ADVERTISEMENT

ಬೇಲೂರು | ಗಣೇಶ ಮೂರ್ತಿಯ ಮೇಲೆ ಚಪ್ಪಲಿ: ಸ್ಥಳೀಯರಿಂದ ಪ್ರತಿಭಟನೆ; ಬಂದ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 9:59 IST
Last Updated 21 ಸೆಪ್ಟೆಂಬರ್ 2025, 9:59 IST
<div class="paragraphs"><p>ಬೇಲೂರು ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ</p></div>

ಬೇಲೂರು ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ

   

ಬೇಲೂರು (ಹಾಸನ ಜಿಲ್ಲೆ): ಇಲ್ಲಿನ ಬಸ್ ನಿಲ್ದಾಣದ ಮುಂಭಾಗದ ಪುರಸಭೆ ಆವರಣದಲ್ಲಿರುವ ವರಸಿದ್ಧಿ ವಿನಾಯಕ ಗಣಪತಿ ದೇವಾಲಯದ ಕಬ್ಬಿಣದ ಬಾಗಿಲು ತೆರೆದು, ಗಣೇಶ ಮೂರ್ತಿ ಮೇಲೆ ಮಹಿಳೆಯೊಬ್ಬಳು ಎರಡು ಚಪ್ಪಲಿಗಳನ್ನು ಇಟ್ಟಿರುವ ಘಟನೆ ಭಾನುವಾರ ನಡೆದಿದೆ. ಈ ಸಂಬಂಧ ಆಕೆಯನ್ನು ಭಾನುವಾರ ಸಂಜೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

‘ಹಾಸನದ ವಿಜಯನಗರ ಬಡಾವಣೆಯ ಲೀಲಮ್ಮ‌ ಎಂಬಾಕೆಯನ್ನು ವಶಕ್ಕೆ ಪಡೆಯಲಾಗಿದೆ. ಆಕೆಯ ಮಾನಸಿಕ ಸ್ಥಿತಿ ಸ್ಥಿಮಿತದಲ್ಲಿಲ್ಲ ಎನ್ನುವ ಮಾಹಿತಿ ಇದೆ. ಈ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುತ್ತಿದೆ’ ಎಂದು ಎಸ್ಪಿ ಮೊಹಮ್ಮದ್‌ ಸುಜೀತಾ ತಿಳಿಸಿದರು.

ADVERTISEMENT

‘ಶನಿವಾರ ರಾತ್ರಿ 8.30ಕ್ಕೆ‌ ಲೀಲಮ್ಮ ಹಾಸನದಿಂದ ಹೊರಟು ಬೇಲೂರು ಬಸ್ ಹತ್ತಿದ್ದಾರೆ. ನಂತರ ಚಿಕ್ಕಮಗಳೂರಿಗೆ ಹೋಗಿ ವಾಪಸ್ ಬೇಲೂರಿಗೆ ಬಂದಿದ್ದಾರೆ. ಬೇಲೂರಿನಲ್ಲಿ ಇಳಿದು ಪುರಸಭೆ ಆವರಣಕ್ಕೆ ಬಂದಿದ್ದು, ಮಹಿಳೆಯ ಸಂಪೂರ್ಣ ಚಲನವಲನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೇಗುಲಕ್ಕೆ ಹೋಗಿ ಬಂದ ಬಳಿಕ ಮರಳಿ ಹಾಸನಕ್ಕೆ ಬಂದಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಆಕೆಯ ಮನೆ ಬಳಿಯೇ ವಶಕ್ಕೆ ಪಡೆದಿದ್ದು, ವೈದ್ಯಕೀಯ ಪರೀಕ್ಷೆಯ ಅಗತ್ಯವಿದೆ. ಈ ಹಿಂದೆ ಮನೆಯಲ್ಲೂ ಇದೇ‌ ರೀತಿ ವರ್ತಿಸಿದ್ದ ಬಗ್ಗೆ ಕುಟುಂಬ ಸದಸ್ಯರಿಂದ ಮಾಹಿತಿ ಇದೆ’ ಎಂದು ಹೇಳಿದರು.

‘ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ್ದು, ಹೆಚ್ಚುವರಿ ತನಿಖೆಗಾಗಿ ಎಂಟು ತಂಡ ರಚಿಸಲಾಗಿದೆ’ ಎಂದು ತಿಳಿಸಿದರು.

ವ್ಯಾಪಾರಿಗಳು ಗಮನಿಸಿದ್ದು: ಈ ದೇವಾಲಯದಲ್ಲಿ ನಿತ್ಯ ಪೂಜೆ ನಡೆಯುತ್ತಿದ್ದು, ವ್ಯಾಪಾರಿಗಳು ಬೆಳಿಗ್ಗೆ ಮೂರ್ತಿಗೆ ನಮಿಸಿ ವ್ಯಾಪಾರ ಆರಂಭಿಸುತ್ತಾರೆ. ಶನಿವಾರ ರಾತ್ರಿ ಪುರಸಭೆ ಗೇಟ್‌ಗೆ ಬೀಗ ಹಾಕಿ ತೆರಳಿದ್ದರು. ಭಾನುವಾರ ಬೆಳಿಗ್ಗೆ ಭಕ್ತರು ನಮಿಸಲು ಹೋದಾಗ, ಮೂರ್ತಿಯ ಮೇಲೆ ಚಪ್ಪಲಿಗಳನ್ನು ಇಟ್ಟಿರುವುದು ಗೊತ್ತಾಗಿದೆ.

ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯ ಆಧಾರದ ಮೇಲೆ ತನಿಖೆ ನಡೆಸಿದ್ದಾರೆ.

ಘಟನೆಯಿಂದ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಎಸ್‌ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿದ್ದರು.

‘ಕೋಮು ಸೌಹಾರ್ದ ಕದಡಲು ಕಿಡಿಗೇಡಿಗಳು ಇಂತಹ ದುಷ್ಕೃತ್ಯ ಎಸಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಸ್ಥಳೀಯರು ಪುರಸಭೆ ಆವರಣದಲ್ಲಿ ಪ್ರತಿಭಟಿಸಿದರು. ‘ಆರೋಪಿಯನ್ನು ಕೂಡಲೇ ಬಂಧಿಸದಿ
ದ್ದಲ್ಲಿ, ಸೋಮವಾರ ಬೇಲೂರು ಬಂದ್‌ಗೆ ಕರೆ ನೀಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಬೇಲೂರಿಗೆ ಭೇಟಿ ನೀಡಿದ ವಿಧಾನ
ಪರಿಷತ್ ಸದಸ್ಯ ಸಿ.ಟಿ. ರವಿ, ‘ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಲಾಗುತ್ತದೆ. ಹಸುವಿನ ಕೆಚ್ಚಲು ಕೊಯ್ಯುತ್ತಾರೆ. ಈಗ ಪುರಸಭೆ ಆವರಣದಲ್ಲಿನ ಗಣಪತಿಗೆ ಚಪ್ಪಲಿ ಹಾಕಿದ್ದಾರೆ. ಇದು ಕೋಮು ಗಲಭೆ ಸೃಷ್ಟಿಸುವ ಸಂಚಿನ ಭಾಗವಾಗಿದೆ’ ಎಂದು ಆರೋಪಿಸಿದರು.

‘ಬು‌ಲ್ಡೋ‌ಜರ್ ಹತ್ತಿಸಬೇಕು’

ಚಿಕ್ಕಮಗಳೂರು: ಬೇಲೂರು ಪುರಸಭೆ ಗಣಪತಿ ವಿಗ್ರಹದ ಮೇಲೆ ಚಪ್ಪಲಿ ಇಟ್ಟವರ ವಿರುದ್ಧ ಪ್ರಕರಣ ದಾಖಲಿಸುವುದು ಮಾತ್ರವಲ್ಲ, ಅವರ ಮನೆಗೆ ಬುಲ್ಡೋಜರ್ ಹತ್ತಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಪ್ಪಿತ್ತಸ್ಥರ ರಕ್ಷಣೆಗೆ ಮುಂದಾದರೆ ಸಮಾಜವೇ ಬುಲ್ಡೋಜರ್ ತೆಗೆದುಕೊಂಡು ಅವರ ಮನೆ ಮುಂದೆ ಹೋಗಲಿದೆ’ ಎಂದು ಎಚ್ಚರಿಸಿದರು.

‘ಕೋಮು ಗಲಭೆ ಸೃಷ್ಟಿಸುವ ಭಾಗವಾಗಿ ಈ ಕೆಲಸ ಮಾಡಿದ್ದಾರೆ. ಸಂಚಿನ ಭಾಗವಾಗಿಯೇ ಚಪ್ಪಲಿ ಇಡಲಾಗಿದೆ. ಸಜ್ಜನರಿಗೆ ಸಿಟ್ಟು ತರಿಸಿದರೆ ಯಾರೂ ಉಳಿಯುವುದಿಲ್ಲ’ ಎಂದರು.

ಆರೋಪಿಯನ್ನು ತ್ವರಿತವಾಗಿ ಬಂಧಿಸಿ, ಕೂಡಲೇ ಶಿಕ್ಷೆ ನೀಡಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಮಾಡಲಾಗುವುದು. ಮಹಿಳೆಗೆ ಒತ್ತಡವಿದ್ದರೆ, ಅದನ್ನು ಪರಿಶೀಲಿಸಬೇಕು
ಎಚ್‌.ಕೆ. ಸುರೇಶ್, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.