ADVERTISEMENT

ಟ್ರ್ಯಾಕ್ಟರ್‌ ಕಂಪನಿ ವಿರುದ್ಧ ಆಕ್ರೋಶ: ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಮೇ 2022, 15:48 IST
Last Updated 10 ಮೇ 2022, 15:48 IST
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಹಾಸನ: ರೈತರಿಗೆ ಡೆಮೊ ಟ್ರ್ಯಾಕ್ಟರ್‌ ಕೊಟ್ಟು ದುರಸ್ತಿ ನಿರ್ವಹಿಸದ ಶೋ ರೂಂ ಮತ್ತು ಕಂಪನಿ ವಿರುದ್ಧ ರಾಜ್ಯ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ಬಂದ ಪ್ರತಿಭಟನಕಾರರು, ‘ಜಿಲ್ಲೆಯಲ್ಲಿರುವ ಟ್ರ್ಯಾಕ್ಟರ್‌‌ ಕಂಪನಿ ಹಾಗೂ ಫೈನಾನ್ಸ್ ಕಂಪನಿಗಳು ಇಂದಿಗೆ ಕೃಷಿಗೆ ಯಂತ್ರಗಳ ಬೇಡಿಕೆ ಇರುವುದನ್ನೇ ಬಂಡವಾಳ ಮಾಡಿಕೊಂಡು ಅರ್ಧ ಎಕರೆಯಿಂದ 5 ಎಕರೆವರೆಗಿನ ರೈತರ ಹಿಡುವಳಿಗೆ ತಕ್ಕಂತೆ ಕೃಷಿ ಯಂತ್ರ ಒದಗಿಸಿ, ಅಕ್ರಮ ಎಸಗುತ್ತಿದ್ದಾರೆ’ಎಂದು ಆರೋಪಿಸಿದರು.

‘ಹೊಳೆನರಸೀಪುರ ತಾಲ್ಲೂಕಿನ ರೈತ ವಿರೂಪಾಕ್ಷ ಅವರು ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಸಾಲ ಪಡೆದು ಟ್ರ್ಯಾಕ್ಟರ್‌ ಖರೀದಿಸಿದ್ದಾರೆ. ಮಾರುಕಟ್ಟೆಯ ಶೇಕಡಾ 50 ಹಣವನ್ನು ಕಟ್ಟಿ ಟ್ರ್ಯಾಕ್ಟರ್‌ ತೆಗೆದುಕೊಡಿದ್ದು, ಎರಡು ತಿಂಗಳಲ್ಲೇ ದುರಸ್ತಿಗೆ ಬರುತ್ತಿದೆ. ದುರಸ್ತಿ ಮಾಡಿಸಿ ದರೂ ಪ್ರಯೋಜನವಾಗಿಲ್ಲ’ ಎಂ ದರು.

ADVERTISEMENT

‌‘ಫೈನಾನ್ಸ್‌ನಲ್ಲಿ ₹ 3.5 ಲಕ್ಷ ಸಾಲ ಮಾಡಿದ್ದರು. ಈಗಾಗಲೇ ಮೂರು ಲಕ್ಷ ರೂಪಾಯಿ ಸಾಲ ತೀರಿಸಿದ್ದಾರೆ. ಆದರೆ, ಬಡ್ಡಿ ಸೇರಿ ಏಳು ಲಕ್ಷ ಆಗಿದ್ದು, ಮತ್ತೆ ಹಣ ಕಟ್ಟುವಂತೆಕಂಪನಿ ನೋಟಿಸ್ ನೀಡಿದೆ. ಇಂತಹ ಟ್ರ್ಯಾಕ್ಟರ್‌ ಶೋ ರೂಂಗಳು, ಫೈನಾನ್ಸ್‌ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಾಲ ನೀಡಿರುವ ಫೈನಾನ್ಸ್‌ ಕಂಪನಿಗಳು ಬಡ್ಡಿ, ಚಕ್ರಬಡ್ಡಿ ವಿಧಿಸುತ್ತಿವೆ’ ಎಂದರು.

ರೈತ ಸಂಘ, ಹಸಿರು ಸೇನೆ ಉಪಾಧ್ಯಕ್ಷ ಆನೆಕೆರೆ ರವಿ, ಜಿಲ್ಲಾಧ್ಯಕ್ಷ ಬಾಬು, ಶಿವರಾಮೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.