ADVERTISEMENT

ಹಾಸನ: ಕೋವಿಡ್‌ ಎರಡನೇ ಅಲೆ, ಎಚ್ಚರಿಕೆ ಅಗತ್ಯ

ಆಸರೆ ಫೌಂಡೇಷನ್‌ ವಾರ್ಷಿಕೋತ್ಸವದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್‌. ಶ್ವೇತಾ ದೇವರಾಜ್‌

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 13:48 IST
Last Updated 29 ನವೆಂಬರ್ 2020, 13:48 IST
ಹಾಸನದಲ್ಲಿ ಆಸರೆ ಫೌಂಡೇಷನ್‌ನ 2ನೇ ವಾರ್ಷಿಕೋತ್ಸವದ ಅಂಗವಾಗಿ ಕೊರೊನಾ ಸೇನಾನಿಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಹಾಸನದಲ್ಲಿ ಆಸರೆ ಫೌಂಡೇಷನ್‌ನ 2ನೇ ವಾರ್ಷಿಕೋತ್ಸವದ ಅಂಗವಾಗಿ ಕೊರೊನಾ ಸೇನಾನಿಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು.   

ಹಾಸನ: ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಅನ್ಯ ರಾಜ್ಯ ಹಾಗೂ ವಿದೇಶಗಳಲ್ಲಿ ಎರಡನೇ ಅಲೆ ಆರಂಭವಾಗಿದೆ. ಹಾಗಾಗಿ ಮತ್ತಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್‌. ಶ್ವೇತಾ ದೇವರಾಜ್‌ ಸಲಹೆ ನೀಡಿದರು.

ಆಸರೆ ಫೌಂಡೇಷನ್‌ನ 2ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ನಗರದ ಸೀತಾ ರಾಮಾಂಜನೇಯ ದೇವಾಲಯದ ಸಪ್ತಪದಿ ಸೌದಾಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೊರೊನಾ ಸೇನಾನಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೋವಿಡ್‌ ರೋಗ ಕಾಣಿಸಿಕೊಂಡ ಆರಂಭದಲ್ಲಿ ಬಹುತೇಕರು ಮನೆಯಿಂದ ಹೊರಗೆ ಬರಲು ಭಯ ಪಡುತ್ತಿದ್ದರು. ಅಂತಹ ಸಂದರ್ಭದಲ್ಲಿಯೂ ತಮ್ಮ ಕುಟುಂಬದಿಂದ ದೂರ ಇದ್ದು, ಜನರ ಒಳಿತಿಗಾಗಿ ದುಡಿದ ವೈದ್ಯರು, ದಾದಿಯರು, ಪೌರಕಾರ್ಮಿಕರು, ಪೊಲೀಸ್‌ ಸಿಬ್ಬಂದಿ ಹಾಗೂ ಪತ್ರಕರ್ತರ ಸೇವೆ ಶ್ಲಾಘನೀಯ ಎಂದರು.

ADVERTISEMENT

ಡಾ.ಬಿ.ಆರ್‌. ಅಂಬೇಡ್ಕರ್‌ ಹೇಳುವಂತೆ ದೇಶದಲ್ಲಿ ಗುಡಿ, ಗೋಪುರ ಹೆಚ್ಚಾಗಿ ಕಟ್ಟಿಸುವ ಬದಲು ಆಸ್ಪತ್ರೆಗಳು ಮತ್ತುಶಾಲೆಗಳನ್ನು ದೇಶದಲ್ಲಿ ಹೆಚ್ಚು ನಿರ್ಮಿಸಿದರೆ ಕೋವಿಡ್‌ ವಿರುದ್ಧ ಇನ್ನೂ ಪರಿಣಾಮಕಾರಿಯಾಗಿ ಹೋರಾಡಬಹುದಿತ್ತು. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೋವಿಡ್‌ನಿಂದ ಉಂಟಾದ ಸಾವು, ನೋವುಗಳ ಸಂಖ್ಯೆ ಕಡಿಮೆ ಎಂದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್‌. ನಂದಿನಿ ಮಾತನಾಡಿ, ಕೊರೊನಾ ಸೋಂಕಿನಿಂದಾಗಿ ಅನೇಕರ ಬದುಕು ಬೀದಿಗೆ ಬಂತು. ಅಂತಹ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರು, ಸಂಘ ಸಂಸ್ಥೆಗಳು, ದಾನಿಗಳು ಮುಂದೆ ಬಂದು ಉಚಿತವಾಗಿ ಮಾಸ್ಕ್‌, ಸ್ಯಾನಿಟೈಸರ್‌, ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿ ಮಾನವೀಯತೆ ಮೆರೆದರು ಎಂದು ನುಡಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕೃಷ್ಣಮೂರ್ತಿ ಮಾತನಾಡಿ, ಕೋವಿಡ್‌ ಸಂದರ್ಭದಲ್ಲಿ ದಾದಿಯರು, ವೈದ್ಯರು ಪ್ರಾಣದ ಹಂಗು ತೊರೆದು ಹಗಲು– ರಾತ್ರಿ ಸೇವೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ 120 ಜನ ಸಿಬ್ಬಂದಿಗೆ ಕೊರೊನಾ ಪಾಸಿಟಿವ್‌ ಬಂದರೂ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ. ಕೆಲವೇ ದಿನಗಳಲ್ಲಿ ಕೋವಿಡ್‌ಗೆ ಲಸಿಕೆ ಬರಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಆಸರೆ ಫೌಂಡೇಷನ್‌ ಜಿಲ್ಲಾಧ್ಯಕ್ಷ ಗುರುಪ್ರಸಾದ್‌ ಕಾಮತ್‌, ಗೌರವಾಧ್ಯಕ್ಷ ಬಿ.ಆರ್‌. ಉದಯ್‌ಕುಮಾರ್‌,
ಕಾರ್ಯದರ್ಶಿ ವಿನೋದ್‌ ಕುಮಾರ್‌, ಜನಪ್ರಿಯ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಅನೂಪ್‌, ಆನಂದ ದಾಸ್‌ ಲ್ಯಾಬ್‌ನಎಚ್‌.ಆರ್‌. ದೇವದಾಸ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.