ADVERTISEMENT

ಹಾಸನ: ಆರೋಗ್ಯಯುತ ಆಹಾರ ಪದ್ಧತಿ ಪಾಲಿಸಿ

131ನೇ ಹುಣ್ಣಿಮೆ ಕಾರ್ಯಕ್ರಮದಲ್ಲಿ ಡಾ.ಎಂ.ಎ ಶೇಖರ್ ಸಲಹೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 2:23 IST
Last Updated 13 ಆಗಸ್ಟ್ 2025, 2:23 IST
ಹಾಸನದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ಗುರು ತೋರಿದ ದಾರಿ ತಿಂಗಳ ಮಾಮನ ತೇರು 131ನೇ ಹುಣ್ಣಿಮೆ ಕಾರ್ಯಕ್ರಮದಲ್ಲಿ ಮಧುಮೇಹ ತಜ್ಞ ಡಾ.ಎಂ.ಎ. ಶೇಖರ್ ಅವರನ್ನು ಗೌರವಿಸಲಾಯಿತು.
ಹಾಸನದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ಗುರು ತೋರಿದ ದಾರಿ ತಿಂಗಳ ಮಾಮನ ತೇರು 131ನೇ ಹುಣ್ಣಿಮೆ ಕಾರ್ಯಕ್ರಮದಲ್ಲಿ ಮಧುಮೇಹ ತಜ್ಞ ಡಾ.ಎಂ.ಎ. ಶೇಖರ್ ಅವರನ್ನು ಗೌರವಿಸಲಾಯಿತು.    

ಹಾಸನ: ಆರೋಗ್ಯಯುತ ಆಹಾರ ಪದ್ದತಿಯೊಂದಿಗೆ ವೈದ್ಯರ ಸಲಹೆಗಳನ್ನು ಪಾಲಿಸಿದರೆ ಮಧುಮೇಹ ಕಾಯಿಲೆ ನಿಯಂತ್ರಿಸಬಹುದು ಎಂದು ಮಧುಮೇಹ ತಜ್ಞ ಡಾ.ಎಂ.ಎ. ಶೇಖರ್ ಸಲಹೆ ನೀಡಿದರು.

ನಗರದ ಎಂ.ಜಿ. ರಸ್ತೆಯ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ‘ಗುರು ತೋರಿದ ದಾರಿ ತಿಂಗಳ ಮಾಮನ ತೇರು’ 131ನೇ ಹುಣ್ಣಿಮೆ ಕಾರ್ಯಕ್ರಮದಲ್ಲಿ ‘ಅಂಗೈಯಲ್ಲಿ ಆರೋಗ್ಯ’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

‘ನಮಗೆ ಬಂದಿರುವ ಆರೋಗ್ಯ ಸಮಸ್ಯೆಗಳನ್ನು ನಾವು ಸಾಧ್ಯವಾದಷ್ಟು ನೈಸರ್ಗಿಕ ರೀತಿಯಲ್ಲಿ ಬಗೆಹರಿಸಿಕೊಳ್ಳಲು ಪ್ರಯತ್ನ ಪಡಬೇಕು. ನೈಸರ್ಗಿಕವಾಗಿ ಸಿಗುವ ಆಹಾರ ಪದಾರ್ಥಗಳಿಂದ ದೇಹಕ್ಕೆ ಯಾವುದೇ ಅಡ್ಡಪರಿಣಾಮಗಳು ಎದುರಾಗುವುದಿಲ್ಲ. ಪ್ರಾದೇಶಿಕವಾಗಿ ಬೆಳೆಯುವ ಆಹಾರ ಪದ್ದತಿ ರೂಢಿಸಿಕೊಳ್ಳುವುದರಿಂದ ದೈಹಿಕವಾಗಿ ಆರೋಗ್ಯಕ್ಕೆ ಹೆಚ್ಚಿನ ಲಾಭ ಸಿಗಬಹುದು’ ಎಂದರು.

ADVERTISEMENT

ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಮಠದ ಶಂಭುನಾಥ ಸ್ವಾಮೀಜಿ ಮಾತನಾಡಿ, ‘ಮಧುಮೇಹ ನಿಯಂತ್ರಣ ಮಾಡುವುದು ಸ್ವಲ್ಪ ಕಷ್ಟವಾದರೂ, ಶರೀರಕ್ಕೆ ಒಗ್ಗುವ ಆಹಾರ ಶೈಲಿಯನ್ನು ರೂಢಿಸಿಕೊಂಡು ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯವಿದೆ’ ಎಂದರು.

‘ಮನುಷ್ಯನಿಗೆ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಪರಿಸರದ ಸಮತೋಲನ ಕೂಡ ಮುಖ್ಯ. ಈ ನಿಟ್ಟಿನಲ್ಲಿ ಪರಿಸರ ಉಳಿಸುವ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕಿದೆ ಎಂದ ಅವರು, ಬಾಲಗಂಗಾಧರನಾಥ ಸ್ವಾಮೀಜಿ 5 ಕೋಟಿ ಸಸಿ ನೆಟ್ಟು ಬೆಳೆಸಿದ್ದರು’ ಎಂದು ಸ್ಮರಿಸಿದರು.

ಹಾಸನ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಹೆಮ್ಮಿಗೆ ಮೋಹನ್, ರಾಜ್ಯ ಒಕ್ಕಲಿಗರ ಸಂಘದ ಸದಸ್ಯ ರಘುಗೌಡ, ಸಮಾಜ ಸೇವಕ ಲಕ್ಷ್ಮೀಕಾಂತ್, ಮಠದ ವ್ಯವಸ್ಥಾಪಕ ಚಂದ್ರಶೇಖರ್, ಕಸಾಪ ಗೌರವ ಕಾರ್ಯದರ್ಶಿ ಬಿ.ಆರ್. ಬೊಮ್ಮೇಗೌಡ, ಡಾ.ದೇವಿಪ್ರಸಾದ್, ಜಯಲಕ್ಷ್ಮೀ ರಾಜಣ್ಣ, ಶಿವರಾಮೇಗೌಡ ಇತರರು ಉಪಸ್ಥಿತರಿದ್ದರು.

ಉಪನ್ಯಾಸಕ ಮಂಜುನಾಥ್ ನಿರೂಪಿಸಿದರು. ಬಿಜಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲ ಮೋಹನ್ ಸ್ವಾಗತಿಸಿದರು. ಬಿಜಿಎಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ದರ್ಶನ್ ವಂದಿಸಿದರು.

ಸಹೋದರ– ಸಹೋದರಿಯ ಬಾಂಧವ್ಯದ ಸಂಕೇತ ರಕ್ಷಾ ಬಂಧನ ಹಬ್ಬಕ್ಕೆ ಅದರದ್ದೇ ಆದ ಹಿನ್ನೆಲೆಯಿದೆ. ಸಮಾಜದಲ್ಲಿ ಒಳಿತನ್ನು ಸಾರುವ ಸಂಬಂಧ ಬೆಸೆಯುವ ಹಬ್ಬವಾಗಿದೆ.
– ಶಂಭುನಾಥ ಸ್ವಾಮೀಜಿ, ಆದಿಚುಂಚನಗಿರಿ ಹಾಸನ ಶಾಖಾ ಮಠ

ಖುಷಿಯಿಂದಿರಿ; ಒತ್ತಡದಿಂದ ದೂರವಿರಿ’

ಸಾವಿರಾರು ವರ್ಷಗಳಿಂದಲೂ ಪ್ರಸಿದ್ಧವಾಗಿರುವ ಆಯುರ್ವೇದ ಪದ್ಧತಿ ಈಗಲೂ ನಮ್ಮೆಲ್ಲರ ಮಧ್ಯೆ ಇದೆ. ಆಹಾರ ವಿಹಾರ ವಿಚಾರ ಇದಿಷ್ಟನ್ನು ನಿಖರವಾಗಿ ಅರಿತರೆ ಮಧುಮೇಹ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಇದಕ್ಕಾಗಿ ವೈದ್ಯರು ನೀಡಿದ ಔಷಧಿಗಳು ಹಾಗೂ ಕಟ್ಟು ನಿಟ್ಟಿನ ಆಹಾರ ಪದ್ಧತಿ ಅನುಸರಿಸಬೇಕು. ನಿತ್ಯ ಶಿಸ್ತುಬದ್ಧವಾಗಿ ವ್ಯಾಯಾಮ ಅನುಸರಿಸಬೇಕು. ಮಧುಮೇಹ ಕಾಯಿಲೆ ಇರುವವರು ಯಾವುದನ್ನು ತಿನ್ನಬೇಕು ಎನ್ನುವುದಕ್ಕಿಂತ ಯಾವುದನ್ನು ತಿನ್ನಬಾರದು ಎಂಬುದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಒಳ್ಳೆಯದು. ಆಹಾರ ಇರಲಿ ಹಣ್ಣುಗಳಿರಲಿ ಯಾವುದನ್ನು ಎಷ್ಟು ಬಳಸಬೇಕು? ಯಾವ ಹಣ್ಣುಗಳಿಂದ ಅಂತರ ಕಾಯ್ದುಕೊಳ್ಳಬೇಕು ಎಂಬುದನ್ನು ಅರಿಯುವುದು ಒಳ್ಳೆಯದು. ಇಲ್ಲದರ ಬಗ್ಗೆ ಚಿಂತಿಸುವುದನ್ನು ಬಿಟ್ಟು ಇರುವುದರಲ್ಲಿ ಖುಷಿ ಪಡಿ. ಒತ್ತಡದಿಂದ ದೂರವಿರಿ’ ಎಂದು ಡಾ.ಎಂ.ಎ ಶೇಖರ್‌ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.