ಹಿರೀಸಾವೆ: ನಾಫೆಡ್ಗೆ ಬೆಂಬಲ ಬೆಲೆಯಲ್ಲಿ ಉಂಡೆ ಕೊಬ್ಬರಿ ಮಾರಾಟಕ್ಕೆ ಹೆಸರು ನೋಂದಾಯಿಸಲು ಬುಧವಾರ ಬೆಳಿಗ್ಗೆ ನೂರಾರು ರೈತರು ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ಮಂದೆ ತಮ್ಮ ಸರದಿಗಾಗಿ ಕಾದು ಕುಳಿತಿದ್ದ ರೈತರು, ನೋಂದಣಿ ಇಲ್ಲ ಎಂದು ತಿಳಿದು ಸರ್ಕಾರವನ್ನು ಶಪಿಸುತ್ತ ಹಿಂದಿರುಗಿದರು.
ಕಳೆದ ವಾರ ನೋಂದಣಿ ಮಾಡಿದ್ದನ್ನು ಸರ್ಕಾರ ರದ್ದು ಪಡಿಸಿ, ಹೊಸದಾಗಿ ಇಂದಿನಿಂದ ಹೆಸರು ನೋಂದಾಯಿಸಿ ಕೊಳ್ಳುವುದಾಗಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್ ಪಾಟಿಲ್ ಮಂಗಳವಾರ ವಿಧಾನ ಪರಿಷತ್ನಲ್ಲಿ ಹೇಳಿದ್ದರು. ಈ ಸುದ್ದಿಯಿಂದ ಇಂದಿನಿಂದ ನೋಂದಣಿ ಪ್ರಾರಂಭವಾಗುತ್ತದೆ ಎಂದು ತಿಳಿದು, ಬೆಳಗ್ಗೆ 6 ಗಂಟೆಗೆ ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ಬಳಿ ವೃದ್ಧರು, ಮಹಿಳೆಯರ ಸೇರಿದಂತೆ ನೂರಾರು ಜನರು ಸರತಿಯಲ್ಲಿ ಗಂಟೆಗಟ್ಟೆಲೆ ಕಾದು ಕುಳಿತಿದ್ದರು. 9 ಗಂಟೆಯಾದರೂ ನಾಫೆಡ್ನ ಅಧಿಕಾರಿಗಳು ಬರಲಿಲ್ಲ, ಬುಧವಾರ ನೋಂದಣಿ ಇಲ್ಲ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ, ಶಾಸಕ ಸಿ.ಎನ್. ಬಾಲಕೃಷ್ಣ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಅವರು ಸ್ಥಳೀಯರ ಮೂಲಕ ರೈತರಿಗೆ ತಿಳಿಸಿದಾಗ, ಬೇಸರದಿಂದ ರೈತರು ಹಿಂದಿರುಗಿದರು. ಮಧ್ಯಾಹ್ನದವರೆಗೆ ರೈತರು ಕೃಷಿ ಪತ್ತಿನ ಸಹಕಾರ ಸಂಘದ ಬಳಿಗೆ ಬಂದು ಮಾಹಿತಿ ಕೇಳುತ್ತಿದ್ದರು.
ಈ ಹಿಂದೆ ಹೆಚ್ಚು ಉಪಕರಣಗಳನ್ನು ಬಳಸಿಕೊಂಡು, ಅಂತರ ಜಿಲ್ಲೆಯವರ ಹೆಸರನ್ನು ನೋಂದಾಯಿಸಿರುವುದು ಪತ್ತೆಯಾಗಿದೆ. ಹೊಸ ತಂತ್ರಾಂಶವನ್ನು ಸಿದ್ಧಪಡಿಸಲು ಒಂದು ವಾರ ಬೇಕು. ಆಯಾಯಾ ಜಿಲ್ಲೆಯವರು, ನಿಗದಿಪಡಿಸಿರುವ ಸ್ಥಳಗಳಲ್ಲಿ ನೋಂದಣಿ ಮಾಡಿಸುವಂತೆ ತಂತ್ರಾಂಶವನ್ನು ರೂಪಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ ಬುಧವಾರ ಹಿರೀಸಾವೆಯಲ್ಲಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.