ADVERTISEMENT

ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಣೆ: ಜಿಲ್ಲೆಗೆ ಬರಲು ಸಿಎಂ ನಿರಾಸಕ್ತಿ; ಜನರ ಬೇಸರ

ಚಿದಂಬರಪ್ರಸಾದ್
Published 30 ಜೂನ್ 2025, 7:20 IST
Last Updated 30 ಜೂನ್ 2025, 7:20 IST
ಕಳೆದ ವರ್ಷ ಸೆಪ್ಟೆಂಬರ್‌ 30 ರಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ, ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದರು (ಸಂಗ್ರಹ ಚಿತ್ರ)
ಕಳೆದ ವರ್ಷ ಸೆಪ್ಟೆಂಬರ್‌ 30 ರಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ, ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದರು (ಸಂಗ್ರಹ ಚಿತ್ರ)    

ಹಾಸನ: ಜಿಲ್ಲೆಯ ಜೀವನದಿಯಾಗಿರುವ ಹೇಮಾವತಿ ಜಲಾಶಯ ಭರ್ತಿಯಾಗಲು ಇನ್ನೇನು ಕೆಲವೇ ಅಡಿಗಳು ಬಾಕಿ ಉಳಿದಿವೆ. ಈಗಾಗಲೇ ಕೆಆರ್‌ಎಸ್‌ ಜಲಾಶಯ ಭರ್ತಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ (ಜೂನ್ 30) ಬಾಗಿನ ಅರ್ಪಿಸಲಿದ್ದಾರೆ. ಈ ಬಾರಿಯಾದರೂ ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಮುಖ್ಯಮಂತ್ರಿ ಬರಲಿದ್ದಾರೆಯೇ ಎನ್ನುವ ಚರ್ಚೆ ಆರಂಭವಾಗಿದೆ.

ಕಳೆದ ವರ್ಷ ಹೇಮಾವತಿ ಜಲಾಶಯ ಭರ್ತಿಯಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌.ರಾಜಣ್ಣ, ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದರು. ಆದರೆ, ಮುಖ್ಯಮಂತ್ರಿ ಮಾತ್ರ ಬರಲೇ ಇಲ್ಲ. ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಬಂದು ಹೇಮಾವತಿಗೆ ಬಾಗಿನ ಅರ್ಪಿಸಲಿದ್ದಾರೆ ಎಂಬ ಉಸ್ತುವಾರಿ ಸಚಿವ ರಾಜಣ್ಣ ಅವರ ಭರವಸೆ ಹುಸಿಯಾಗಿತ್ತು.

ಇದೀಗ ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿದೆ. ನಿರ್ದಿಷ್ಟ ಮಟ್ಟವನ್ನು ಕಾಯ್ದುಕೊಂಡು ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಮಳೆ ಇದೇ ರೀತಿ ಮುಂದುವರಿದರೆ, ಇನ್ನು 15 ದಿನಗಳಲ್ಲಿ ಹೇಮಾವತಿ ಜಲಾಶಯ ಭರ್ತಿಯಾಗಲಿದೆ. ಈ ವೇಳೆಗಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಸನಕ್ಕೆ ಬಂದು, ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಿಸಬೇಕು ಎನ್ನುವ ಒತ್ತಾಯಗಳು ಕೇಳಿಬರುತ್ತಿವೆ.

ADVERTISEMENT

ಕಳೆದ ವರ್ಷ ಆಲಮಟ್ಟಿ, ತುಂಗಭದ್ರಾ, ಕಾವೇರಿ ಜಲಾಶಯಗಳಿಗೆ ಬಾಗಿನ ಅರ್ಪಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೇಮಾವತಿಗೆ ಬಾಗಿನ ಅರ್ಪಿಸಲು ಬರಲೇ ಇಲ್ಲ.

49 ವರ್ಷಗಳಲ್ಲಿ ಕಳೆದ ಬಾರಿ 33ನೇ ಬಾರಿ ಹೇಮಾವತಿ ಜಲಾಶಯ ಭರ್ತಿಯಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಿಸಲು ಬರುತ್ತಾರೆ ಎಂಬ ನಂಬಿಕೆಯಲ್ಲಿ ಹಲವು ವಾರ ಜಲಾಶಯ ಗರಿಷ್ಠ ಮಟ್ಟವನ್ನು ಕಾಯ್ದುಕೊಂಡು ಬರಲಾಗಿತ್ತು. ಆದರೆ, ಮುಖ್ಯಮಂತ್ರಿಯ ನಿರೀಕ್ಷೆ, ನಿರೀಕ್ಷೆಯಾಗಿಯೇ ಉಳಿಯಿತು.

ಉದ್ಯಾನ ಅಭಿವೃದ್ಧಿಗೆ ಮನವಿ: ಕೆಆರ್‌ಎಸ್‌ ಮಾದರಿಯಲ್ಲಿಯೇ ಗೊರೂರಿನ ಹೇಮಾವತಿ ಜಲಾಶಯದ ಮುಂಭಾಗದಲ್ಲಿಯೂ ಉದ್ಯಾನ ನಿರ್ಮಾಣ ಮಾಡಬೇಕು ಎನ್ನುವ ಒತ್ತಾಯ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ.

ಮುಖ್ಯಮಂತ್ರಿ ಬಾಗಿನ ಅರ್ಪಿಸಲು ಬಂದಲ್ಲಿ, ಈ ಬಗ್ಗೆ ಸ್ಥಳ ವೀಕ್ಷಣೆ ಮಾಡಿದಂತಾಗಲಿದ್ದು, ಉದ್ಯಾನದ ಅಗತ್ಯತೆಯ ಬಗ್ಗೆ ಮನವರಿಕೆ ಮಾಡಬಹುದು ಎನ್ನುವ ಲೆಕ್ಕಾಚಾರ ಕಾಂಗ್ರೆಸ್ಸಿಗರದ್ದಾಗಿದೆ.

ಹಾಸನ ತಾಲ್ಲೂಕಿನ ಗೊರೂರಿನಲ್ಲಿರುವ ಹೇಮಾವತಿ ಜಲಾಶಯದಿಂದ ಶುಕ್ರವಾರ ಬೆಳಿಗ್ಗೆ 6 ಕ್ರಸ್ಟ್‌ಗೇಟ್‌ಗಳ ಮೂಲಕ ನೀರನ್ನು ನದಿಗೆ ಬಿಡಲಾಯಿತು
ಹೇಮಾವತಿ ಜಲಾಶಯದ ನೀರು ಮಾತ್ರ ಎಲ್ಲರಿಗೂ ಬೇಕು. ತಮಿಳುನಾಡಿಗೆ ನೀರು ಕೊಡಬೇಕಾದರೆ ಹೇಮಾವತಿ ನೆನಪಾಗುತ್ತದೆ. ಆದರೆ ಬಾಗಿನ ಕೊಡುವುದಕ್ಕೆ ಮಾತ್ರ ಸಿಎಂ ಬರುತ್ತಿಲ್ಲ.
– ಅಮಿತ್‌ ಶೆಟ್ಟಿ ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ
ಕೆಆರ್‌ಎಸ್‌ಗೆ ಮುಖ್ಯಮಂತ್ರಿ ಬಾಗಿನ ಅರ್ಪಿಸಲಿದ್ದು ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಬರುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಮನವಿ ಮಾಡಲಾಗುವುದು.
– ದೇವರಾಜೇಗೌಡ ಕಾಂಗ್ರೆಸ್‌ ಜಿಲ್ಲಾ ವಕ್ತಾರ
ಹೇಮಾವತಿ ನದಿಯ ಜೊತೆಗೆ ಜಿಲ್ಲೆಯ ಜನರ ಅವಿನಾಭಾವ ಸಂಬಂಧವಿದೆ. ಕಳೆದ ಬಾರಿಯೂ ಮುಖ್ಯಮಂತ್ರಿ ಬಂದಿಲ್ಲ. ಈ ಬಾರಿಯಾದರೂ ಬಂದು ಬಾಗಿನ ಅರ್ಪಿಸಲಿ.
– ರಘು ಹೊಂಗೆರೆ ಜೆಡಿಎಸ್‌ ಜಿಲ್ಲಾ ವಕ್ತಾರ

ಜಿಲ್ಲಾ ಉಸ್ತುವಾರಿ ಸಚಿವರ ನಿರಾಸಕ್ತಿ

ಇನ್ನು ಹಾಸನ ಜಿಲ್ಲೆಯ ಉಸ್ತುವಾರಿಯೇ ಬೇಡ ಎಂದಿರುವ ಸಚಿವ ಕೆ.ಎನ್‌. ರಾಜಣ್ಣ ಕೂಡ ಈ ವರ್ಷ ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಬರುವ ಸಾಧ್ಯತೆಗಳು ಕಡಿಮೆ ಎನ್ನುವ ಮಾತುಗಳು ಕಾಂಗ್ರೆಸ್‌ ವಲಯದಲ್ಲಿಯೇ ಕೇಳಿ ಬರುತ್ತಿವೆ. ಮಳೆ ಹಾನಿಯಾದ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸದರೆ ಹೊರತು ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಬರಲೇಇಲ್ಲ. ಬೂಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್‌ ಅವರ ಅಭಿನಂದನಾ ಸಮಾರಂಭದಲ್ಲೂ ಅವರು ಭಾಗವಹಿಸಲಿಲ್ಲ. ಇನ್ನು ವಿವಿಧ ಜಯಂತಿ ಸರ್ಕಾರಿ ಕಾರ್ಯಕ್ರಮಗಳಿಂದಲೂ ರಾಜಣ್ಣ ದೂರ ಉಳಿದಿದ್ದು ಹೇಮಾವತಿಗೆ ಬಾಗಿನ ಅರ್ಪಿಸಲು ಬರುವುದು ಅನಿಶ್ಚಿತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.