ಹಾಸನ: ಕಾಫಿ ಬೆಳೆ ಹಾನಿಗೆ ಎನ್ಡಿಆರ್ಎಫ್ ಮಾರ್ಗಸೂಚಿಯಂತೆ ಹೆಕ್ಟೇರ್ ₹18 ಸಾವಿರ ನೀಡುವ ಬದಲು ₹50 ಸಾವಿರ ಪರಿಹಾರವನ್ನು ಕನಿಷ್ಠಹತ್ತು ಹೆಕ್ಟೇರ್ವರೆಗೂ ನೀಡಬೇಕುಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್.ಟಿ. ಮೋಹನ್ ಕುಮಾರ್ಒತ್ತಾಯಿಸಿದರು.
ಕಾರ್ಮಿಕರ ಕೊರತೆ, ಉತ್ಪಾದನೆ ಇಳಿಕೆ, ಕಾಡಾನೆ ಸಮಸ್ಯೆಗೆ ನಲುಗಿರುವ ಕಾಫಿ ಬೆಳೆಗಾರರುಈಗ ಮಳೆಯಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. 2021ನೇ ಸಾಲಿನಲ್ಲಿ ಸುರಿದ ಅಕಾಲಿಕಮಳೆಯಿಂದ ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಅಂದಾಜು 32 ಸಾವಿರಮೆಟ್ರಿಕ್ ಟನ್ ಕಾಫಿ ಬೆಳೆ ಹಾನಿಯಾಗಿದ್ದು, ಮೂರು ಜಿಲ್ಲೆಗಳಿಂದ ಅಂದಾಜು ₹ 900 ಕೋಟಿನಷ್ಟ ಸಂಭವಿಸಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ ಅಂದಾಜು 8 ಸಾವಿರ ಮೆಟ್ರಿಕ್ ಟನ್ ಬೆಳೆ ಹಾನಿಯಾಗಿದ್ದು, ಅಂದಾಜು ₹240 ಕೋಟಿ, ಚಿಕ್ಕಮಗಳೂರು 15 ಸಾವಿರ ಮೆಟ್ರಿಕ್ ಟನ್, ಕೊಡಗು 9,500 ಮೆಟ್ರಿಕ್ ಟನ್ ಕಾಫಿ ಬೆಳೆ ನಷ್ಟವಾಗಿದೆ. ಕಾರ್ಮಿಕರು ಹಾಗೂ ನಿರ್ವಹಣೆ ವೆಚ್ಚವೂ ಹೆಚ್ಚಾಗಿರುವ ಸಂದರ್ಭದಲ್ಲಿಅತಿವೃಷ್ಟಿಯಿಂದ ಬೆಳೆ ಹಾನಿ ಸಂಭವಿಸಿ ಬೆಳೆಗಾರರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.ಆದ್ದರಿಂದ ಸರ್ಕಾರ ಕೂಡಲೇ ಅಗತ್ಯ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದುಆಗ್ರಹಿಸಿದರು.
ಸರ್ಕಾರ ಕಾಫಿ ಬೆಳೆಗಾರರ ಸಮಸ್ಯೆ ಆಲಿಸಿ, ಬ್ರೆಜಿಲ್ ನಲ್ಲಿ ನೀಡುತ್ತಿರುವ ಪ್ರೋತ್ಸಾಹದಂತೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸಬೇಕು. ಮಳೆ ಹಾನಿ ಅನುಭವಿಸುತ್ತಿರುವ ಜಿಲ್ಲೆಗಳಲ್ಲಿ ಬೆಳೆಗಾರರ ಸಾಲದ ಮೇಲಿನ ಬಡ್ಡಿ ಮನ್ನಾ ಸೇರಿದಂತೆ ಹೊಸದಾಗಿ ಸಾಲ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಬಿ. ಕೃಷ್ಣಪ್ಪ ಮಾತನಾಡಿ, ಮಲೆನಾಡು ಭಾಗದಲ್ಲಿ ಕಾಡಾನೆ ಸಮಸ್ಯೆ ಮಿತಿ ಮೀರಿದೆ. ಇತ್ತೀಚಿನ ದಿನಗಳಲ್ಲಿ ಮಂಗಗಳ ಹಾವಳಿ ಹೆಚ್ಚಿದೆ. ಈ ನಡುವೆ ಜಿಂಕೆಗಳು ಕಾಫಿ ಗಿಡಗಳಿಗೆ ಹಾನಿ ಮಾಡುತ್ತಿವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಫಿ ಬೆಳೆಗಾರ ಎ.ಎನ್. ನಾಗರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.