ADVERTISEMENT

ಕಾಡಾನೆ ಹಾವಳಿ: ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 7:57 IST
Last Updated 3 ಅಕ್ಟೋಬರ್ 2020, 7:57 IST
ಅರಕಲಗೂಡು ತಾಲ್ಲೂಕು ಮಲ್ಲಿಪಟ್ಟಣ ಹೋಬಳಿಯಲ್ಲಿ ಕಾಡಾನೆ ದಾಳಿಗೆ ನಾಶವಾದ ಮುಸುಕಿನ ಜೋಳ
ಅರಕಲಗೂಡು ತಾಲ್ಲೂಕು ಮಲ್ಲಿಪಟ್ಟಣ ಹೋಬಳಿಯಲ್ಲಿ ಕಾಡಾನೆ ದಾಳಿಗೆ ನಾಶವಾದ ಮುಸುಕಿನ ಜೋಳ   

ಅರಕಲಗೂಡು: ತಾಲ್ಲೂಕಿನ ಮಲ್ಲಿಪಟ್ಟಣ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳು ರೈತರ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ತುಳಿದು ಹಾನಿ ಮಾಡಿವೆ.

ಕೊಡಗು ಜಿಲ್ಲೆಯ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕೋಠಿ, ಮದ್ಲಾಪುರ, ಪಾರಸನಹಳ್ಳಿ, ನೆಲಬಳ್ಳಿ ಮುಂತಾದ ಗ್ರಾಮಗಳಲ್ಲಿ ಆನೆಗಳ ಹಿಂಡು ಬೀಡು ಬಿಟ್ಟು ಹಾವಳಿ ಮಾಡುತ್ತಿವೆ.

ಶಾರದಮ್ಮ, ಪುಟ್ಟಸ್ವಾಮಿಗೌಡ, ಸಿದ್ದೆಗೌಡ, ಬಸವರಾಜ್ ಕುಂಜರಿಗವಡ, ಪುಟ್ಟೇಗೌಡ ಮುಂತಾದವರು ಬೆಳೆದಿದ್ದ ಭತ್ತ, ಅಡಿಕೆ, ಕಾಫಿ, ಮುಸುಕಿನ ಜೋಳ ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗಿವೆ.

ADVERTISEMENT

‘ಪ್ರತಿ ವರ್ಷ ಮುಂಗಾರು ಪ್ರಾರಂಭವಾಗುತ್ತಿದ್ದಂತೆ ಸಾಲ ಮಾಡಿ ಕೃಷಿ ಕಾರ್ಯ ನಡೆಸುತ್ತೇವೆ. ಇನ್ನೇನು ಬೆಳೆದ ಫಸಲು ರೈತನ ಕೈಗೆ ಬರಬೇಕು ಎನ್ನುವ ವೇಳೆ ಕಾಡಾನೆಗಳು ದಾಳಿ ನಡೆಸಿ ಬೆಳೆ ಹಾಳು ಮಾಡುತ್ತಿವೆ. ವರ್ಷ ಪೂರ್ತಿ ಶ್ರಮ ಪಟ್ಟು ಬೆಳೆಸಿದ ಬೆಳೆ ಕ್ಷಣಾರ್ಧದಲ್ಲಿ ಕಣ್ಣೆದುರೇ ನಾಶವಾಗುತ್ತಿದೆ’ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

‘ಬೆಳೆ ಹಾನಿಗೆ ಅರಣ್ಯ ಇಲಾಖೆ ನೀಡುವ ಪರಿಹಾರದ ಮೊತ್ತವೂ ಕಡಿಮೆ ಇದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾಗದೆ ಎರಡು ಮೂರು ವರ್ಷಗಳಿಂದ ಹಣ ಕೈಸೇರಿಲ್ಲ. ಸರ್ಕಾರ ಹಾಗೂ ಅರಣ್ಯ ಇಲಾಖೆ ಆನೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಸೂಕ್ತ ಪರಿಹಾರ ನೀಡಬೇಕು’ ಎಂದು ರೈತರಾದ ಪುಟ್ಟಸ್ವಾಮಿಗೌಡ, ಸಿದ್ದೆಗೌಡ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.