ಹಾಸನ: ಕೋವಿಡ್ ರೋಗದಿಂದ ಸಂಪೂರ್ಣ ಗುಣಮುಖರಾಗಿ ಸೋಮವಾರ ಕರ್ತವ್ಯಕ್ಕೆ ಹಾಜರಾದ ನಗರಸಭೆ ಎಂಜಿನಿಯರ್ ಕವಿತಾ ಅವರಿಗೆ ಸಹೋದ್ಯೋಗಿಗಳು ಹೂಗುಚ್ಛ ನೀಡಿ ಸಂಭ್ರಮದಿಂದ ಸ್ವಾಗತಿಸಿದರು.
ಕೊರೊನಾ ಸೋಂಕಿಗೆ ತುತ್ತಾಗಿ ಅಧಿಕಾರಿ ಹೋಂ ಐಸೋಲೇಷನ್ನಲ್ಲಿದ್ದರು.ಬೆಳಿಗ್ಗೆ ಕಚೇರಿಗೆ ಬಂದ ಅವರಿಗೆ ಅಧಿಕಾರಿಗಳು, ಸಿಬ್ಬಂದಿ ಚಪ್ಪಾಳೆ ತಟ್ಟಿ, ಹೂ ಮಾಲೆ ಹಾಕಿ ಬರ ಮಾಡಿಕೊಂಡರು.
‘ಕೋವಿಡ್ ಕಾಣಿಸಿಕೊಂಡ ತಕ್ಷಣ ಹೆದರಬಾರದು. ಅದು ಭಯ ಇರುವವರಿಗೆ ಮಾತ್ರ ಅದು ಒಂದು ಕಾಯಿಲೆಯಾಗಿ
ಕಾಣಿಸುತ್ತದೆ. ಆದರೆ, ಕೊರೊನಾ ವೈರಸ್ ಬಗ್ಗೆ ಎಲ್ಲರಿಗೂ ಅರಿವಿರಬೇಕು. ಎಚ್ಚರಿಕೆ ವಹಿಸಿ, ಜೀವನ ಮಾಡಿದರೆ ಕೊರೊನಾ ಸುಲಭವಾಗಿ ಗೆಲ್ಲಬಹುದು’ಎಂದು ಕವಿತಾ ಹೇಳಿದರು.
‘ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡಾಗ ಸ್ವಯಂ ಕ್ವಾರಂಟೈನ್ ಆಗಬೇಕು. ಅಂತರ ಪಾಲನೆಗೆ ಆದ್ಯತೆ ನೀಡಬೇಕು. ಬೇರೆಯವರಿಗೆ ಸೋಂಕು ಹರಡುವುದನ್ನು ತಡೆಯಬಹುದು. ಧೈರ್ಯದಿಂದ ಎದುರಿಸಿದರೆ, ಆರೋಗ್ಯವಂತರಾಗಿ ಹೊರಬರಬಹುದು ಎನ್ನುವುದಕ್ಕೆ ನಾನೇ ಸಾಕ್ಷಿ’ಎಂದು ನುಡಿದರು.
ನಗರಸಭೆ ಆಯುಕ್ತ ಕೃಷ್ಣಮೂರ್ತಿ, ಆರೋಗ್ಯ ನಿರೀಕ್ಷಕ ಆದಿಶ್ , ಪೌರಕಾರ್ಮಿಕರ ಸಂಘದ ಅಧ್ಯಕ್ಷ ಯೋಗೇಶ್, ಮಾರ, ಪರಶುರಾವ್, ದೇವರಾಜ್ ಹಾಗೂ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.