ಹಾಸನ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗದ ಕಾರಣ ಜೂನ್ 30ರ ವರೆಗೂ ಲಾಕ್ಡೌನ್ ವಿಸ್ತರಿಸಬೇಕು ಎಂದು ಶಾಸಕ ಎಚ್.ಡಿ.ರೇವಣ್ಣಸರ್ಕಾರವನ್ನು ಆಗ್ರಹಿಸಿದರು.
ಕೊರೊನಾ ಎರಡನೇ ಅಲೆ ನಿರ್ವರ್ಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಯಿತು. ಹಾಗಾಗಿ25 ಸಾವಿರ ಜನರು ಪ್ರಾಣ ಕಳೆದುಕೊಂಡರು. ಕೋವಿಡ್ ಸಾವಿನ ಬಗ್ಗೆಯೂ ಸರ್ಕಾರ ಸರಿಯಾದಮಾಹಿತಿ ನೀಡುತ್ತಿಲ್ಲ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಹಾಸನ ಜಿಲ್ಲೆಯಲ್ಲಿ ಒಂದು ಮತ್ತುಎರಡನೇ ಅಲೆಯಿಂದ ಒಂದು ಸಾವಿರ ಜನರು ಮೃತಪಟ್ಟಿದ್ದಾರೆ. ಆದರೆ, ಲೆಕಕ್ಕೆ ಸಿಗದೆ ಮೃತಪಟ್ಟವರ ಸಂಖ್ಯೆ ಒಂದು ಸಾವಿರ ದಾಟುತ್ತದೆ. ದೈನಂದಿನ ಪಾಸಿಟಿವಿಟಿ ಪ್ರಮಾಣ ಶೇಕಡಾ 5ಕ್ಕಿಂತ ಕಡಿಮೆ ಬರುವವರೆಗೂ ಲಾಕ್ಡೌನ್ ತೆರವು ಮಾಡಬಾರದು. ಇಲ್ಲವಾದರೆ ಭಾರಿ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಜೂನ್ ಮತ್ತು ಜುಲೈ ನಂತರ ಪರಿಸ್ಥಿತಿ ನೋಡಿಕೊಂಡು ಶಾಲೆ, ಕಾಲೇಜುತೆರೆಯಬೇಕು.ಜತೆಗೆ ಎಸ್ಸೆಸ್ಸೆಲ್ಸಿ ಮತ್ತು ದ್ವಿತಿಯ ಪಿಯುಸಿ ಪರೀಕ್ಷೆಗಳನ್ನು ಮುಂದೂಡಬೇಕು.ಕೋವಿಡ್ ಪರಿಸ್ಥಿತಿ ಬಗ್ಗೆ ತಿಳಿಯದೆ ಲಾಕ್ಡೌನ್ ತೆರವುಗೊಳಿಸುವಂತೆ ಸಚಿವರು ಹೇಳಿಕೆ ನೀಡಬಾರದು. ಸ್ವಲ್ಪ ದಿನ ಕಮಿಷನ್ ಪಡೆಯುವುದನ್ನು ನಿಲ್ಲಿಸಿ, ಜನರ ಆರೋಗ್ಯದ ಕಡೆಗೆ ಸಚಿವರು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಕೋವಿಡ್ ಚಿಕಿತ್ಸೆಗಾಗಿ ಕೆಲವರು ಮನೆ, ಹೊಲ ಹಾಗೂ ಮಾಂಗಲ್ಯ ಮಾರಾಟ ಮಾಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಚಿಕಿತ್ಸೆ ನೀಡಬೇಕು ಅಥವಾಶೇಕಡಾ 50ರಷ್ಟು ವೈದ್ಯಕೀಯ ವೆಚ್ಚವನ್ನಾದರೂ ಸರ್ಕಾರ ಭರಿಸಲು ಮುಂದಾಗಬೇಕು. ಈ ಬಗ್ಗೆಮುಖ್ಯಮಂತ್ರಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೇ 14 ರಂದು ಜಿಲ್ಲೆಯಲ್ಲಿ 2,220 ಜನರಿಗೆಕೋವಿಡ್ಪರೀಕ್ಷೆ ಮಾಡಲಾಯಿತು.ಇದರಲ್ಲಿ 2,200 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. 15 ದಿನಗಳಿಂದ ಪಾಸಿಟಿವಿಟಿದರ ಶೇಕಡಾ 41ರಷ್ಟಿದೆ.ಕೋವಿಡ್ ಲಸಿಕೆ ಕೊರತೆ ಇದೆ. ಮುಂಚೂಣಿ ಹಾಗೂ ಆರೋಗ್ಯ ಕಾರ್ಯಕರ್ತರನ್ನು ಹೊರತುಪಡಿಸಿ 1.32 ಲಕ್ಷ ಮಂದಿಗೆ ಮೊದಲ ಡೋಸ್, 4,500 ಮಂದಿಗೆ ಎರಡನೇ ಡೋಸ್, 18 ರಿಂದ 49 ವರ್ಷ ವಯಸ್ಸಿನವರಿಗೆ 4 ಸಾವಿರ ಡೋಸ್ ಲಸಿಕೆನೀಡಲಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಎಲ್ಲರಿಗೂ ಲಸಿಕೆ ನೀಡುವುದಾಗಿ ಸರ್ಕಾರಹೇಳಿದೆ. ಇದೇ ರೀತಿ ಮುಂದುವರೆದರೆ ಗುರಿ ಸಾಧನೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಜಿಲ್ಲೆಗೆ ಸಂಬಂಧಿಸಿದ ಅಭಿವೃದ್ಧಿ ಕಾಮಗಾರಿಗಳು ನಿಂತರೂ ಪರವಾಗಿಲ್ಲ. ಜನರ ಜೀವ ಮೊದಲು ಉಳಿಸಿ. ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡರಿಗೆ ಸುಳ್ಳು ಹೇಳಿರುವಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇನ್ನು ಜನ ಸಾಮಾನ್ಯರಿಗೆ ಎಷ್ಟು ಸುಳ್ಳು ಹೇಳಿರಬಹುದು ಎಂದರು.
ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ರಾಜ್ಯ ಸರ್ಕಾರ ಘೋಷಿಸಿರುವ ಮೊದಲಪ್ಯಾಕೇಜ್ ಪರಿಹಾರ ಇನ್ನೂ ತಲುಪಿಲ್ಲ. ಪರಿಹಾರ ಪಡೆಯಲು ಆನ್ಲೈನ್ ಮೂಲಕ ಅರ್ಜಿಸಲ್ಲಿಸಬೇಕು. ಲಾಕ್ಡೌನ್ ಇರುವಾಗ ಅರ್ಜಿ ಹಾಕಲು ಎಲ್ಲಿಗೆ ಹೋಗಬೇಕು. ಈಗ ಮತ್ತೆಎರಡನೇ ಹಂತದ ಪ್ಯಾಕೇಜ್ ಘೋಷಣೆಗೆ ಸರ್ಕಾರ ಮುಂದಾಗಿದೆ. ಗ್ರಾಮೀಣ ಭಾಗದಶೇಕಡಾ 40 ರಷ್ಟು ಮಂದಿ ಕೂಲಿ ಕಾರ್ಮಿಕರಾಗಿದ್ದು, ಕೋವಿಡ್ ಕಾರಣದಿಂದ ಕೆಲಸ ಇಲ್ಲದಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.