ADVERTISEMENT

ಪ್ರತಿ ಶುಕ್ರವಾರ ಕಂದಾಯ ಅದಾಲತ್‌: ಮೋಹನ್‌

ಜುಲೈ 2ರಿಂದ 23ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 15:12 IST
Last Updated 29 ಜೂನ್ 2021, 15:12 IST
ಹಾಸನ ನಗರಸಭೆ ಅಧ್ಯಕ್ಷ ಮೋಹನ್  ಮಾತನಾಡಿದರು. ಉಪಾಧ್ಯಕ್ಷೆ ಮಂಗಳಾ ಪ್ರದೀಪ್‌,  ಪೌರಾಯುಕ್ತ ಕೃಷ್ಣಮೂರ್ತಿ, ಎಇಇ ರಂಗಸ್ವಾಮಿ ಇದ್ದಾರೆ.
ಹಾಸನ ನಗರಸಭೆ ಅಧ್ಯಕ್ಷ ಮೋಹನ್  ಮಾತನಾಡಿದರು. ಉಪಾಧ್ಯಕ್ಷೆ ಮಂಗಳಾ ಪ್ರದೀಪ್‌,  ಪೌರಾಯುಕ್ತ ಕೃಷ್ಣಮೂರ್ತಿ, ಎಇಇ ರಂಗಸ್ವಾಮಿ ಇದ್ದಾರೆ.   

ಹಾಸನ: ಸಾರ್ವಜನಿಕರ ಅನುಕೂಲಕ್ಕಾಗಿ ಜುಲೈ 2 ರಿಂದ 23ರ ವರೆಗೆ ಪ್ರತಿ ಶುಕ್ರವಾರ ಆಯಾ ವಾರ್ಡ್‌ಗಳಲ್ಲಿ ಬೆಳಿಗ್ಗೆ 9 ರಿಂದ 1 ಗಂಟೆ ವರೆಗೆ ಕಂದಾಯ ಅದಾಲತ್‌ಹಮ್ಮಿಕೊಳ್ಳಲಾಗಿದೆ ಎಂದು ನಗರಸಭೆ ಅಧ್ಯಕ್ಷ ಆರ್‌. ಮೋಹನ್‌ ಹೇಳಿದರು.

ಇ-ಆಸ್ತಿ ಪಡೆಯುವ ಸಂಬಂಧ ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. 2 ರಂದು1, 2 ಮತ್ತು 3ನೇ ವಾರ್ಡ್ ಜನರಿಗೆ ಶಂಕರಿಪುರಂ ಪಾರ್ಕ್‌ ಹಾಗೂ 34, 35ನೇವಾರ್ಡ್‌ ನವರಿಗೆ ಚನ್ನಪಟ್ಟಣ , 9 ರಂದು 4, 5, 6, 7 ಮತ್ತು 9 ವಾರ್ಡ್ ನಿವಾಸಿಗಳಿಗೆ ಮಿಲಿಟರಿ ಮೆಮೋರಿಯಲ್‌ ಪಾರ್ಕ್, 16 ರಂದು 8, 10, 11, 14ನೇ ವಾರ್ಡ್‌ನವರಿಗೆ ಭಾರತಿ ವಿದ್ಯಾಮಂದಿರ, 23 ರಂದು 12, 13, 15, 16 ವಾರ್ಡ್‌ನವರಿಗೆ (ಜಿಲ್ಲಾ ಒಳ ಕ್ರೀಡಾಂಗಣ) ಹಾಗೂ 17 ರಿಂದ 22ನೇವಾರ್ಡ್‌ನವರಿಗೆ ಮೋಚಿ ಕಾಲೋನಿ ಸಮುದಾಯ ಭವನ , 16 ರಂದು ಗೋಲ್ಡನ್‌ ಪಬ್ಲಿಕ್‌ ಸ್ಕೂಲ್‌ ನಲ್ಲಿ 23 ರಿಂದ 25 ಮತ್ತು 32ನೇ ವಾರ್ಡ್, 9 ರಂದು 26 ರಿಂದ 31 ಹಾಗೂ 33ನೇ ವಾರ್ಡ್ ಜನರಿಂದ ಅರ್ಜಿ ಸ್ವೀಕರಿಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಂದಾಯ ಅದಾಲತ್‌ ನಿಂದಾಗಿ ಕಚೇರಿಗೆ ಅಲೆಯುವುದು ತಪ್ಪುತ್ತದೆ. 30 ಸಾವಿರ ಆಸ್ತಿದಾರರಲ್ಲಿ 12 ಸಾವಿರ ಆಸ್ತಿದಾರರು ಇ-ಖಾತೆ ಮಾಡಿಸಿಕೊಳ್ಳಬೇಕಿದೆ. ಇ-ಖಾತೆಮಾಡಿಸುವುದರಿಂದ ಆಸ್ತಿ ಮಾಲೀಕರು ವಂಚನೆಗೆ ಒಳಗಾಗುವುದು ತಪ್ಪುತ್ತದೆ. ಜುಲೈ 30ರಂದು ಸಹ ನಗರಸಭಾ ಕಚೇರಿ ಆವರಣದಲ್ಲಿ ಇ ಖಾತೆ ಅರ್ಜಿ ಸ್ವೀಕರಿಸಲಾಗುವುದುಎಂದರು.

ADVERTISEMENT

ನಗರದ ಸುತ್ತಮುತ್ತಲಿನ ಕೆರೆಗಳು ಹಾಗೂ ಉದ್ಯಾನ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹144 ಕೋಟಿ ಮಂಜೂರು ಮಾಡಿದೆ. ನಗರಸಭೆಗೆ ಸೇರ್ಪಡೆ ಆಗಿರುವ 25 ಗ್ರಾಮಗಳಲ್ಲಿ ಒಳಚರಂಡಿ ನಿರ್ಮಿಸಲು ₹166 ಕೋಟಿ ಅನುದಾ ನೀಡಿದೆ ಎಂದರು.

ಹಾಸನ ನಗರಕ್ಕೆ 24*7 ಕುಡಿಯುವ ನೀರು ಪೂರೈಸುವ ₹162 ಕೋಟಿ ವೆಚ್ಚದ ಅಮೃತ್‌ ಯೋಜನೆ ಅಡಿ ಮೊದಲ ಹಂತದಲ್ಲಿ 1 ರಿಂದ 17ನೇ ವಾರ್ಡ್ ಗಳ ಕಾಮಗಾರಿಮುಕ್ತಾಯವಾಗಿದೆ. ಎರಡನೇ ಹಂತದಲ್ಲಿ ಉಳಿದ 18 ವಾರ್ಡ್‌ಗಳಿಗೆ ನೀರುನೀಡಲಾಗುವುದು. ಯೋಜನೆ ಪೂರ್ಣಗೊಂಡ ಬಳಿಕ ನಗರಕ್ಕೆ ನಿತ್ಯ 51 ಎಂಎಲ್‌ಡಿ ನೀರು ಲಭ್ಯವಾಗಲಿದೆ ಎಂದು ತಿಳಿಸಿದರು.

ಹಾಸನ ನಗರವನ್ನು ಸ್ವಚ್ಛ ನಗರ ಮಾಡುವುದು ಹಾಗೂ ಅಮೃತ್‌ ಯೋಜನೆ ಮೂಲಕ ಎಲ್ಲಾವಾರ್ಡ್‌ಗಳಿಗೂ ಕುಡಿಯುವು ನೀರು ನೀಡುವುದು ಪ್ರಮುಖ ಗುರಿಯಾಗಿದೆ ಎಂದುಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಾಸಕ ಪ್ರೀತಂ ಗೌಡ ಅವರು ಸರ್ಕಾರದ ಜತೆ ಚರ್ಚಿಸಿ, ಜನ ಸಾಮಾನ್ಯರಿಗೆಹೊರೆಯಾಗುತ್ತಿದ್ದ ಪ್ರೋರೋಟೋ ಶುಲ್ಕವನ್ನು ತೆಗೆಸಿದ್ದಾರೆ ಎಂದರು.

ನಗರಸಭೆ ಪೌರಾಯುಕ್ತ ಕೃಷ್ಣ ಮೂರ್ತಿ ಮಾತನಾಡಿ, ನಗರದಲ್ಲಿ ನಿತ್ಯ 62 ಟನ್‌ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ 38 ಟನ್‌ ಕಸ ಸಂಗ್ರಹವಾಗುತ್ತಿದೆ. ಈ 100 ಟನ್‌ ಕಸವನ್ನು ಅಗಿಲೆ ನೆಲಭರ್ತಿ ಜಾಗದ ಪ್ರದೇಶದಲ್ಲಿ ವೈಜ್ಞಾನಿಕವಾಗಿ ಸಂಸ್ಕರಿಸಲಾಗುತ್ತಿದೆ. ಅದರಲ್ಲಿ ಶೇ 30 ರಷ್ಟು ಎರೆಹುಳು ಗೊಬ್ಬರವಾಗಿ, ಶೇ 40 ರಷ್ಟು ಒಣ ಕಸವಾಗಿ ಮತ್ತು ಶೇ 30ರಷ್ಟು ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ವೇಸ್ಟ್‌ ಈಸ್‌ ಗೋಲ್ಡ್‌ ಸಂಸ್ಥೆ ₹ 2 ಕೋಟಿ ವಿನಿಯೋಗಿಸಿ ಯಂತ್ರಗಳನ್ನುಅಳವಡಿಸಿಕೊಂಡು ಅಗಿಲೆ ನೆಲಭರ್ತಿ ಜಾಗದಲ್ಲಿ ಸಂಗ್ರಹಿಸಲಾಗಿರುವ 60 ಸಾವಿರ ಟನ್‌ಹಳೇ ಕಸವನ್ನು ಸಂಸ್ಕರಿಸಲು ಮುಂದೆ ಬಂದಿದೆ. ಸಂಸ್ಕರಿಸಿದ ಗೊಬ್ಬರವನ್ನು ರೈತರುಬಳಸಲು ಯೋಗ್ಯವೇ ಎಂದು ಕೃಷಿ ಇಲಾಖೆಯಿಂದ ದೃಢೀಕರಣ ಪಡೆದು ಕಡಿಮೆ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ತಿಳಿಸಿದರು.

ಸ್ವಯಂ ಘೋಷಿತ ಆಸ್ತಿ ತೆರಿಗೆ ಮೂಲಕ ವಾರ್ಷಿಕ ₹10 ಕೋಟಿ ಸಂಗ್ರಹಿಸಬೇಕಿತ್ತು.2020–21ನೇ ಸಾಲಿನಲ್ಲಿ ಕೋವಿಡ್ ಕಾರಣಕ್ಕೆ ₹ 8 ಕೋಟಿ ಸಂಗ್ರಹವಾಗಿತ್ತು.2021–22ನೇ ಸಾಲಿಗೆ ₹2.50 ಕೋಟಿ ಸಂಗ್ರಹವಾಗಿದೆ. ಅಕ್ಟೋಬರ್‌ ವರೆಗೂಶೇಕಡಾ 5 ರಷ್ಟು ವಿನಾಯಿತಿ ಇರಲಿದೆ. ನಂತರ ಶೇಕಡಾ 2 ರಷ್ಟು ಬಡ್ಡಿ ವಿಧಿಸಲಾಗುವುದು ಎಂದರು.

ನಗರದಲ್ಲಿ 13 ಸಾವಿರ ವಿದ್ಯುತ್‌ ಕಂಬಗಳಿದ್ದು, ಹಾಲಿ ಇರುವ ಬೀದಿ ದೀಪಗಳಿಗೆ ಸಿಸಿಎಂಸ್‌ ಯೋಜನೆಯಡಿ ಎಲ್‌ಇಡಿ ದೀಪ ಅಳವಡಿಸಲು ನಿರ್ಧಿಸಲಾಗಿದೆ. ಇದರಿಂದ ಶೇಕಡಾ 60ರಷ್ಟು ಉಳಿತಾಯವಾಗಲಿದೆ. ಅಲ್ಲದೇ ಡಲ್ಟ್‌ ಯೋಜನೆಯಡಿ ₹10 ಕೋಟಿ ವೆಚ್ಚದಲ್ಲಿ 2 ಕಿ.ಮೀ. ಸೈಕಲ್‌ ಪಾದಚಾರಿ ರಸ್ತೆ ನಿರ್ಮಿಸಲಾಗುವುದು ಎಂದು ನುಡಿದರು.

2011ರ ಜನಗಣತಿ ಪ್ರಕಾರ ಹಾಸನ ನಗರದ ಜನಸಂಖ್ಯೆ 1.57 ಲಕ್ಷ. ನಗರ ವ್ಯಾಪ್ತಿಗೆ ಹೊಂದಿಕೊಂಡಿರುವ 25 ಗ್ರಾಮಗಳು ನಗರಸಭೆಗೆ ಸೇರ್ಪಡೆಯಾಗಿರುವುದರಿಂದ ಜನಸಂಖ್ಯೆ 2.57 ಲಕ್ಷ ತಲುಪಲಿದೆ ಎಂದರು.

ಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷ ಮಂಗಳ ಪ್ರದೀಪ್‌, ಎಇಇ ರಂಗಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.