ADVERTISEMENT

ಮುನ್ನೆಚ್ಚರಿಕೆ ವಹಿಸಿದ್ದರೆ ಅನಾಹುತ ಆಗುತ್ತಿರಲಿಲ್ಲ

ಮೃತರ ಕುಟುಂಬ, ಗಾಯಾಳುಗಳಿಗೆ ಪರಿಹಾರ: ಎಚ್‌.ಡಿ. ದೇವೇಗೌಡ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 2:53 IST
Last Updated 14 ಸೆಪ್ಟೆಂಬರ್ 2025, 2:53 IST
ಹಾಸನದ ಪ್ರವಾಸಿ ಮಂದಿರದಲ್ಲಿ ರಾಜ್ಯಸಭೆ ಸದಸ್ಯ ಎಚ್‌.ಡಿ. ದೇವೇಗೌಡ ಮಾತನಾಡಿದರು.
ಹಾಸನದ ಪ್ರವಾಸಿ ಮಂದಿರದಲ್ಲಿ ರಾಜ್ಯಸಭೆ ಸದಸ್ಯ ಎಚ್‌.ಡಿ. ದೇವೇಗೌಡ ಮಾತನಾಡಿದರು.   

ಹಾಸನ: ಗಣೇಶ ವಿಸರ್ಜನೆ ವೇಳೆ ದುರಂತ ಸಂಭವಿಸಿದ್ದು, ಸ್ಥಳೀಯ ಪೊಲೀಸರು ಸೂಕ್ತ ಮುನ್ನೆಚ್ಚರಿಕೆ ಕ್ರಮ ವಹಿಸಬೇಕಿತ್ತು ಎಂದು ರಾಜ್ಯಸಭೆ ಸದಸ್ಯ ಎಚ್.ಡಿ. ದೇವೇಗೌಡ ಅಭಿಪ್ರಾಯಪಟ್ಟರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರ್ಮಿಕ ಸಂಪ್ರದಾಯದಂತೆ ಗಣೇಶ ಉತ್ಸವ ಅದ್ದೂರಿಯಾಗಿ ಜರುಗುತ್ತದೆ. ಈ ಸಂದರ್ಭದಲ್ಲಿ ಯುವಕರು ಸಾಂಸ್ಕೃತಿಕ ಉತ್ಸವದಂತೆ ಪಾಲ್ಗೊಳ್ಳುವುದು ಸಾಮಾನ್ಯವಾಗಿದೆ ಎಂದರು.

ಇಂತಹ ಸಂದರ್ಭದಲ್ಲಿ ಒಂದು ಬೈಕ್ ಅಡ್ಡ ಬಂದ ಕಾರಣ ಲಾರಿ ಮೆರವಣಿಗೆ ಮೇಲೆ ಹರಿದು ದೊಡ್ಡ ಅನಾಹುತ ಸಂಭವಿಸಿದೆ. ಇದರಲ್ಲಿ ಯಾರನ್ನು ದೂರುವುದು? ರಾಜಕೀಯ ಬೆರೆಸಲು ಹೋಗುವುದಿಲ್ಲ. ಪೊಲೀಸರು ಸ್ವಲ್ಪಮಟ್ಟಿಗೆ ಮುನ್ನೆಚ್ಚರಿಕೆ ವಹಿಸಿದ್ದರೆ ದೊಡ್ಡ ಅನಾಹುತ ಆಗುತ್ತಿರಲಿಲ್ಲ ಎಂದು ಹೇಳಿದರು.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಮೃತ ಕುಟುಂಬಕ್ಕೆ ₹ 5 ಲಕ್ಷ ಹಾಗೂ ಪ್ರಧಾನ ಮಂತ್ರಿ ₹ 2 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಕೇಂದ್ರ ಸಚಿವ ಎಚ್‍.ಡಿ. ಕುಮಾರಸ್ವಾಮಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದರು. ನಂತರ ಇದನ್ನು ಮನಗಂಡು ಪ್ರಧಾನಮಂತ್ರಿಗಳು ಮಣಿಪುರದಲ್ಲಿದ್ದ ರಾಜ್ಯ ಸರ್ಕಾರದಿಂದ ಮಾಹಿತಿ ಪಡೆದು ತಕ್ಷಣವೇ ₹ 2 ಲಕ್ಷ ಪರಿಹಾರ ಘೋಷಣೆ ಮಾಡಿದರು ಎಂದರು.

ದುರಂತ ನಡೆದ ಮೊಸಳೆ ಹೊಸಹಳ್ಳಿ ನನ್ನ ತಾಯಿಯ ಊರು. ದುರಂತದಲ್ಲಿ ಸಾವಿಗೀಡಾದ ಹಾಗೂ ಗಾಯಗೊಂಡ ಕುಟುಂಬಗಳಿಗೆ ಸಾಂತ್ವನ ಹೇಳಲು ಬಂದಿದ್ದೇನೆ. ನಮ್ಮದು ಸಣ್ಣ ರಾಜಕೀಯ ಪಕ್ಷ. ವೈದ್ಯರೊಂದಿಗೆ ಚರ್ಚೆ ನಡೆಸಿದ್ದು, ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿಯೇ ಸೂಕ್ತ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೂ ಪಕ್ಷದ ವತಿಯಿಂದ ಗಾಯಗೊಂಡವರಿಗೆ ₹ 25 ಸಾವಿರದಿಂದ ₹ 15 ಸಾವಿರ ಸೇರಿದಂತೆ ಒಟ್ಟು ₹3.05 ಲಕ್ಷ ಪರಿಹಾರ ನೀಡುತ್ತಿದ್ದೇವೆ. ಮೃತ ಕುಟುಂಬಕ್ಕೆ ತಲಾ ₹ 1 ಲಕ್ಷ ಪರಿಹಾರ ಘೋಷಣೆ ಮಾಡಿದ್ದೇವೆ ಎಂದರು.

ಮೃತಪಟ್ಟವರೆಲ್ಲ ರೈತರ ಕುಟುಂಬದವರಾಗಿದ್ದು, ಬಡವರಿದ್ದಾರೆ. ದುಡಿಯುವ ಮಕ್ಕಳನ್ನು ಕಳೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ನೀಡುವ ₹ 5 ಲಕ್ಷ ಬ್ಯಾಂಕ್‌ನಲ್ಲಿಟ್ಟರೂ, ಅದರಲ್ಲಿ ಬರುವ ಬಡ್ಡಿ ಹಣದಿಂದ ಜೀವನ ಸಾಗಿಸುವುದು ಕಷ್ಟ. ಸಿದ್ದರಾಮಯ್ಯ ಅವರು ಕನಿಷ್ಠ ₹ 10 ಲಕ್ಷ ಪರಿಹಾರ ಬಿಡುಗಡೆ ಮಾಡುವಂತೆ ಅವರಲ್ಲಿ ವಿನಂತಿ ಮಾಡುವುದಾಗಿ ಹೇಳಿದರು.

ರಾಜ್ಯ ಸರ್ಕಾರ ಮುಚ್ಚುಮರೆ ಇಲ್ಲದೇ ನೆರೆ ರಾಜ್ಯಕ್ಕೆ ಪರಿಹಾರ ಕೊಡುತ್ತದೆ. ಆದರೆ ಇಲ್ಲಿ ಇಂತಹ ದುರ್ಘಟನೆ ಆದಾಗ ವಯಸ್ಸಾದ ತಂದೆ– ತಾಯಿಗಳಿಗೆ ನೆರವಾಗಿದ್ದ ಮಕ್ಕಳು ತೀರಿಕೊಂಡಿದ್ದು, ಸೂಕ್ತ ಪರಿಹಾರ ನೀಡಬೇಕು ಎಂಬುದಷ್ಟೇ ನಮ್ಮ ಮನವಿ. ಇದರಲ್ಲಿ ರಾಜಕೀಯ ಮಾಡಲು ಹೋಗುವುದಿಲ್ಲ. ಸಮಯ ಬಂದಾಗ ಇದಕ್ಕೆಲ್ಲ ಉತ್ತರಿಸುವೆ ಎಂದರು.

ಮುಖ್ಯಮಂತ್ರಿಗಳು ₹ 5 ಲಕ್ಷಕ್ಕಿಂತ ಹೆಚ್ಚು ಪರಿಹಾರ ನೀಡಲು ಆಗುವುದಿಲ್ಲ ಎಂದು ಮೈಸೂರಿನಲ್ಲಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ದೇವೇಗೌಡರು, ಪರಿಹಾರ ಹೆಚ್ಚು ಮಾಡುವಂತೆ ಕೇಳುವುದು ನಮ್ಮ ಜವಾಬ್ದಾರಿ. ಕೊಡುವುದು, ಬಿಡುವುದು ಅವರಿಗೆ ಬಿಟ್ಟಿದ್ದು. ರೈತ ಕುಟುಂಬ ಎಂಬ ಗಮನದಲ್ಲಿ ಇಟ್ಟುಕೊಂಡು ಹೆಚ್ಚು ಪರಿಹಾರ ನೀಡಲಿ ಎಂದು ಮತ್ತೊಮ್ಮೆ ಕೋರುತ್ತೇನೆ ಎಂದರು.

ನನಗೆ 93 ವರ್ಷ ವಯಸ್ಸಾಗಿದೆ. ರಾಜಕೀಯದ ಭ್ರಮೆ ಇಲ್ಲ. ಕೆಲಸ ಮಾಡುವ ಮನಸ್ಸಲ್ಲಿ ಸಂಕಲ್ಪ ಮಾಡಿ ತೋರಿಸುವ ಶಕ್ತಿ ಇರುವವರೆಗೆ ಹೋರಾಟ ಮಾಡುತ್ತೇನೆ. ನನ್ನ ಸ್ವಭಾವ ಅದು. ರಾಜಕೀಯ ಕ್ಷೇತ್ರದಲ್ಲಿ ವಯಸ್ಸಿನ ಮಾನದಂಡವಿಲ್ಲ. ಮೊನ್ನೆ ಉಪ ರಾಷ್ಟ್ರಪತಿ ಪದಗ್ರಹಣ ಸಂದರ್ಭದಲ್ಲಿ ಪ್ರಧಾನಿಗಳ ಎದುರೇ ಕೂತಿದ್ದೆ. ನನ್ನ ಹೆಸರು ಹೇಳಿ, ಮೋದಿ ಮಾತನ್ನು ಆರಂಭಿಸಿದರು ನಿವೃತ್ತಿ ಎಂದು ನಾನು ಎಲ್ಲೂ ಹೇಳಿಲ್ಲ. ನನ್ನ ಕೆಲಸ ಮುಗಿದಿಲ್ಲ ಇನ್ನು ಸ್ವಲ್ಪ ಕೆಲಸ ಇದೆ ಎಂದು ಹೇಳಿದರು.

ಶಾಸಕರಾದ ಎಚ್.ಡಿ. ರೇವಣ್ಣ, ಸ್ವರೂಪ್ ಪ್ರಕಾಶ್, ಎ. ಮಂಜು, ಸಿ.ಎನ್. ಬಾಲಕೃಷ್ಣ, ಡಾ.ಸೂರಜ್ ರೇವಣ್ಣ, ಮಾಜಿ ಶಾಸಕ ಎಚ್‌.ಕೆ. ಕುಮಾರಸ್ವಾಮಿ, ಮೇಯರ್ ಹೇಮಲತಾ ಕಮಲ್ ಕುಮಾರ್ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.