಗಳನ್ನು ಮೊದಲು ಸ್ಥಳಾಂತರಿಸುವಂತೆ ಇಲ್ಲಿನ ಜನರು ಮುಂದಿಟ್ಟಿರುವ ಬೇಡಿಕೆಗೆ ಸ್ಪಂದನೆ ಸಿಗುತ್ತಿಲ್ಲ.
ಪ್ರಮುಖವಾಗಿ ಸಕಲೇಶಪುರ, ಬೇಲೂರು, ಅರಕಲಗೂಡು ತಾಲ್ಲೂಕಿನಲ್ಲಿ ಆನೆಗಳ ಹಾವಳಿ ವಿಪರೀತವಾಗಿದೆ. ಈಚೆಗೆ ಬೇಲೂರು ತಾಲ್ಲೂಕಿನಲ್ಲಿ ಎರಡು ಮದಗಜಗಳು ಗ್ರಾಮದಲ್ಲಿಯೇ ಕಾದಾಟ ನಡೆಸಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಮನೆಗಳಿಂದ ಹೊರಬರುವುದಕ್ಕೂ ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ.
ಮೂಲಸೌಕರ್ಯ: ಪ್ರವಾಸಿ ತಾಣಗಳ ಮೂಲಸೌಕರ್ಯ ಸೇರಿದಂತೆ ಜಿಲ್ಲೆಯಾದ್ಯಂತ ಅಗತ್ಯ ಸೌಲಭ್ಯಗಳು ಸಿಗದಂತಾಗಿದೆ. ನಗರದಲ್ಲಿಯೇ ನನೆಗುದಿಗೆ ಬಿದ್ದಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಇನ್ನೂ ಮುಗಿಯುತ್ತಿಲ್ಲ. ನಗರ, ಗ್ರಾಮೀಣ ರಸ್ತೆಗಳು ಹಾಳಾಗಿದ್ದು, ದುರಸ್ತಿ ಮಾಡುವುದಕ್ಕೂ ಅನುದಾನ ಸಿಗುತ್ತಿಲ್ಲ ಎನ್ನುವ ಆರೋಪ ಶಾಸಕರಾಗಿದ್ದಾಗಿದೆ.
ಪಾರದರ್ಶಕ ಆಡಳಿತ ನೀಡುವ ಮೂಲಕ ರೈತರಿಗೆ ದಾಖಲೆ ಒದಗಿಸುವ ಹಾಗೂ ಅರ್ಹರಿಗೆ ಸೌಲಭ್ಯ ತಲುಪಿಸುವ ಕಾರ್ಯಕ್ರಮವನ್ನು ಡಿ. 6 ರಂದು ಮಾಡಲಾಗುತ್ತಿದೆ.ಕೃಷ್ಣ ಬೈರೇಗೌಡ ಜಿಲ್ಲಾ ಉಸ್ತುವಾರಿ ಸಚಿವ
ಡಿ.6 ರಂದು ಮುಖ್ಯಮಂತ್ರಿ ಹಾಸನಕ್ಕೆ ಬರುತ್ತಿದ್ದು ರಾಯಚೂರು ಮಹಾನಗರ ಪಾಲಿಕೆಗೆ ನೀಡಿದಂತೆ ಹಾಸನ ಪಾಲಿಕೆ ಅಭಿವೃದ್ಧಿಗೆ ಕನಿಷ್ಠ ₹ 100 ಕೋಟಿಯನ್ನಾದರೂ ಬಿಡುಗಡೆ ಮಾಡಲಿಎಚ್.ಡಿ. ರೇವಣ್ಣ ಶಾಸಕ
ಅನುದಾನದ ಜಟಾಪಟಿ
ಬಿಜೆಪಿ ಶಾಸಕ ಸಿಮೆಂಟ್ ಮಂಜುನಾಥ ಜೆಡಿಎಸ್ ಶಾಸಕರಾದ ಎಚ್.ಡಿ. ರೇವಣ್ಣ ಸಿ.ಎನ್. ಬಾಲಕೃಷ್ಣ ಸ್ವರೂಪ್ ಪ್ರಕಾಶ್ ಅನುದಾನ ತಾರತಮ್ಯದ ಆರೋಪ ಮಾಡುತ್ತಲೇ ಇದ್ದಾರೆ. ‘ಹಾಸನ ಮಹಾನಗರ ಪಾಲಿಕೆಗೆ ಸರ್ಕಾರ ಅನುದಾನ ಒದಗಿಸಿಲ್ಲ. ಅಧಿವೇಶನದಲ್ಲಿ ಪ್ರಸ್ತಾಪಿಸಿದರೂ ಗಮನ ಹರಿಸಿಲ್ಲ’ ಎಂದು ಸ್ವರೂಪ್ ದೂರಿದರೆ ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಸಂದಿದೆ. ಆದರೆ ಶಾಸಕರಿಗೆ ಅನುದಾನ ನೀಡುವಲ್ಲಿ ಆಡಳಿತ ಪ್ರತಿಪಕ್ಷ ಶಾಸಕರು ಎಂಬ ತಾರತಮ್ಯ ಮಾಡಲಾಗುತ್ತಿದೆ’ ಎಂದು ಸಿ.ಎನ್. ಬಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಮಳೆ ಎತ್ತಿನಹೊಳೆ ಕಾಮಗಾರಿಯಿಂದ ಕ್ಷೇತ್ರದಲ್ಲಿ ಅತಿಹೆಚ್ಚು ಹಾನಿಯಾಗಿದೆ. ಕ್ಷೇತ್ರಕ್ಕೆ ಕನಿಷ್ಠ ₹1 ಸಾವಿರ ಕೋಟಿ ವಿಶೇಷ ಅನುದಾನ ನೀಡುವಂತೆ ಕೇಳುತ್ತಲೇ ಇದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ’ ಎನ್ನುವುದು ಶಾಸಕ ಸಿಮೆಂಟ್ ಮಂಜು ಆರೋಪ.
Cut-off box - ಡಿಸೆಂಬರ್ನಲ್ಲೇ ಬಿಕ್ಕಟ್ಟು ಒಗ್ಗಟ್ಟು 2024 ರ ಡಿಸೆಂಬರ್ 5 ರಂದು ಜಿಲ್ಲೆಯಲ್ಲಿ ನಡೆದ ಜನಕಲ್ಯಾಣ ಸಮಾವೇಶದ ಮೂಲಕ ಸರ್ಕಾರದಲ್ಲಿ ಬಿಕ್ಕಟ್ಟು ಉಲ್ಬಣಿಸಿತ್ತು. ಸ್ವಾಭಿಮಾನಿ ಸಮಾವೇಶ ನಡೆಸಲು ಮುಂದಾಗಿದ್ದ ಕೆಲ ಸಚಿವರಿಗೆ ತಡೆ ಒಡ್ಡಿದ ಕಾಂಗ್ರೆಸ್ ಹೈಕಮಾಂಡ್ ಸಮಾವೇಶದ ಸೂತ್ರವನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ವಹಿಸಿತ್ತು. ಬರೋಬ್ಬರಿ ಒಂದು ವರ್ಷದ ನಂತರ ಮತ್ತೆ ನಗರದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಬಿಕ್ಕಟ್ಟು ಮಾಯವಾಗಿದ್ದು ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆಯಾಗಿ ಬದಲಾಗಿದೆ. ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಇಬ್ಬರೂ ಶನಿವಾರ (ಡಿ.6) ರಂದು ಒಂದೇ ವಿಮಾನದಲ್ಲಿ ನಗರಕ್ಕೆ ಬರುವ ಸಾಧ್ಯತೆಗಳು ದಟ್ಟವಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.