ADVERTISEMENT

ವದಂತಿಗಳಿಗೆ ಕಿವಿ ಕೊಡಬೇಡಿ: ಎಚ್.ಎಲ್. ಮಲ್ಲೇಶಗೌಡ

ಕಸಾಪ ಜಿಲ್ಲಾ ಘಟಕದ ಧ್ಯಕ್ಷ ಸ್ಥಾನದ ಆಕಾಂಕ್ಷಿ ಎಚ್.ಎಲ್. ಮಲ್ಲೇಶಗೌಡ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 14:49 IST
Last Updated 8 ಮಾರ್ಚ್ 2021, 14:49 IST
ಎಚ್‌.ಎಲ್‌. ಮಲ್ಲೇಶಗೌಡ
ಎಚ್‌.ಎಲ್‌. ಮಲ್ಲೇಶಗೌಡ   

ಹಾಸನ: ‘ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನನ್ನ ಬಗ್ಗೆ ಸ್ನೇಹಿತರು ಅಪಪ್ರಚಾರ ಮಾಡುತ್ತಿದ್ದು, ಮತದಾರರು ವದಂತಿಗಳಿಗೆ ಕಿವಿಗೊಡಬಾರದು’ಎಂದು ಆಕಾಂಕ್ಷಿ ಎಚ್.ಎಲ್. ಮಲ್ಲೇಶಗೌಡ ಹೇಳಿದರು.

‘60 ವರ್ಷದ ನಾನು 36 ವರ್ಷಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದೇನೆ. ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತಿ ಹೊಂದಿದ ಬಳಿಕ ಕನ್ನಡ ಸಾಹಿತ್ಯ ಪರಿಷತ್ ಕಡೆಗೆ ಒಲವು ತೋರಿದ್ದೇನೆ. ಆದರೆ, ಸ್ನೇಹಿತರೇ ಸ್ಪರ್ಧೆ ವಿಚಾರವಾಗಿ ಕಪೋಲಕಲ್ಪಿತ ಸುದ್ದಿಗಳ ಹರಿಬಿಡುತ್ತಿದ್ದಾರೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

‘ನನ್ನ ಹಾಗೂ ಪತ್ನಿ ಸಂಬಳ ಸೇರಿ ತಿಂಗಳಿಗೆ ₹5 ಲಕ್ಷ . ಆದಾಯ ಬರುತ್ತಿದೆಯಾದರೂ ಒಂದೂವರೆ ಲಕ್ಷ ರೂಪಾಯಿ ತೆರಿಗೆ ಕಟ್ಟುತ್ತಿದ್ದೇನೆ. ಪರಿಷತ್‍ನ್ನು ರಾಜಕೀಯ ಕ್ಷೇತ್ರವಾಗಿ ಪರಿವರ್ತಿಸುವ ಯಾವ ಉದ್ದೇಶವೂ ನನಗಿಲ್ಲ. ಚುನಾವಣೆಗೆಸಂಬಂಧಿಸಿದಂತೆ ಯಾವ ಆಣೆ, ಪ್ರಮಾಣ ಮಾಡಿಲ್ಲ. ಪಕ್ಷಾತೀತ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಮತದಾರರು ವದಂತಿಗಳಿಗೆ ಕಿವಿಕೊಡಬಾರದು’ ಎಂದು ಹೇಳಿದರು.

ADVERTISEMENT

‘ಕನ್ನಡ ಸಾಹಿತ್ಯ ಪರಿಷತ್‍ಗೆ ಹೊಸ ರೂಪು ನೀಡಬೇಕೆಂಬ ಉದ್ದೇಶದಿಂದ ಸ್ಪರ್ಧಿಸುತ್ತಿದ್ದೇನೆ. ಪರಿಷತ್ತಿನ ಎಲ್ಲ ಪ್ರಕ್ರಿಯೆಗಳನ್ನು ಪಾರದರ್ಶಕವಾಗಿ ಇರಿಸುತ್ತೇನೆ. ಪರಿಷತ್‌ ಹೆಸರಿನಲ್ಲಿ ಕೊಡುವ ಪ್ರಶಸ್ತಿಗಳಿಗೆ ಅಧಿಕೃತ ಮಾನ್ಯತೆ ದೊರಕಿಸಿಕೊಡುವುದು. ಜಿಲ್ಲೆಯ ಲೇಖಕರ ಹಾಗೂ ಜನಪದ ಕಲಾವಿದರ ಮಾಹಿತಿ ಕೋಶ ರಚಿಸುವುದು. ನಾಡು-ನುಡಿಗೆ ಸಂಬಂಧಿಸಿದ ನ್ಯಾಯಯುತ ಹೋರಾಟಗಳಲ್ಲಿ ಕನ್ನಡಪರ ಸಂಘಟನೆಗಳ ಬೆನ್ನಿಗೆ ನಿಲ್ಲಲಾಗುವುದು’ ಎಂದರು.

ಗೋಷ್ಠಿಯಲ್ಲಿ ಎನ್‍ಡಿಆರ್‌ಕೆ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪುಟ್ಟರಾಜು,ನಾಗೇಶ್, ಜಯರಾಂ, ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.