ಹಾಸನ: ನಗರಸಭೆ ಹಿಂಭಾಗದ ಜಾಗದಲ್ಲಿ ನಡೆಯುವ ಐತಿಹಾಸಿಕ ದನಗಳ ಜಾತ್ರೆಗೆ ಸೋಮವಾರ ಚಾಲನೆ ನೀಡಲಾಯಿತು.
ನಗರದ ಹಾಸನಾಂಬ ಕಲಾಕ್ಷೇತ್ರದಿಂದ ಆರಂಭಗೊಂಡ ರಾಸುಗಳ ಮೆರವಣಿಗೆಗೆ ನಗರಸಭೆ ಅಧ್ಯಕ್ಷ ಆರ್. ಮೋಹನ್ ಪೂಜೆ ಸಲ್ಲಿಸಿ, ಈಡುಗಾಯಿ ಒಡೆದು ಚಾಲನೆ ನೀಡಿದರು.ಹಳ್ಳಿಕಾರ್, ಅಮೃತ ಮಹಲ್, ಮಲ್ನಾಡ್ ಗಿಡ್ಡ ಇತರ ತಳಿಯ ರಾಸುಗಳು ಪ್ರಮುಖ ಆಕರ್ಷಣೆ.ಅನ್ನದಾತನ ಒಡನಾಡಿಗಳಾದ ಲಕ್ಷಾಂತರ ಮೌಲ್ಯದ ಸದೃಢ, ಮೈಕಟ್ಟಿನ ಎತ್ತುಗಳನ್ನು ಜಾತ್ರಾ ಸ್ಥಳಕ್ಕೆ ಕರೆ ತರಲಾಗಿದೆ
ಮಂಗಳ ವಾದ್ಯ, ಜಾನಪದ ಕಲಾ ತಂಡಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ರಾಸುಗಳ ಮೆರವಣಿಗೆ ನಡೆಸಿ, ನಗರಸಭೆ ಕಚೇರಿ ಹಿಂಭಾಗದ ದನಗಳ ಜಾತ್ರೆ ನಡೆಯುವ ಸ್ಥಳಕ್ಕೆಕರೆತರಲಾಯಿತು. ಹಾಸನ ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆಗಳಿಂದಲೂ ರೈತರು ತಮ್ಮ ರಾಸುಗಳನ್ನು ಕರೆತಂದಿದ್ದಾರೆ. ರಾಸುಗಳ ಕೊಂಬಿಗೆ ಹೂವು, ಬಲೂನುಗಳನ್ನು ಕಟ್ಟಿ ಸಿಂಗರಿಸಲಾಗಿತು.
ಆರ್. ಮೋಹನ್ ಮಾತನಾಡಿ, ಈ ತಿಂಗಳು 29ರ ವರೆಗೆ ಜಾತ್ರೆ ನಡೆಯಲಿದೆ. ಕುಡಿಯುವನೀರು, ರಸ್ತೆ, ವಿದ್ಯುತ್ ದೀಪ ಸೌಕರ್ಯಗಳನ್ನು ಒದಗಿಸಲಾಗಿದೆ. ಕೊನೆ ದಿನ ಉತ್ತಮರಾಸುಗಳಿಗೆ ಬಹುಮಾನ ನೀಡಲಾಗುವುದು ಎಂದು ಹೇಳಿದರು.
ನಗರಸಭೆ ಸದಸ್ಯರಾದ ಚಂದ್ರಶೇಖರ್, ಶಂಕರಾನಂದ, ಸಂತೋಷ್ ಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.