ಬೇಲೂರು ತಾಲ್ಲೂಕಿನ ಶಿರಗುರ ಗ್ರಾಮ ವ್ಯಾಪ್ತಿಯ ಜಾಕ್ನಳ್ಳಿ ಎಸ್ಟೇಟ್ ಬಳಿ ಮೃತ ಮರಿಯನ್ನು ಸೊಂಡಿಲಿನಿಂದ ಬದುಕಿಸುವ ಪ್ರಯತ್ನ ಮಾಡುತ್ತಿರುವ ತಾಯಿ ಆನೆ.
ಬೇಲೂರು (ಹಾಸನ): ಮರಿ ಸತ್ತು ಮೂರು ದಿನ ಕಳೆದರೂ. ತಾಯಿ ಆನೆ ತಾನು ಹೋದಲೆಲ್ಲ ಮೃತ ಮರಿಯಾನೆಯನ್ನು ಎಳೆದುಕೊಂಡು ಹೋಗುತ್ತಿರುವ ಮನಕಲಕುವ ಘಟನೆ ಬೇಲೂರು ತಾಲ್ಲೂಕು ಅರೇಹಳ್ಳಿ ಹೋಬಳಿಯ ಶಿರಗುರ ಗ್ರಾಮದ ಜಾಕ್ನಳ್ಳಿ ಎಸ್ಟೇಟ್ ಬಳಿ ನಡೆದಿದೆ.
ಶನಿವಾರ ಗರ್ಭಿಣಿ ಹೆಣ್ಣಾನೆ ಮರಿಯಾನೆಗೆ ಜನ್ಮ ನೀಡಿದೆ. ಆದರೆ ಹುಟ್ಟುವ ವೇಳೆ ಮರಿ ಮೃತಪಟ್ಟಿದೆ. ತಾಯಿ ಆನೆ ತನ್ನ ಮರಿ ಜೀವಂತವಾಗಿದೆ ಎಂದು ತಿಳಿದು, ಕಾಲಿನಿಂದ ಒದ್ದು ಬದುಕಿಸುವ ಪ್ರಯತ್ನ ಮಾಡಿದೆ. ಆದರೆ, ಮೃತ ಮರಿ ಮೇಲೇಳದಿರುವುದನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ.
ಜೋರು ಮಳೆ ಸುರಿಯುತ್ತಿರುವುದರ ಜೊತೆಗೆ ಸತ್ತ ಮರಿಯನ್ನು ಎಳೆದುಕೊಂಡು ಹೋಗುತ್ತಿರುವ ದೃಶ್ಯಾವಳಿ ಕಂಡು ಜನರು ಮರಗುತ್ತಿದ್ದಾರೆ.
ತನ್ನ ಕರುಳ ಕುಡಿ ಇನ್ನೂ ಬದುಕಿದೆ ಎಂಬ ಭ್ರಮೆಯಲ್ಲಿರುವ ಆನೆ, ಯಾರನ್ನೂ ಹತ್ತಿರ ಹೋಗಲು ಬಿಡುತ್ತಿಲ್ಲ. ಭಾನುವಾರ ಅರೇಹಳ್ಳಿ ಸಮೀಪದ ಕೆಸಗುಲಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಮರಿಯೊಂದಿಗೆ ತಾಯಿ ಆನೆ ಮೃತಪಟ್ಟಿತ್ತು. ಈ ಘಟನೆ ಮರೆಯುವ ಮುನ್ನವೇ ಮತ್ತೊಂದು ಮರಿ ಮೃತಪಟ್ಟಿರುವುದು ಪ್ರಾಣಿ ಪ್ರಿಯರಿಗೆ ನೋವುಂಟು ಮಾಡಿದೆ.
ಎರಡು ದಿನಗಳ ಹಿಂದೆ ಮೃತಪಟ್ಟ ಮರಿಯೊಂದಿಗೆ ತಾಯಿ ಆನೆ ತೆರಳುತ್ತಿರುವುದು ಬೇಸರ ತಂದಿದೆ. ಹತ್ತಿರ ಹೋಗಲು ಬಿಡುತ್ತಿಲ್ಲ. ಮೃತದೇಹದಿಂದ ವಾಸನೆ ಬಂದರೆ ಆನೆ ತನ್ನಿಂತಾನೆ ಬೇರೆಯಾಗುತ್ತದೆ.ಯತೀಶ್, ಬೇಲೂರು ಆರ್ಎಫ್ಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.