ಸಕಲೇಶಪುರ: ಕಾಡಾನೆಗಳ ದಾಳಿಯಿಂದ ತಾಲ್ಲೂಕಿನ ಮಳಲಿ ಹಾಗೂ ರಾಮೇನಹಳ್ಳಿ ಗ್ರಾಮಗಳಲ್ಲಿ ಭತ್ತ, ಕಾಫಿ, ಅಡಿಕೆ, ತೆಂಗು, ಬಾಳೆ ಬೆಳೆ ಹಾನಿಯಾಗುತ್ತಿದೆ. ಅಲ್ಲದೆ, ರಾಮೇನಹಳ್ಳಿ ಗ್ರಾಮದ ಗಣೇಶ್ ಎಂಬ ಯುವಕ ಕೂದಲೆಳೆ ಅಂತರದಲ್ಲಿ ಕಾಡಾನೆ ದಾಳಿಯಿಂದ ಪಾರಾಗಿದ್ದಾರೆ.
ಮನೆಯ ಹಿಂಭಾಗದಲ್ಲಿ ಇದ್ದ ಗಣೇಶ ಅವರನ್ನು ಕಾಡಾನೆ ಅಟ್ಟಿಸಿಕೊಂಡು ಬಂದಿದೆ. ಆನೆ ಕೂಗಿದ ಶಬ್ದಕ್ಕೆ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅದನ್ನು ಕಂಡ ಆನೆ ಏನೂ ಮಾಡದೆ ಹಿಂದಿರುಗಿತು ಗಣೇಶ ಅವರ ತಾಯಿ ರತ್ನಾ ತಿಳಿಸಿದರು.
ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಗಣೇಶ ಅವರಿಗೆ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
26ಕ್ಕೂ ಹೆಚ್ಚು ಆನೆಗಳ ಎರಡು ಗುಂಪು ಒಂದು ವಾರದಿಂದ ಗ್ರಾಮದಲ್ಲೇ ಅಡ್ಡಾಡುತ್ತಾ ಬೆಳೆ ನಾಶ ಮಾಡುತ್ತಿವೆ. ಸಂಜೆ ವೇಳೆ ಮನೆಗಳ ಅಂಗಳ, ಹಿತ್ತಲವರೆಗೂ ಬಂದು ಬಾಳೆ, ತೆಂಗು ಬೆಳೆಯನ್ನು ನಾಶ ಮಾಡುತ್ತಿವೆ.
ರಾಮೇನಹಳ್ಳಿ ಗ್ರಾಮದ ದೇವ ರಾಜು, ಆರ್.ಎಸ್.ಮೂರ್ತಿ, ಈಶ್ವರ್, ಆರ್.ಎಂ.ಚಂದ್ರಶೇಖರ್, ಆರ್.ಪಿ.ಈಶ್ವರ್, ಆರ್.ಸಿ.ಹೇಮಂತ್, ಆರ್.ಪಿ.ಹೇಮಂತ್, ಆರ್.ಇ.ವಿರೂಪಾಕ್ಷ, ಹೊನ್ನೇಶ, ಎಚ್.ಟಿ.ರಂಗಪ್ಪಶೆಟ್ಟಿ, ರುದ್ರೇಶ, ಕಾಳಪ್ಪ, ಬಸವರಾಜು, ಆರ್.ಡಿ.ವೇದಮೂರ್ತಿ, ಆರ್.ಬಿ.ಧರ್ಮ, ಪರಮೇಶ್, ಆರ್.ಇ.ಭೂಷಣ್, ಆರ್.ಎ.ರಾಜಶೇಖರ್, ಲೀಲಾ ಮೊದಲಾದವರ ನಾಟಿ ಮಾಡಿರುವ ಭತ್ತದ ಗದ್ದೆಗೆ ಇಳಿದು ಶೇ 80ರಷ್ಟು ಬೆಳೆಯನ್ನು ಹಾಳು ಮಾಡಿವೆ. ಹಗಲಲ್ಲಿ ಕಾಫಿ ತೋಟಗಳಲ್ಲೇ ಇರುವ ಆನೆಗಳು ಕಾಫಿ, ಅಡಿಕೆ, ಬಾಳೆ, ಬೈನೆ ಮರಗಳನ್ನು ಮುರಿದು ಹಾಕಿದ್ದು, ಸಾವಿರಾದು ಕಾಫಿ ಗಿಡಗಳೂ ನಾಶವಾಗಿವೆ ಎಂದು ಆರ್.ಎಂ.ಚಂದ್ರಶೇಖರ್ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.
ಬೆಳೆ ನಾಶ: ಮಳಲಿ ಗ್ರಾಮದಲ್ಲಿ ಪುಟ್ಟರಾಜು, ನಂದೀಶ್, ಪರಮೇಶ್, ಎಂ.ಎನ್.ಮಂಜು, ಶಾಂತರಾಜು, ಕುಮಾರ, ಸಿದ್ದಪ್ಪಾಚಾರ್, ಕೆಂಚಪ್ಪಾ ಚಾರ್, ಯೋಗೇಶ್ ಮೊದಲಾದವರ ಬೆಳೆಯನ್ನೂ ಆನೆಗಳು ನಾಶ ಮಾಡಿವೆ. ಹಲಸುಲಿಗೆ, ಕಾಟಳ್ಳಿ, ಕೆಲಗಳಲೆ, ಕಿರೇಹಳ್ಳಿ, ಮಠಸಾಗರ ಗ್ರಾಮಗಳಲ್ಲೂ ಕಾಡಾನೆಗಳು ಬೆಳೆ ಹಾನಿ ಮಾಡುತ್ತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.