ADVERTISEMENT

ಮಾತು ಕೊಟ್ಟ ಮೇಲೆ ಮಾಡುತ್ತೇವೆ: ಸಿ.ಎಂ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 16:13 IST
Last Updated 6 ಡಿಸೆಂಬರ್ 2025, 16:13 IST

ಹಾಸನ: ನಾಯಕತ್ವಕ್ಕಾಗಿ ‘ಅಂತರ್ಯುದ್ಧ’ ನಡೆಸುತ್ತಲೇ ‘ಉಪಾಹಾರ ಸಭೆ’ಗಳ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಶನಿವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಿರುವ ಹೇಳಿಕೆಗಳು ರಾಜಕೀಯ ವಲಯದಲ್ಲಿ ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿವೆ.‌ 

‘ಮಾತು ಕೊಡಲ್ಲ. ಕೊಟ್ಟ ಮೇಲೆ ಮಾಡಿಯೇ ಮಾಡುತ್ತೇವೆ’ ಎಂದು ಸಿದ್ದರಾಮಯ್ಯ ಹೇಳಿದರು.

ಹೇಮಾವತಿ ಜಲಾಶಯದ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪ್ರಸ್ತಾಪಿಸಿದ್ದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಕೊಟ್ಟ ಮಾತಿನಂತೆ ನಡೆದುಕೊಂಡ ಸರ್ಕಾರ ಇದ್ದರೆ ಅದು ಕಾಂಗ್ರೆಸ್‌ ಸರ್ಕಾರ’ ಎಂದರು. 

ADVERTISEMENT

‘ಹೇಮಾವತಿ ಜಲಾಶಯದ ಬಳಿ ಉದ್ಯಾನ, ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ’ ಎಂದು ಅವರು ತಿಳಿಸಿದರು.

ಹೊಸ ಪರ್ವ ಮಾಡೋಣ– ಡಿಕೆಶಿ

‘ಮುಂದಿನ ದಿನದಲ್ಲಿ ಮತ್ತೆ ಈ ರಾಜ್ಯದಲ್ಲಿ ಹೊಸ ಶಕ್ತಿ ತುಂಬಿ, ಹೊಸ ಬದಲಾವಣೆ, ಹೊಸ ಪರ್ವ ಮಾಡೋಣ’ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

‘ನಮ್ಮ ಹುಟ್ಟು ನಮ್ಮ ಕೈಯಲ್ಲಿ ಇಲ್ಲ. ಆದರೆ ನಾವು ಮುಟ್ಟಬೇಕಾದ ಗುರಿ ನಮ್ಮ ಕೈಯಲ್ಲೇ ಇದೆ. ನಿಮ್ಮ ವಿಶ್ವಾಸ ಇದೇ ರೀತಿ ಇರಲಿ’ ಎಂದು ಅವರು ಭಾಷಣದ ವೇಳೆ ತಿಳಿಸಿದರು.

ಈ ಕುರಿತು ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದ ಅವರು, ‘ನಾವು ಜನರ ಪರವಾಗಿ ಕೆಲಸ ಮಾಡಿದಾಗ ಮಾತ್ರವಲ್ಲವೇ ಗುರಿ ಮುಟ್ಟುವುದು? ನಮ್ಮ ಸಾಧನೆಗಳು ಜನರನ್ನು ತಲುಪುತ್ತಿವೆ. ಗ್ಯಾರಂಟಿ ಯೋಜನೆಯಿಂದ ಜನರಿಗೆ ₹ 1.11 ಲಕ್ಷ ಕೋಟಿಯಷ್ಟು ತಲುಪುತ್ತಿದ್ದಂತೆ ಗ್ಯಾರಂಟಿ ಸಮಾವೇಶ ಮಾಡಬೇಕು ಎಂದು ನಾನು ಹಾಗೂ ಕೃಷ್ಣ ಬೈರೇಗೌಡರು ಚರ್ಚೆ ಮಾಡುತ್ತಿದ್ದೆವು. ಹೀಗೆ ನಮ್ಮ ಹೊಸ ಆಲೋಚನೆಗಳಿವೆ. ಅವುಗಳನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.