ಹಾಸನ: ಎಪಿಎಂಸಿ ಆವರಣದಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ
ಪಕ್ಷದ ವತಿಯಿಂದ ಸೋಮವಾರ ಜಿಲ್ಲಾಡಳಿತ ಹಾಗೂ ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪಿ.ಶಿವಕುಮಾರ್ ಮಾತನಾಡಿ, ನಿತ್ಯ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ
ನೂರಾರು ರೈತರು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಎಪಿಎಂಸಿಗೆ ಆಗಮಿಸುತ್ತಾರೆ. ಆದರೆ,
ಮಾರುಕಟ್ಟೆಯಲ್ಲಿ ರೈತರ ಹಗಲು ದರೋಡೆ ನಡೆಯುತ್ತಿದೆ. ಪ್ರಾಂಗಣದಲ್ಲಿ ಶೌಚಾಲಯ ಹಾಗೂ ಶುದ್ಧ
ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂದು ಆರೋಪಿಸಿದರು.
ಕೊಳೆತ ತರಕಾರಿಗಳನ್ನು ತೆರವು ಮಾಡದ ಕಾರಣ ಅನೈರ್ಮಲ್ಯ ವಾತಾವರಣ ಸೃಷ್ಟಿಯಾಗಿದೆ. ಇದರಿಂದ
ವ್ಯಾಪಾರಿಗಳು ಹಾಗೂ ರೈತರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದ್ದು, ಪ್ರಾಂಗಣವನ್ನು ಸ್ವಚ್ಛವಾಗಿರುವಂತೆ ಎಪಿಎಂಸಿ ಹಾಗೂ ನಗರಸಭೆ ಅಧಿಕಾರಿಗಳು ಗಮನಹರಿಸಬೇಕು ಎಂದು ಆಗ್ರಹಿಸಿದರು.
ಮುಂಜಾನೆ 4 ಗಂಟೆಯಿಂದಲೇ ವ್ಯಾಪಾರ ವಹಿವಾಟು ಪ್ರಾರಂಭವಾಗುತ್ತದೆ. ಜಿಲ್ಲೆಯವಿವಿಧ ಗ್ರಾಮಗಳಿಂದ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ರಾತ್ರಿಯೇ ಮರುಕಟ್ಟೆಗೆ ತಂದಿರುತ್ತಾರೆ. ವಿಶ್ರಾಂತಿ ಕೊಠಡಿ ಇಲ್ಲದೆ ಗಾಡಿಗಳಲ್ಲೇ ರೈತರು ವಿಶ್ರಾಂತಿ ಪಡೆಯುವಂತಾಗಿದೆ. ಒಟ್ಟಾರೆ ಮಾರುಕಟ್ಟೆ ಅವ್ಯವಸ್ಥೆಯ ಆವರಣವಾಗಿದೆ. ಮಾರುಕಟ್ಟೆ ಸಂಪೂರ್ಣ ದಲ್ಲಾಳಿಗಳ ಹಿಡಿತದಲ್ಲಿದೆ ಎಂದು ದೂರಿದರು.
ಮಾರುಕಟ್ಟೆಯಲ್ಲಿ ಕಮಿಷನ್ ದಂಧೆಯ ಜತೆಗೆ ಕೃಷಿ ಉತ್ಪನ್ನ ಮಾರಾಟ ಮಾಡಲು ರೈತರಿಗೆ ಸ್ಥಳ ಅವಕಾಶ ನೀಡುತ್ತಿಲ್ಲ. ರೈತರ ಕಟ್ಟೆಗಳನ್ನು ದಲ್ಲಾಳಿಗಳು ಆಕ್ರಮಿಸಿಕೊಂಡಿದ್ದಾರೆ. ಮಧ್ಯವರ್ತಿಗಳಿಂದ ಸ್ಥಳ ತೆರವುಗೊಳಿಸಿ, ದಲ್ಲಾಳಿಗಳ ಹಾವಳಿ ತಪ್ಪಿಸಿ ಮೂಲ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಸಂಬಂಧಪಟ್ಟ ಇಲಾಖೆಗಳು 15 ದಿನದೊಳಗೆ ಸೌಲಭ್ಯ ಒದಗಿಸದಿದ್ದೆ ಜಿಲ್ಲಾ ಘಟಕದ ವತಿಯಿಂದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎಸ್. ಶ್ರೀನಿವಾಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.