
ಬೇಲೂರು: ದತ್ತ ಮಾಲಾಧಾರಿಗಳು ಇಲ್ಲಿನ ಚನ್ನಕೇಶವ ದೇಗುಲದ ಆವರಣದಲ್ಲಿ ಗುರುವಾರ ಪೂಜೆ ಸಲ್ಲಿಸಿ ಯಾತ್ರೆ ಮುಂದುವರಿಸಿದರು.
ಅರೇಹಳ್ಳಿ, ಸಕಲೇಶಪುರ, ಕೊಡಗು ಜಿಲ್ಲೆಯ ಮಾಲಾಧಾರಿಗಳು 50ಕ್ಕೂ ಹೆಚ್ಚು ವಾಹನಗಳಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿ ಯಾತ್ರೆ ತೆರಳಿದರು.
ಶಾಸಕ ಎಚ್. ಕೆ. ಸುರೇಶ್ ಮಾತನಾಡಿ, ‘ದತ್ತಮಾಲಾ ಧಾರಣೆ, ಯಾತ್ರೆ ಕೇವಲ ಒಂದು ಧಾರ್ಮಿಕ ವ್ರತವಲ್ಲ, ಇದು ಶಿಸ್ತು, ತ್ಯಾಗ ಮತ್ತು ಸಂಸ್ಕಾರದ ಸಂಕೇತವಾಗಿದೆ. ಯುವಕರು ಇಂತಹ ವ್ರತಗಳಲ್ಲಿ ಪಾಲ್ಗೊಳ್ಳುವುದರಿಂದ ಸಮಾಜದಲ್ಲಿ ಶಾಂತಿ, ಸಹಕಾರ ಮತ್ತು ಮಾನವೀಯ ಮೌಲ್ಯಗಳು ಹೆಚ್ಚಾಗುತ್ತವೆ. ನಮ್ಮ ಸಂಪ್ರದಾಯ, ನಮ್ಮ ನಂಬಿಕೆ ಮತ್ತು ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸೇತುವೆಯೇ ದತ್ತಯಾತ್ರೆ. ಸರ್ಕಾರವು ದತ್ತಪೀಠ ಹಿಂದೂಗಳ ಧರ್ಮಪೀಠ ಎಂದು ಈಗಾಗಲೇ ಘೋಷಣೆ ಮಾಡಿದ್ದು, ಅತಿ ಶೀಘ್ರದಲ್ಲೇ ಸಂಪೂರ್ಣವಾಗಿ ಹಿಂದೂಗಳ ಎರಡನೇ ಅಯೋಧ್ಯೆಯಾಗಲಿದೆ. ನಾನು 10 ವರ್ಷಗಳಿಂದ ದತ್ತಪೀಠದ ಸೇವಕನಾಗಿ, ದರ್ಶನ ಮಾಡಿಕೊಂಡು ಬರುತ್ತಿದ್ದೇನೆ’ ಎಂದರು.
ವಿಶ್ವ ಹಿಂದೂ ಪರಿಷತ್ ಸಂಚಾಲಕ ನಾಗೇಶ್ ಮಾತನಾಡಿ, ‘ದತ್ತಪೀಠದ ಭಗವಾನ್ ದತ್ತಾತ್ರೇಯ ಹಿಂದೂಗಳ ಆರಾಧ್ಯ ದೇವರಾಗಿದ್ದು , ಸರ್ಕಾರ ಹಾಗೂ ನ್ಯಾಯಾಲಯ ಹಿಂದೂಗಳ ಧರ್ಮಪೀಠ ಎಂದು ಈಗಾಗಲೇ ಘೋಷಣೆ ಮಾಡಿವೆ. ಕೆಲವು ದಿನಗಳಲ್ಲಿ ಹಿಂದೂಗಳ ಪವಿತ್ರ ಪೀಠ ಆಗುವುದರಲ್ಲಿ ಸಂದೇಹವಿಲ್ಲ’ ಎಂದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೌರಿ ಸಂಜಯ್ ಮಾತನಾಡಿ, ‘ಬ್ರಹ್ಮ, ವಿಷ್ಣು, ಮಹೇಶ್ವರರ ಅವತಾರವಾದ ಗುರು ದತ್ತಾತ್ರೇಯ ಹಿಂದೂಗಳ ಆರಾಧ್ಯ ದೇವರು’ ಎಂದರು.
ಬಿಜೆಪಿ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಶೋಭಾಗಣೇಶ್, ಬಿಜೆಪಿ ಮುಖಂಡ ತೆಂಡೇಕೆರೆ ರಮೇಶ್ , ವಿಶ್ವಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.