ADVERTISEMENT

ಹಳೇಬೀಡು: ಪುಷ್ಪಗಿರಿಯಲ್ಲಿ ಆದಿಯೋಗಿ ಶಿವನ ದರ್ಶನ

ಎಚ್.ಎಸ್.ಅನಿಲ್ ಕುಮಾರ್
Published 8 ಮಾರ್ಚ್ 2024, 7:08 IST
Last Updated 8 ಮಾರ್ಚ್ 2024, 7:08 IST
ಹಳೇಬೀಡಿನ ಪುಷ್ಪಗಿರಿ ಮಠದಲ್ಲಿ ಕಾರ್ತಿಕೋತ್ಸವದಲ್ಲಿ ಪ್ರತಿಷ್ಠಾಪಿಸಿರುವ ಆದಿಯೋಗಿ ಶಿವನಮೂರ್ತಿ
ಹಳೇಬೀಡಿನ ಪುಷ್ಪಗಿರಿ ಮಠದಲ್ಲಿ ಕಾರ್ತಿಕೋತ್ಸವದಲ್ಲಿ ಪ್ರತಿಷ್ಠಾಪಿಸಿರುವ ಆದಿಯೋಗಿ ಶಿವನಮೂರ್ತಿ   

ಹಳೇಬೀಡು: ಪುಷ್ಪಗಿರಿ ಬೆಟ್ಟದಲ್ಲಿ ಶ್ರೀಮಠದಿಂದ 108 ಲಿಂಗ ಮಂದಿರ, ದ್ವಾದಶ ಜ್ಯೋತಿರ್ಲಿಂಗಗಳ ಜೊತೆಗೆ ಈಚೆಗೆ 30 ಅಡಿ ಎತ್ತರದ ಆದಿಯೋಗಿ ಶಿವನ ಮೂರ್ತಿ ಪ್ರತಿಷ್ಠಾಪಿಸಿದ್ದು, ಪುಷ್ಪಗಿರಿ ಭೂ ಕೈಲಾಸದಂತೆ ಕಂಗೊಳಿಸುತ್ತಿದೆ.

ವಸ್ತ್ರಾಭರಣದಿಂದ ಕೂಡಿದ ಶಿವನಮೂರ್ತಿಯನ್ನು ಎಲ್ಲೆಡೆ ನೋಡಬಹುದು. ಸೃಷ್ಟಿಯಲ್ಲಿ ಮೊದಲ ಯೋಗಿಯಾದ ಶಿವ ಆದಿಯೋಗಿಯಾಗಿದ್ದನು. ಶಿವ ಅಲಂಕಾರ ಸ್ವರೂಪಿಯಲ್ಲ. ಶಿವ ನಿರಾಡಂಬರನಾಗಿ ಸೃಷ್ಟಿಯ ಏಳಿಗೆಗೆ ಶ್ರಮಿಸಿದ ದೇವರಾಗಿದ್ದಾನೆ. ಭಕ್ತರಿಗೆ ಶಿವನ ನಿಜ ಸ್ವರೂಪ ತಿಳಿಸುವುದರೊಂದಿಗೆ ಮನಃಶಾಂತಿ ದೊರಕಬೇಕು ಎಂದು ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಭಕ್ತರ ಸಹಕಾರದಿಂದ ನಿರ್ಮಿಸಿದ ಆದಿಯೋಗಿ ಮೂರ್ತಿ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಶಿವನಾಮ ಸ್ಮರಣೆ ಮಾಡುತ್ತ ಬೃಹತ್ ಮಂದಿರದ 108 ಲಿಂಗ ದರ್ಶನ ಮಾಡಿದರೆ, ಮನಸ್ಸು ಪರಿಶುದ್ಧವಾಗುತ್ತದೆ. ಕೃಷ್ಣ ಶಿಲೆಯಿಂದ ಕೆತ್ತಿರುವ ಲಿಂಗಗಳು ಆಕರ್ಷಣೀಯವಾಗಿವೆ.

ADVERTISEMENT

ಜ್ಯೋತಿರ್ಲಿಗ ದರ್ಶನ: ಭಕ್ತರು ದೇಶದ ವಿವಿಧೆಡೆಗೆ ತೆರಳಿ ದರ್ಶನ ಮಾಡುವ 12 ದ್ವಾದಶ ಜ್ಯೋತಿರ್ಲಿಂಗಗಳನ್ನು ಪುಷ್ಪಗಿರಿಯಲ್ಲಿಯೇ ನೋಡುವ ಅವಕಾಶ ಕಲ್ಪಿಸಲಾಗಿದೆ. ಕರಿ ಗುರುಬಸವೇಶ್ವರ ಅಜ್ಜಯ್ಯ ಮಂದಿರದ ಮುಂಭಾಗ ಎರಡು ಬದಿಯಲ್ಲಿ ಎರಡು ಪ್ರತ್ಯೇಕ ಮಂಟಪಗಳಲ್ಲಿ ಜ್ಯೋತಿರ್ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ.

ಕಾಶಿ ವಿಶ್ವನಾಥ, ಉಜ್ಜಯಿನಿಯ ಮಹಾಕಾಳೇಶ್ವರ, ನರ್ಮದಾ ನದಿ ತೀರದ ಓಂಕಾರೇಶ್ವರ, ಹೀಮಾಲಯದ ಶ್ರೇಣಿಯ ಕೇದಾರನಾಥ, ಮಹಾರಾಷ್ಟ್ರದ ಭೀಮಾಶಂಕರ, ಜಾರ್ಖಂಡ್‌ನ ವೈದ್ಯನಾಥ, ಉತ್ತರಖಂಡನಲ್ಲಿರುವ ಆಗೇಶ್ವರ, ತಮಿಳುನಾಡಿನ ರಾಮೇಶ್ವರ, ರಾಜಸ್ಥಾನದ ಗ್ರೀಶ್ನೇಶ್ವರ, ಶ್ರೀಶೈಲ ಮಲ್ಲಿಕಾರ್ಜುನ, ಗುಜರಾತಿನ ಸೋಮನಾಥೇಶ್ವರ ದರ್ಶನಕ್ಕೆ ಪುಷ್ಪಗಿರಿ ಮಠ ಅವಕಾಶ ಕಲ್ಪಿಸಿದೆ. ಪುಷ್ಪಗಿರಿಯ ಜ್ಯೋತಿರ್ಲಿಂಗ ದರ್ಶನ ಮಾಡುವುದರಿಂದ 12 ಪುಣ್ಯಕ್ಷೇತ್ರ ದರ್ಶನ ಮಾಡಿದ ಪುಣ್ಯಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ.

ಹೊಯ್ಸಳರ ಕಾಲದ ಮಲ್ಲಿಕಾರ್ಜುನ ಸ್ವಾಮಿ ದೇವಾಲಯವೂ ಪುಷ್ಪಗಿರಿಯಲ್ಲಿದೆ. ನಿಸರ್ಗತಾಣವಾದ ಪುಷ್ಪಗಿರಿ ಬೆಟ್ಟ ಏರಿದಾಕ್ಷಣ ಮನಸ್ಸು ಪರಿಶುದ್ಧವಾಗುತ್ತದೆ ಎಂಬ ಮಾತು ಭಕ್ತರಿಂದ ಕೇಳಿ ಬರುತ್ತದೆ.

ಹಳೇಬೀಡಿನ ಪುಷ್ಪಗಿರಿ ಮಠದಲ್ಲಿರುವ 108 ಶಿವಲಿಂಗಗಳು
ಹಳೇಬೀಡಿನ ಪುಷ್ಪಗಿರಿ ಮಠದ 108 ಲಿಂಗ ಮಂದಿರದ ಪ್ರಧಾನ ಲಿಂಗ
ಭಕ್ತರ ಮನಃ ಶಾಂತಿಗಾಗಿ ಆದಿಯೋಗಿ ಶಿವ 108 ಲಿಂಗ ದ್ವಾದಶ ಜ್ಯೋತಿರ್ಲಿಂಗ ಹಾಗೂ ಕರಿ ಗುರು ಬಸವೇಶ್ವರ ಅಜ್ಜಯ್ಯ ಮಂದಿರ ನಿರ್ಮಿಸಲಾಗಿದೆ.
-ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಪುಷ್ಪಗಿರಿ ಮಠ
ಭಕ್ತರ ಶ್ರೇಯಸ್ಸೆ ಮುಖ್ಯ ಎನ್ನುವ ದೇವನಾಗಿರುವುದರಿಂದ ಶಿವನನ್ನು ಎಲ್ಲರೂ ಮೆಚ್ಚುತ್ತಾರೆ. ಆದಿಯೋಗಿ ಸ್ಥಾಪಿಸಿರುವ ಪುಷ್ಪಗಿರಿ ಶಿವ ಭಕ್ತರ ಮೆಚ್ಚಿನ ತಾಣವಾಗಿದೆ
ಕುಮಾರ ಸ್ವಾಮಿ ಪುಷ್ಪಗಿರಿ ಮಠದ ಆಡಳಿತಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.