ADVERTISEMENT

ಸಿಒಡಿ ತನಿಖೆಗೆ ಒತ್ತಾಯ

ಜಿ.ಪಂ ಅಧ್ಯಕ್ಷೆ ಅಧಿಕಾರವಧಿಯಲ್ಲಿ ಅಕ್ರಮ: ಎಚ್‌.ಪಿ. ಸ್ವರೂಪ್‌ ಆರೋಪ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 14:03 IST
Last Updated 5 ಸೆಪ್ಟೆಂಬರ್ 2020, 14:03 IST
ಎಚ್‌.ಪಿ. ಸ್ವರೂಪ್‌ 
ಎಚ್‌.ಪಿ. ಸ್ವರೂಪ್‌    

ಹಾಸನ: ‘ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್‌ ಅಧಿಕಾರವಧಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸಿಒಡಿ ತನಿಖೆ ನಡೆಸಬೇಕು’ ಎಂದು ಉಪಾಧ್ಯಕ್ಷ ಎ.ಪಿ.ಸ್ವರೂಪ್‌ ಆಗ್ರಹಿಸಿದರು.

‘ಕಚೇರಿಯ ಲಿಫ್ಟ್ ಅಳವಡಿಕೆ, ಪ್ರವಾಸ ಭತ್ಯೆಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದೆ. ಈ ಬಗ್ಗೆ ಮುಖ್ಯ
ಕಾರ್ಯನಿರ್ವಾಹಕ ಅಧಿಕಾರಿ ಸರ್ಕಾರಕ್ಕೆ ವರದಿ ನೀಡಿ, ಸಿಒಡಿ ತನಿಖೆ ನಡೆಸಬೇಕು. ಸಾರ್ವಜನಿಕ ತೆರಿಗೆ ಹಣ
ಪೋಲಾಗುವುದು ಸರಿಯಲ್ಲ ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಅಧ್ಯಕ್ಷರ ವಿವೇಚನಾ ಕೋಟಾದಡಿ ಬಿಡುಗಡೆಯಾದ ಅನುದಾನವನ್ನು ತಮಗೆ ಇಷ್ಟ ಬಂದಂತೆ ಬಳಸಿದ್ದಾರೆ.
ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹10 ಲಕ್ಷ ಹಂಚಿಕೆ ಮಾಡುವ ಕುರಿತು ಶಾಸಕರ ಸಭೆಯಲ್ಲಿ ತೀರ್ಮಾನಿಸಿದ್ದರೂ
ಅಧಿಕಾರಿಗಳನ್ನು ಹೆದರಿಸಿ ಅದಕ್ಕೆ ತಡೆಯೊಡ್ಡಿದ್ದಾರೆ. ಕನಿಷ್ಟ ಪ್ರತಿ ಸದಸ್ಯರಿಗೆ ಎರಡು ಲಕ್ಷ ರೂಪಾಯಿ ಅನುದಾನ
ನೀಡಬಹುದಿತ್ತು’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಸೆ.5 ರ ಶಿಕ್ಷಕರ ದಿನಾಚರಣೆಯಂದು ಸರ್ಕಾರಿ ರಜೆ ಎಂದು ತಿಳಿದಿದ್ದರೂ ಉದ್ದೇಶ ಪೂರ್ವಕವಾಗಿ ಜಿಲ್ಲಾ ಪಂಚಾಯಿತಿ
ವಿಶೇಷ ಸಭೆ ದಿನಾಂಕ ನಿಗದಿ ಮಾಡಲಾಗಿದೆ. ಶಿಕ್ಷಕರ ದಿನಾಚರಣೆಯಲ್ಲಿ ಪ್ರತಿ ತಾಲ್ಲೂಕಿನಲ್ಲಿಯೂ ಕಾರ್ಯಕ್ರಮಗಳು
ನಡೆಯುತ್ತವೆ. ಶಾಸಕರು, ಸದಸ್ಯರು ಹಾಗೂ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವುದು ಕಡ್ಡಾಯ. ಇದರಿಂದ ಸಭೆಗೆ ಬರಲು ಸಾಧ್ಯವಾಗಿಲ್ಲ’ ಎಂದು ವಿವರಿಸಿದರು.

‘ಅಧ್ಯಕ್ಷರು ಪ್ರತಿ ಬಾರಿ ವಿಶೇಷ ಸಭೆ ಕರೆಯುವ ಬದಲಿಗೆ ಸಾಮಾನ್ಯ ಸಭೆ ನಿಗದಿಪಡಿಸಿದರೆ ಹಾಜರಾಗಲು ಸಿದ್ಧ. ಇಂದಿನ ಸಭೆಗೆ ಕಾಂಗ್ರೆಸ್‌ನ ಬಹುತೇಕ ಸದಸ್ಯರು ಗೈರಾಗಿದ್ದಾರೆ’ ಎಂದು ಹೇಳಿದರು.‌ ಜಿಲ್ಲಾ ಪಂಚಾಯಿತಿ ಸದಸ್ಯ ಲೋಕೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.