ADVERTISEMENT

ವಿಷ್ಣು ಸ್ಮಾರಕ: ಉಡಾಫೆ ಮಾತು ಬೇಡ, ಅನಿರುದ್ಧ್‌ಗೆ ಕುಮಾರಸ್ವಾಮಿ ತಿರುಗೇಟು 

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2018, 7:34 IST
Last Updated 28 ನವೆಂಬರ್ 2018, 7:34 IST
   

ಹಾಸನ: ‘ನಟ ವಿಷ್ಣುವರ್ಧನ್‌ ಅವರ ಅಳಿಯ ಅನಿರುದ್ಧ ಮಾತಿನಿಂದ ನೋವಾಗಿದೆ.ನನ್ನನ್ನ ಉಡಾಫೆ ಸಿಎಂ ಎಂದಿದ್ದಾರೆ. ಪದ ಬಳಕೆಯ ಬಗ್ಗೆ ಅವರು ಗಾಂಭೀರ್ಯತೆ ಬೆಳೆಸಿಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಮಂಗಳವಾರ ನಿಧನರಾದ ಜೆಡಿಎಸ್‌ ಮುಖಂಡ ಪ್ರಕಾಶ್‌ ಅವರ ಅಂತಿಮ ದರ್ಶನ ಪಡೆದು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಸ್ಮಾರಕ ನಿರ್ಮಾಣ ಮಾಡಲಿ ಎಂದು ಅನಿರುದ್ಧ್‌ ಹೇಳಿದ್ದಾರೆ. ಆದರೆ,ವಿಷ್ಣುವರ್ಧನ್ ನಿಧನರಾದಾಗ ನಾನು ಅಧಿಕಾರದಲ್ಲಿ ಇರಲಿಲ್ಲ.ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಲು ಅವರ ಕುಟುಂಬವೇ ನಿರ್ಧರಿಸಿತ್ತು’ ಎಂದರು.

‘ಭೇಟಿಗೆ ನಾನು ಸಮಯ ಕೊಡಲಿಲ್ಲಾ ಎಂದು ಹೇಳಿದ್ದಾರೆ. ಅವರು ನನ್ನನ್ನು ಕೇಳಿ ಬಂದಿದ್ದರಾ? ಇಲ್ಲವಲ್ಲ. ನಾವು ಶಾಂತಿಯಿಂದ ಇರುತ್ತೇವೆ ಎಂದು ನಮ್ಮಮೇಲೆ ದಬ್ಬಾಳಿಕೆ ಮಾಡಬೇಡಿ. ಈ ವಿಷಯವನ್ನು ರಾಜಕೀಯಗೊಳಿಸಿದರ್ಪ ದವಲತ್ತು ತೋರಿಸುವುದು ಬೇಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಸ್ಮಾರಕ ನಿರ್ಮಾಣದ ಬಗ್ಗೆ ಸರ್ಕಾರದ ಜೊತೆ ಮಾತನಾಡಿ ಎಂದು ಆಗ ನಾನೇ ಅಂಬರೀಷ್‌ ಅವರ ಬಳಿ ಹೇಳಿದ್ದೆ. ಅಲ್ಲದೆ, ಮುಖ್ಯಮಂತ್ರಿಯಾಗಿದ್ದಯಡಿಯೂರಪ್ಪ ಅವರಿಗೂ ಖುದ್ದಾಗಿ ಫೋನ್‌ ಮಾಡಿ ಈ ಬಗ್ಗೆ ಮಾತನಾಡಿದ್ದೆ. ಹಿಂದಿನ ವಿಚಾರ ಏನೇ ಇರಲಿ, ಈಗ ವಿಷ್ಣುವರ್ಧನ್‌ ಸ್ಮಾರಕ ನಿರ್ಮಿಸುವ ಬಗ್ಗೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ವಿವರಿಸಿದರು.

ಆತ್ಮಕ್ಕೆ ಶಾಂತಿ ಸಿಗಲಿ : ‘ಉತ್ತಮ ಜನಪ್ರತಿನಿಧಿಯಾಗಿ ಕೆಲಸಮಾಡಿದ್ದ ರಾಜಕಾರಣಿ ಪ್ರಕಾಶ್‌.ಸರಳ ಸಜ್ಜನಿಕೆಯಿಂದ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದರು. ಜವರಾಯನ ಕರೆಯನ್ನು ಗೆದ್ದು ಇಷ್ಟು ವರ್ಷ ನಮ್ಮೊಂದಿಗೆ ಕೆಲಸ ಮಾಡಿದ್ದರು.ಅವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ’ ಎಂದು ಪ್ರಾರ್ಥಿಸಿದರು.

ಮೇಕೆದಾಟು ಯೋಜನೆ: ‘ಮೇಕೆದಾಟು ನೀರಾವರಿ ಯೋಜನೆಗೆ ಅನುಮತಿ ನೀಡಿದ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು. ಈ ಬಗ್ಗೆ ಪ್ರಧಾನಿ ಮತ್ತು ಕೇಂದ್ರ ಜಲ ಸಂಪನ್ಮೂಲ ಇಲಾಖೆ ಜೊತೆ ಮಾತನಾಡಿದ್ದೇವೆ. ವಿಸ್ತೃತಾ ಯೋಜನಾ ವರದಿಯನ್ನು (ಡಿಪಿಆರ್‌) ತಯಾರಿಸಲು ಕೇಂದ್ರ ಸರ್ಕಾರ ಹೇಳಿದೆ. ಕೂಡಲೇ ಈ ಬಗ್ಗೆ ಕೆಲಸ ಮಾಡಲು ಸಿದ್ಧರಿದ್ದೇವೆ. ನಾವೇನು ಕಾಲಹರಣ ಮಾಡುತ್ತಿಲ್ಲ. ಯಡಿಯೂರಪ್ಪ ಈ ಬಗ್ಗೆ ರಾಜಕೀಯ ಹೇಳಿಕೆ ನೀಡುವುದನ್ನು ನಿಲ್ಲಿಸಲಿ’ ಎಂದು ಮುಖ್ಯಮಂತ್ರಿ ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.