ಹಿರೀಸಾವೆ: ಹೋಬಳಿಯಲ್ಲಿ ಸೆಪ್ಟೆಂಬರ್ನಲ್ಲಿ ಉಷ್ಣಾಂಶ 28 ರಿಂದ 30 ಡಿಗ್ರಿ ಸೆಲ್ಸಿಯಸ್ ಇದ್ದು, ಬಿಸಿಲಿನ ತಾಪಕ್ಕೆ ರಾಗಿ, ಜೋಳದ ಪೈರು ಒಣಗಲಾರಂಭಿಸಿದೆ. 20 ದಿನಗಳಿಂದ ವಾಡಿಕೆಯಂತೆ ಮಳೆಯಾಗದೇ ರೈತರು ಆಕಾಶ ನೋಡುತ್ತಿದ್ದಾರೆ.
ಈ ಭಾಗದಲ್ಲಿ ಮಳೆ ಆಶ್ರಯದಲ್ಲಿ ಜುಲೈನಿಂದ ನವೆಂಬರ್ ತಿಂಗಳವರೆಗೆ ರಾಗಿ, ಜೋಳ, ಅವರೆ ಬೆಳೆಗಳನ್ನು ರೈತರು ಬೆಳೆಯುತ್ತಾರೆ. ಜುಲೈ ಕೊನೆಯ ವಾರ ಮತ್ತು ಆಗಸ್ಟ್ ಮೊದಲ ವಾರದಲ್ಲಿ ಬಿದ್ದ ಅಲ್ಪ ಮಳೆಗೆ ಶೇ 70 ರಷ್ಟು ರೈತರು ದೀರ್ಘಾವಧಿಯ ರಾಗಿ ಬಿತ್ತನೆ ಮಾಡಿದ್ದರು. ಆಗಸ್ಟ್ ಎರಡನೇ ವಾರದಿಂದ ಸೆಪ್ಟೆಂಬರ್ನಲ್ಲಿ ಇದುವರೆಗೆ ಮಳೆಯಾಗದೇ ಕೆಲವು ರೈತರು ರಾಗಿ, ಹುರಳಿ ಬಿತ್ತನೆ ಮಾಡಲು ಆಗಿಲ್ಲ.
ಅಲ್ಪಾವಧಿ ರಾಗಿ ಬಿತ್ತನೆ ಮಾಡಲು ಹೊಲವನ್ನು ಸಿದ್ದತೆ ಮಾಡಿಕೊಂಡು ಮಳೆಗಾಗಿ ಕಾಯುತ್ತಿದ್ದಾರೆ. ಕೊಳವೆಬಾವಿಯಲ್ಲಿ ಹೆಚ್ಚು ನೀರು ಇರುವ ಕೆಲವು ರೈತರು, ರಾಗಿ ಬೆಳೆಗೆ ತುಂತುರು ನೀರಾವರಿ ಮೂಲಕ ನೀರು ಹಾಯಿಸಿ, ರಾಗಿ ಪೈರು ರಕ್ಷಣೆಯಲ್ಲಿ ನಿರತರಾಗಿದ್ದಾರೆ.
ಹದವಾದ ಮಳೆಯಾಗಿದ್ದರೆ, ಈ ಸಮಯಕ್ಕೆ ರಾಗಿ ಪೈರು ಬೆಳೆದು ರಾಗಿ ತೆನೆ (ಹೊಡೆ) ಹೊರಡಬೇಕಿತ್ತು. ಮಳೆ ಬೀಳದೇ ರಾಗಿ ಪೈರು ಬೆಳವಣಿಗೆಯಲ್ಲಿ ಕುಂಠಿತವಾಗಿದೆ.
ಈ ವಾರದಲ್ಲಿ ಮಳೆ ಆಗದಿದ್ದರೆ ರಾಗಿ ಪೈರ್ ಬೆಳೆಯಲ್ಲ, ಫಸಲೂ ಬರುವುದಿಲ್ಲ. ಇದರಿಂದ ಮುಂದಿನ ಜನವರಿ ನಂತರ ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ಹೋಬಳಿ ರೈತರು. ಮಳೆ ಬರುವ ನಿರೀಕ್ಷೆಯಲ್ಲಿರುವ ರೈತರು ಯೂರಿಯಾ ಗೊಬ್ಬರವನ್ನು ಕಳೆದ ವಾರವೇ ಖರೀದಿಸಿ, ಮನೆಯಲ್ಲಿಟ್ಟಿದ್ದಾರೆ.
ಮಹಾಲಯ ಅಮಾವಾಸ್ಯೆಗೆ ಮೊದಲು ರಾಗಿ ತೆನೆ ಹೊಡೆಯಬೇಕಿತ್ತು. ಆದರೆ ಮಳೆಯಾಗದೇ ಪೈರು ಒಣಗಿದೆ. ವಾರದಲ್ಲಿ ಮಳೆಯಾದರೆ ಫಸಲು ಸಂಪೂರ್ಣ ಕಡಿಮೆಯಾದರೂ ಜಾನುವಾರುಗಳಿಗೆ ಅಲ್ಪ ಸ್ವಲ್ಪ ಹುಲ್ಲು ಸಿಗುತ್ತದೆ.ಗೋವಿಂದರಾಜ್ ಹೊಸಹಳ್ಳಿ ಗ್ರಾಮದ ರೈತ
ದೀರ್ಘಾವಧಿಯ ತಳಿಗಳನ್ನು ಬಿತ್ತನೆ ಮಾಡಿದ್ದ ರಾಗಿ ಪೈರು ಮಳೆ ಇಲ್ಲದೇ ಸಂಪೂರ್ಣ ಸುಟ್ಟುಹೋಗಿದೆ. ಅಲ್ಪಾವಧಿ ರಾಗಿ ಮತ್ತು ಹುರುಳಿ ಬಿತ್ತನೆ ಮಾಡಲು ರೈತರು ಮಳೆಯನ್ನು ಕಾಯುತ್ತಿದ್ದಾರೆ.ರಾಮಕೃಷ್ಣ ಹಿರೀಸಾವೆ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.