ಹಾಸನ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆ.15 ರಂದು ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಭಾನುವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿಯಿಂದ ಏರ್ಪಡಿಸಲಾಗಿದ್ದ ಬೈಕ್ ರ್ಯಾಲಿಗೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹಸಿರು ನಿಶಾನೆ ತೋರಿದರು.
ಸ್ವತಃ ಬೈಕ್ ಚಲಾಯಿಸುವ ಮೂಲಕ ನಗರದಲ್ಲಿ ಸಂಚರಿಸಿದ ಕೆ.ಎಸ್. ಲತಾಕುಮಾರಿ, ಡೈರಿ ವೃತ್ತದಲ್ಲಿ ತಂಡವನ್ನು ಬೆಂಗಳೂರಿಗೆ ಬೀಳ್ಕೊಟ್ಟರು.
ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬೈಕ್ ಚಾಲಕರಿಗೆ ಅಭಿನಂದನೆ. ಲೈನ್ ಶಿಸ್ತು ಪಾಲನೆ ಮಾಡಿ, ವೇಗ ಮಿತಿಯಲ್ಲಿ ಚಾಲನೆ ಮಾಡುವುದರ ಜೊತೆಗೆ ಸುರಕ್ಷಿತವಾಗಿ ಹಿಂದಿರುಗಿ ಬನ್ನಿ ಎಂದು ಹಾರೈಸಿದರು.
ಪ್ರಾರಂಭದಲ್ಲಿ ಮೌನ ಆಚರಿಸುವ ಮೂಲಕ ಮೊಸಳೆ ಹೊಸಹಳ್ಳಿಯಲ್ಲಿ ಗಣೇಶ ಮೆರವಣಿಗೆಯ ದುರಂತದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ದೂದ್ಪೀರ್ ಹಾಗೂ ಮತ್ತಿತರರು ಹಾಜರಿದ್ದರು.
ಬೈಕ್ ರ್ಯಾಲಿಯು ಜಿಲ್ಲಾಧಿಕಾರಿ ಕಚೇರಿಯಿಂದ ಪ್ರಾರಂಭಗೊಂಡು ಎನ್.ಆರ್. ಸರ್ಕಲ್, ಹೇಮಾವತಿ ಪ್ರತಿಮೆ, ಚರ್ಚ್ ಸರ್ಕಲ್, ಗಂಧದಕೋಠಿ ಸರ್ಕಲ್, ಕಲಾ ಕಾಲೇಜು, ಎಂ.ಜಿ. ರಸ್ತೆಯಲ್ಲಿ ಸಾಗಿ ಡೈರಿ ಸರ್ಕಲ್ಗೆ ಪೂರ್ಣಗೊಂಡಿತು. ಅಲ್ಲಿಂದ ಬೈಕ್ ರ್ಯಾಲಿಯನ್ನು ಬೀಳ್ಕೊಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.