ಹೆತ್ತೂರು: ಕಾಫಿ ತೋಟದ ಕೆಲಸದಲ್ಲಿ ಕಾರ್ಮಿಕರ ಅಚಾತುರ್ಯದಿಂದ ಔಷಧಿಯ ಬದಲು ಕಳೆನಾಶಕವನ್ನು ಸಿಂಪಡಿಸಿ. ಸುಮಾರು 2 ಎಕರೆ ಕಾಫಿ ತೋಟ ಸುಟ್ಟು ಕರಕಲಾಗಿದೆ. ₹ 6 ಲಕ್ಷಕ್ಕೂ ಹೆಚ್ಚು ಮೌಲ್ಯದ ಕಾಫಿ ಬೆಳೆ ನಾಶವಾಗಿದೆ.
ಯಸಳೂರು ಹೋಬಳಿ ಯಡಿಕೆರೆ ಗ್ರಾಮದ ಕಾಫಿ ಬೆಳೆಗಾರ ವೈ.ಕೆ ಸುಬ್ಬೆಗೌಡರ ಎರಡು ಎಕರೆ ತೋಟದಲ್ಲಿ ರೋಬೊಸ್ಟ್ ಕಾಫಿ ಬೆಳೆಗೆ ಮಳೆಗಾಲದಲ್ಲಿ ಕಾಂಟಪ್ ಔಷಧಿ ಸಿಂಪಡಿಸುವ ಯೋಚನೆಯಲ್ಲಿದ್ದರು. ಜೋರು ಮಳೆ ಇದ್ದ ಕಾರಣ ಔಷಧಿಯ ಜೊತೆಗೆ ಅಂಟು ದ್ರಾವಣ ಮಿಶ್ರಣ ಮಾಡಿ, ಸಿಂಪಡಿಸಲು ಮುಂದಾದ ಸುಬ್ಬೆಗೌಡರು. ಹೊರಗಿನಿಂದ ಬಂದ ಕೂಲಿ ಕಾರ್ಮಿಕರಿಗೆ ಗುತ್ತಿಗೆ ನೀಡಿದ್ದರು.
ಒಂದೇ ಕೊಠಡಿಯಲ್ಲಿ ಅಂಟು ದ್ರವ ಹಾಗೂ ಕಳೆನಾಶಕ ಇಟ್ಟಿದ್ದು, ಕೂಲಿಕಾರ್ಮಿಕರಿಗೆ ಸರಿಯಾಗಿ ತಿಳಿಯದೇ ಅಂಟು ದ್ರಾವಣದ ಬದಲು, ಕಳೆನಾಶಕವನ್ನು ಸೇರಿಸಿ ಕಾಫಿ ಗಿಡಕ್ಕೆ ಔಷಧಿ ಸಿಂಪಡಿಸಲಾಗಿದೆ. ಇದರಿಂದ ಫಸಲಿಗೆ ಬಂದ ರೋಬಸ್ಟ ಕಾಫಿ ಗಿಡ ಸಂಪೂರ್ಣ ನಾಶವಾಗಿವೆ.
ಕಾಫಿ ತೋಟಕ್ಕೆ ವಲಳಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾಲೀಕ ವೈ.ಕೆ. ಸುಬ್ಬೇಗೌಡರಿಗೆ ಸಾಂತ್ವನ ಹೇಳುವುದರೊಂದಿಗೆ, ಕಾಫಿ ಮಂಡಳಿಯ ಅಧಿಕಾರಿ ಜೊತೆ ಮಾತನಾಡಿ, ವಿಜ್ಞಾನಿಗಳಿಂದ ಕೈಗೊಳ್ಳಬೇಕಾದ ಸೂಕ್ತ ಕ್ರಮದ ಬಗ್ಗೆ ತಿಳಿಸಲಾಗುವುದು. ಔಷಧಿಯ ವೆಚ್ಚವನ್ನು ವಳಲಹಳ್ಳಿ ಬೆಳೆಗಾರರ ಸಂಘದಿಂದ ಭರಿಸುವುದಾಗಿ ಎಚ್.ಡಿ.ಪಿ.ಎ. ಮಾಜಿ ಸಂಘಟನಾ ಕಾರ್ಯದರ್ಶಿ ಕೆ.ಪಿ. ಕೃಷ್ಣೆಗೌಡ ಹಾಗೂ ವಳಲಹಳ್ಳಿ ಗ್ರಾಮಪಂಚಾಯಿತಿ ಬೆಳೆಗಾರರ ಸಂಘದ ಖಜಾಂಚಿ ಹಿರದನಹಳ್ಳಿ ಹೂವಣ್ಣ ಗೌಡ ಭರವಸೆ ನೀಡಿದರು.
ಬೆಳೆಗಾರರ ಸಂಘದ ಅಧ್ಯಕ್ಷ ಎಂ. ಕೆ.ದರ್ಶನ್, ಗೌರವಾಧ್ಯಕ್ಷ ವಿ.ಬಿ. ರಮೇಶ್, ಕಾರ್ಯದರ್ಶಿ ಅರುಣ್ಗೌಡ, ನಿರ್ದೇಶಕರಾದ ವಸಂತ್ ಬೊಮ್ಮನಕೆರೆ ಹಾಗೂ ಚೀರಿ ಕಿರಣ್, ಆದರ್ಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.