ADVERTISEMENT

ಅರಕಲಗೂಡು: ಮಣ್ಣಿನ ಗಣೇಶ ತಯಾರಿಕೆ ಕಲಿಕಾ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 13:04 IST
Last Updated 4 ಸೆಪ್ಟೆಂಬರ್ 2024, 13:04 IST
ಅರಕಲಗೂಡಿನಲ್ಲಿ ಬುಧವಾರ ನಡೆದ ಮಣ್ಣಿನ ಗಣೇಶ ವಿಗ್ರಹ ತಯಾರಿಕಾ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಗಣೇಶ ಮೂರ್ತಿ ತಯಾರಿಸಿ ಪ್ರದರ್ಶಿಸಿದರು.
ಅರಕಲಗೂಡಿನಲ್ಲಿ ಬುಧವಾರ ನಡೆದ ಮಣ್ಣಿನ ಗಣೇಶ ವಿಗ್ರಹ ತಯಾರಿಕಾ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಗಣೇಶ ಮೂರ್ತಿ ತಯಾರಿಸಿ ಪ್ರದರ್ಶಿಸಿದರು.   

ಅರಕಲಗೂಡು: ಮಣ್ಣಿನಿಂದ ತಯಾರಿಸಿದ ಗಣಪತಿ ಮೂರ್ತಿಯನ್ನು ಪೂಜಿಸುವ ಮೂಲಕ ಜನರು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಸ್ವಸ್ಥ ಸಮಾಜ ನಿರ್ಮಾಣ ಸಮಿತಿ ಅಧ್ಯಕ್ಷ ಪ್ರದೀಪ್ ರಾಮಸ್ವಾಮಿ ತಿಳಿಸಿದರು.

ಸ್ವಸ್ಥ ಸಮಾಜ ನಿರ್ಮಾಣ ಸಮಿತಿ, ಪಟ್ಟಣದ ಗಣಪತಿ ಕೊತ್ತಲು ಉದ್ಯಾನದಲ್ಲಿ ಬುಧವಾರ ಆಯೋಜಿಸಿದ್ದ ಪರಿಸರಸ್ನೇಹಿ ಮಣ್ಣಿನ ಗಣಪತಿ ತಯಾರಿಸುವ ಕಲಿಕಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ರಾಸಾಯನಿಕ ವಸ್ತುಗಳನ್ನು ಬಳಸಿ ತಯಾರಿಸಿರುವ ಪಿಒಪಿ ಗಣೇಶ ಮೂರ್ತಿಗಳು ನೀರಿನಲ್ಲಿ ಕರಗುವುದಿಲ್ಲ. ನೀರಿಗೆ ರಾಸಾಯನಿಕ ಬೆರೆಸಿ ಮಾಲಿನ್ಯ ಉಂಟು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಮಣ್ಣಿನ ಗಣಪತಿ ತಯಾರಿಸುವುದನ್ನು ಕಲಿಸುವ ಮೂಲಕ ಪರಿಸರದ ಕುರಿತು ಅರಿವು ಮೂಡಿಸಲಾಗುತ್ತಿದೆ. ಮಕ್ಕಳು ತಾವೇ ತಯಾರಿಸಿದ ಮಣ್ಣಿನ ಗಣಪತಿಗಳನ್ನು ಪೂಜಿಸುವಂತೆ ತಿಳಿಸಿದರು.

ADVERTISEMENT

ಪಟ್ಟಣದ ವಿವಿಧ ಶಾಲೆಗಳ 150 ವಿದ್ಯಾರ್ಥಿಗಳು ಗಣಪತಿ ಮೂರ್ತಿಗಳನ್ನು ಆಸಕ್ತಿಯಿಂದ ತಯಾರಿಸಿದರು. ಗಣಪತಿ ವಿಗ್ರಹ ತಯಾರಕ ವಿಶ್ವೇಶ್ವರಯ್ಯ, ಮೂರ್ತಿ ತಯಾರಿಸುವ ವಿಧಾನ ಕುರಿತು ಮಕ್ಕಳಿಗೆ ತರಬೇತಿ ನೀಡಿದರು.

ಪಟ್ಟಣ ಪಂಚಾಯತಿ ಸದಸ್ಯ ರಮೇಶ್ ವಾಟಾಳ್, ವಕೀಲ ಎ.ಆರ್. ಜನಾರ್ದನ ಗುಪ್ತ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಾದೇಶ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಸಿ. ಲೋಕೇಶ್, ಮಾಜಿ ಸದಸ್ಯ ಎನ್.ರವಿಕುಮಾರ್, ನಿವೃತ್ತ ಪ್ರಾಂಶುಪಾಲ ಬಸವರಾಜ್, ಸ್ವಸ್ಥ ಸಮಾಜ ನಿರ್ಮಾಣ ಸಮಿತಿ ಸದಸ್ಯರಾದ ಪಾಂಡುರಂಗ, ಮೋಹನ್, ಸೋಮಣ್ಣ, ಲೋಕೇಶ್, ರಂಗಸ್ವಾಮಿ, ಕಾಂತರಾಜು, ನಸ್ರುಲ್ಲಾ ಟಿಪ್ಪು, ಬಾಬು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.