
ಹಾಸನ: ಪರಿಸರ ಸಂರಕ್ಷಣೆ ಮತ್ತು ಪಕ್ಷಿಗಳ ಮೇಲಿನ ಅಪಾರ ಪ್ರೀತಿಯೊಂದಿಗೆ ತಮ್ಮ ಮನೆಯ ಆವರಣದಲ್ಲೇ ವಿವಿಧ ದೇಶಗಳ ಅಪರೂಪದ ಪಕ್ಷಿಗಳನ್ನು ಸಾಕುವ ಮೂಲಕ ಪಕ್ಷಿ ಪ್ರೇಮಿಗಳಿಗೆ ಪ್ರೇರಣೆಯಾಗಿದ್ದಾರೆ ಇಲ್ಲಿನ ಸಾಲಗಾಮೆ ರಸ್ತೆಯ ಯುವಕ ದುರ್ಗಾಪ್ರಸಾದ್.
ತಮ್ಮದೇ ಆದ ವಿಭಿನ್ನ ಹಾದಿಯಲ್ಲಿ ಸಾಗುತ್ತಿರುವವರು ದುರ್ಗಾಪ್ರಸಾದ್ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಬಾಲ್ಯದಿಂದಲೇ ಪರಿಸರ ಕಾಳಜಿ ರಕ್ತದಲ್ಲೇ ಬೆರೆತಿದೆ. ತಾಯಿಯೊಂದಿಗೆ ಗಿಡ ನೆಡುವ ಹವ್ಯಾಸ, ಪರಿಸರ, ಪಕ್ಷಿಯ ಮೇಲಿನ ಪ್ರೀತಿ ಕುಟುಂಬದಿಂದಲೇ ಬಂದಿದ್ದು ಎನ್ನುತ್ತಾರೆ.
ಈ ಒಂದು ಪ್ರಯತ್ನದಿಂದಾಗಿ ಇಂದು ಆಫ್ರಿಕನ್ ಲವ್ ಬರ್ಡ್ಸ್, ಆಸ್ಟ್ರೇಲಿಯದ ಕಾಕ್ಟೇಲ್, ಕನ್ನೂರ್, ಸನ್ ಕೊನುರೆ, ಕ್ರಿಮ್ಸನ್ ಬೆಲ್ಲೆಡ್ ಕೊನೂರೆ, ಪೈನಾಪಲ್ ಕೊನೂರೆ, ಟೊರ್ಕಿಯೋಸಿ ಯಲ್ಲೊ ಸೈಡೆಡ್ ಕೊನೂರೆ, ಜೆನ್ಡೆ ಕೊನೂರೆ ಪ್ರಭೇದದ ಹಕ್ಕಿಗಳನ್ನು ಸಾಕಿದ್ದಾರೆ.
ಈ ಹಕ್ಕಿಗಳು ಸೇರಿದಂತೆ ಒಂದೇ ಜಾತಿಯ 8 ವಿಭಿನ್ನ ಪ್ರಭೇದಗಳ ಸುಮಾರು 22 ಪಕ್ಷಿಗಳನ್ನು ಸಾಕುತ್ತಿದ್ದಾರೆ. ವಿವಿಧ ದೇಶಗಳಿಗೆ ಸೇರಿದ ಪಕ್ಷಿಗಳು ಇವರ ಮನೆಯಲ್ಲಿವೆ. ಜಾಗ ಕಡಿಮೆ, ಹಾಗಾಗಿ ಹೆಚ್ಚಿನ ಹಕ್ಕಿ ಸಾಕಲು ಆಗಿಲ್ಲ.
ಮೈಸೂರಿನಲ್ಲಿ ಉದ್ಯೋಗ ಮಾಡುತ್ತಿರುವ ದುರ್ಗಾಪ್ರಸಾದ್, ಪ್ರತಿ ಶನಿವಾರ, ಭಾನುವಾರ ಸಂಪೂರ್ಣ ಸಮಯವನ್ನು ಪಕ್ಷಿಗಳ ಆರೈಕೆಗೆ ಮೀಸಲಿಡುತ್ತಾರೆ. ವಾರದ ಇತರೆ ದಿನಗಳಲ್ಲಿ ತಂದೆ–ತಾಯಿ ಪಕ್ಷಿಗಳ ಜವಾಬ್ದಾರಿ ವಹಿಸಿಕೊಂಡು ಮಗನ ಪಕ್ಷಿ ಪ್ರೇಮಕ್ಕೆ ಬೆಂಬಲವಾಗಿ ನಿಂತಿದ್ದಾರೆ.
ದುರ್ಗಾಪ್ರಸಾದ್ ಸಾಕುತ್ತಿರುವ ಕೆಲವು ಪಕ್ಷಿಗಳು ಮಿಮಿಕ್ರಿ ಮಾಡುವ ವಿಶೇಷ ಗುಣ ಹೊಂದಿದ್ದು, ಕೊಳಲು, ವಯೋಲಿನ್ ಸೇರಿದಂತೆ ವಿವಿಧ ವಾದ್ಯಗಳ ಧ್ವನಿಯನ್ನು ಅನುಕರಿಸುವ ಸಾಮರ್ಥ್ಯವನ್ನೂ ಹೊಂದಿವೆ. ಕೆಲವು ಪಕ್ಷಿಗಳು ಈಗಾಗಲೇ 9 ತಿಂಗಳಿಂದ 2-3 ವರ್ಷ ವಯಸ್ಸಿನದ್ದಾಗಿವೆ. ಬಹುತೇಕ ಪಕ್ಷಿಗಳ ಆಯುಷ್ಯ 15 ವರ್ಷದಿಂದ 30 ವರ್ಷಗಳವರೆಗೆ ಇರುತ್ತದೆ.
ಈವರೆಗೆ ಪಕ್ಷಿಗಳ ಖರೀದಿ, ಬೋನ್ ನಿರ್ಮಾಣ ಮತ್ತು ಆರೈಕೆಗೆ ಸುಮಾರು ₹80 ಸಾವಿರ . ವೆಚ್ಚವಾಗಿದೆ. ಕೆಲ ಸ್ನೇಹಿತರೂ ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಕಾರಂಜಿ ಕೆರೆ ಪಾರ್ಕ್ನಲ್ಲಿ ಹಕ್ಕಿಗಳಿಗೆ ಪ್ರತ್ಯೇಕ ಬೃಹತ್ ಜಾಗ ಮೀಸಲಿರಿಸಲಾಗಿದೆ. ಇಲ್ಲಿ ಹಕ್ಕಿ ಪ್ರಿಯರು ನವಿಲು, ಗಿಳಿ ಸೇರಿದಂತೆ ಇತರೆ ಹಕ್ಕಿಗಳನ್ನು ಹತ್ತಿರದಿಂದ ನೋಡಬಹುದು. ಹಾಸನದಲ್ಲಿಯೂ ಇದೇ ಮಾದರಿಯ ಬೃಹತ್ ಪಕ್ಷಿ ಉದ್ಯಾನ ಸ್ಥಾಪಿಸುವ ಉದ್ದೇಶವನ್ನು ದುರ್ಗಾ ಪ್ರಸಾದ್ ಹೊಂದಿದ್ದಾರೆ.
ಗೆಂಡೇಕಟ್ಟೆ ಅರಣ್ಯ ಪ್ರದೇಶದಲ್ಲಿ ಜಾಗ ದೊರೆತರೆ ಪಕ್ಷಿ ಪಾರ್ಕ್ ತೆರೆಯಲು ಸಹಕಾರ ದೊರೆಯಲಿದೆ. ಇದರಿಂದ ಪಕ್ಷಿ ಪ್ರಿಯರ ವೀಕ್ಷಣೆಗೆ ಉತ್ತಮ ಅವಕಾಶ ಸಿಗಲಿದೆ.
-ದುರ್ಗಾಪ್ರಸಾದ್ ಪಕ್ಷಿ ಪ್ರೇಮಿ
---
ದುರ್ಗಾಪ್ರಸಾದ್ ಅವರ ಪಕ್ಷಿ ಪ್ರೇಮ ಎಲ್ಲರಿಗೂ ಮಾದರಿ. ವಿವಿಧ ಪ್ರಭೇದ ಪಕ್ಷಿಗಳನ್ನು ಸಾಕಿ ಅವುಗಳ ಕಲರವದಲ್ಲಿ ಸಂತಸ ಕಾಣುತ್ತಾರೆ. ಇಂತಹ ಪ್ರವೃತ್ತಿಯನ್ನು ಯುವ ಪೀಳಿಗೆ ಬೆಳೆಸಿಕೊಳ್ಳಬೇಕು.
-ಆರ್.ಜಿ. ಗಿರೀಶ್ ಪರಿಸರ ಪ್ರೇಮಿ
--
ಹೊರಗೆ ಬಿಡಲು ಸಾಧ್ಯವಿಲ್ಲ
ಇವುಗಳನ್ನು ಹೊರಗಿನ ಪರಿಸರಕ್ಕೆ ಬಿಡಲು ಸಾಧ್ಯವಿಲ್ಲ. ಏಕೆಂದರೆ ಅವು ಹುಟ್ಟಿ ಬೆಳೆದ ದೇಶದ ವಾತಾವರಣ ಮತ್ತು ಆಹಾರ ಪದ್ಧತಿ ಇಲ್ಲಿ ಲಭ್ಯವಿಲ್ಲ’ ಎನ್ನುತ್ತಾರೆ ದುರ್ಗಾಪ್ರಸಾದ್ ‘ಏಕಾಏಕಿ ಇಲ್ಲಿನ ಪರಿಸರಕ್ಕೆ ಹಾರಲು ಬಿಟ್ಟರೆ ಇತರೆ ಪಕ್ಷಿಗಳು ದಾಳಿ ಮಾಡುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಪಕ್ಷಿಗಳಿಗೆ ಅಗತ್ಯವಿರುವ ಸುರಕ್ಷತೆ ಮತ್ತು ಸ್ವಾತಂತ್ರ್ಯ ಎರಡನ್ನೂ ಒದಗಿಸುವ ಉದ್ದೇಶದಿಂದ 8 ಅಡಿ ಎತ್ತರದ ವಿಶೇಷ ಬೋನ್ ನಿರ್ಮಿಸಲಾಗಿದೆ. ಹಾರಾಡಲು ಅವಕಾಶ ಸಮರ್ಪಕ ಆಹಾರ ಮತ್ತು ಸ್ವಚ್ಛತೆ ಎಲ್ಲವೂ ಇಲ್ಲಿ ವ್ಯವಸ್ಥಿತವಾಗಿದೆ’ ಎಂದು ವಿವರಿಸುತ್ತಾರೆ. ‘ಮಂಡ್ಯದ ನಂದಕಿಶೋರ್ ಮೈಸೂರಿನ ಕಾರ್ತಿಕ್ ಸೇರಿದಂತೆ ಹಲವು ಪಕ್ಷಿ ಪ್ರೇಮಿಗಳಿಂದ ವಿವಿಧ ಪಕ್ಷಿಗಳನ್ನು ಖರೀದಿಸಿದ್ದು ಸ್ನೇಹಿತರು ಪರಿಚಿತರಿಂದಲೂ ಪಡೆದುಕೊಂಡಿರುವುದಾಗಿ’ ಅವರು ಹೇಳಿದರು.
***
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.