ಹೊಳೆನರಸೀಪುರ: ಶಾಲೆಗಳಲ್ಲಿ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಅಗತ್ಯವಾದ ಶಿಕ್ಷಣ ನೀಡುವ ಅಗತ್ಯ ಇದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕ ಉಮೇಶ್ ತಿಳಿಸಿದರು.
ಶನಿವಾರ ಶ್ರೀಲಕ್ಷ್ಮೀನರಸಿಂಹ ವಿದ್ಯಾಸಂಸ್ಥೆಯ 35ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ವಿದ್ಯೆ ಜೊತೆಗೆ ದೇಶಪ್ರೇಮ, ದೇಶಭಕ್ತಿ, ರಾಮಾಯಣ, ಮಹಾಭಾರತ, ಭಗವದ್ಗೀತೆಯ ಸಾರವನ್ನು ವಿದ್ಯಾ ಭಾರತಿ ಸಂಘಟನೆಯ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಿವರಿಸಲಾಗುತ್ತಿದೆ. ನಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಪ್ರಪಂಚದ ವಿವಿಧ ದೇಶಗಳಲ್ಲಿ ದೊಡ್ಡ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಸ್ರೋದಲ್ಲಿ ನಮ್ಮಲ್ಲಿ ಕಲಿತ ಐವರು ವಿದ್ಯಾರ್ಥಿಗಳು ವಿಜ್ಞಾನಿಗಳಾಗಿದ್ದಾರೆ ಎಂದರು.
ಆರ್.ಎಸ್.ಎಸ್ನ ಯೋಗ ಶಿಕ್ಷಕ ನಾಮದೇವ್ ಮಾತನಾಡಿ, ಪುಸ್ತಕದಲ್ಲಿರುವ ಪಾಠಗಳನ್ನು ಕಲಿತರೆ ಮಾತ್ರ ವಿದ್ಯಾವಂತರೆನಿ ಸಿಕೊಳ್ಳುವುದಿಲ್ಲ. ನಾವು ಮಾಡುವ ಪ್ರತೀ ಕೆಲಸದಲ್ಲೂ ಕಲಿಯಲು ಅವಕಾಶ ಇರುತ್ತದೆ. ಹೂವು ಮಾರುತ್ತಿದ್ದ ನಾನು ಮಾರಾಟದಲ್ಲಿನ ಶಿಕ್ಷಣವನ್ನು ಕಲಿತು ಮಾರಾಟ ಸಂಸ್ಥೆಯನ್ನು ಪ್ರಾರಂಭಿಸಿ 1,500 ಜನರಿಗೆ ಉದ್ಯೋಗ ನೀಡಿದ್ದೇನೆ. ವಿದ್ಯಾರ್ಥಿಗಳಿಗೆ ಎಲ್ಲದರಿಂದಲೂ ಕಲಿಯುವ ಉತ್ಸಾಹ ಇರಬೇಕು. ನಾವು ಕೆಲಸ ಮಾಡುವ ಸ್ಥಳದಲ್ಲಿ ಸಮಯ ಆಯಿತು ಎಂದು ಮಾಡುವ ಕೆಲಸವನ್ನು ಅರ್ಧಕ್ಕೆ ಬಿಟ್ಟು ಹೋಗಬಾರದು ಎಂದರು.
ಸಂಸ್ಥೆಯ ಸಂಸ್ಥಾಪಕ ಕಾಯದರ್ಶಿ ಹೊ.ಸು. ರಮೇಶ್ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ವಿದ್ಯೆ ಜೊತೆಗೆ ಯೋಗ ಸಂಸ್ಕಾರವನ್ನೂ ಕಲಿಸುತ್ತಿದ್ದೇವೆ ಎಂದರು. ಮುಖ್ಯಶಿಕ್ಷಕ ಸುರೇಶ್ ವಾರ್ಷಿಕ ವರದಿ ಓದಿದರು. ಸಂಸ್ಥೆಯ ಉಮಾ ರಮೇಶ್ ಭಾಗವಹಿಸಿದ್ದರು. ಮಕ್ಕಳು ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.