ಹಾಸನ: ರೈತರ ವಿವಿಧ ಬೆಳೆಗಳಿಗೆ ಸರ್ಕಾರವೇ ಪೂರಕ ಮಾರುಕಟ್ಟೆ ವ್ಯವಸ್ಥೆ ಮಾಡಬೇಕು ಎಂದು ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಯೋಗಾ ರಮೇಶ್ ಒತ್ತಾಯಿಸಿದರು.
ಬೆಲೆ ಏರಿಕೆ ಸಂಬಂಧ ಎಲ್ಲಾ ಕಡೆ ಪ್ರತಿಭಟನೆ ನಡೆಯುತ್ತಿವೆ. ಇದರ ಜೊತೆಯಲ್ಲೇ ಬೆಲೆ ಕುಸಿತದಬಗ್ಗೆಯೂ ಮಾತನಾಡುವಂತೆ ಹೋರಾಟಗಾರರು, ರಾಜಕೀಯ ಮುಖಂಡರು ಹಾಗೂ ಸಂಘ ಸಂಸ್ಥೆಗಳಸದಸ್ಯರಿಗೆ ಮನವಿ ಮಾಡುತ್ತೇನೆ.ಸರ್ಕಾರಗಳು ರೈತರ ಪರ ಹಲವು ಯೋಜನೆ ಪ್ರಕಟ ಮಾಡುತ್ತಿವೆ.ಆದರೆ, ರೈತರಿಗೆ ಪೂರಕವಾಗುವ ರೀತಿಯಲ್ಲಿ ಅನುಷ್ಠಾನವಾಗುತ್ತಿಲ್ಲಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಜಿಲ್ಲೆಯಲ್ಲಿ ಆಲೂಗೆಡ್ಡೆ ಪ್ರಮುಖ ಬೆಳೆಯಾಗಿತ್ತು. ಈಗ ಶುಂಠಿಯನ್ನು ದೊಡ್ಡ ಪ್ರಮಾಣದಲ್ಲಿಬೆಳೆಯುತ್ತಿದ್ದಾರೆ. ಆದರೆ, 60 ಕೆಜಿ ಶುಂಠಿಯ ಬೆಲೆ ಕೇವಲ ₹400ಕ್ಕೆ ಕುಸಿದಿದೆ. ಇದರ ನಡುವೆಹಲವು ರೀತಿ ರೋಗಗಳು ರೈತರನ್ನು ಬಾಧಿಸುತ್ತಿವೆ. ಇದರಿಂದ ಶುಂಠಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆಸಿಲುಕಿದ್ದು, ಬಿತ್ತನೆ ಬೀಜ ಹಾಗೂ ಔಷಧಿಗಾಗಿ ಖರ್ಚು ಮಾಡಿದ ಹಣವೂ ಸಿಗದಂತಾಗಿದೆ ಎಂದರು.
ಶುಂಠಿಯನ್ನು ಕಿತ್ತು ಮಾರಾಟ ಮಾಡಲು ಖರೀದಿಗೆ ಯಾರೂ ಮುಂದೆ ಬರುತ್ತಿಲ್ಲ.ಜಮೀನಿನಲ್ಲೇ ಬಿಟ್ಟರೆ ಕೊಳೆತು ಹೋಗುತ್ತಿದೆ. ಈ ಬಗ್ಗೆ ಎಲ್ಲರೂ ಸರ್ಕಾರದ ಗಮನ ಸೆಳೆಯಬೇಕು. ಸದನದಲ್ಲಿ ಚರ್ಚೆಯಾಗಬೇಕು. ಆದರೆ, ಯಾರಿಂದಲೂ ಈ ಕೆಲಸ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶುಂಠಿ ಬೆಳೆಗಾರರ ಪರವಾಗಿ ದನಿ ಎತ್ತಲು ಪೊಟಾಟೋ ಕ್ಲಬ್ ಮುಂದಾಗಿದೆ. ಎಲ್ಲಾ ಕಡೆ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯ ಸುಮಾರು 50 ಸಾವಿರ ಶುಂಠಿ ಬೆಳೆದಿರುವ ರೈತರಿಗೆ ಬೆಂಬಲ ಕೊಡಬೇಕು. ಇದನ್ನೂ ವಾಣಿಜ್ಯ ಬೆಳೆ ಎಂದು ಪರಿಗಣಿಸಿ ಚೀಲಕ್ಕೆ ₹1500 ಬೆಂಬಲ ಬೆಲೆಕೊಡಬೇಕು. ಮುಂದೆಯಾದರೂ ಆಲೂಗೆಡ್ಡೆ, ಶುಂಠಿ ಬೆಳೆಗೆ ದೃಢೀಕೃತ ಬಿತ್ತನೆ ಬೀಜ ಪೂರೈಸಬೇಕು. ಇದಕ್ಕೆ ಸಬ್ಸಿಡಿ ನೀಡಬೇಕು ಎಂದು ಒತ್ತಾಯಿಸಿದರು.
ತೋಟಗಾರಿಕೆ ಇಲಾಖೆ ಶುಂಠಿ, ಆಲೂ ಬೆಳೆಗಾರರ ವಿಷಯವನ್ನು ಮುಖ್ಯವಾಗಿ ಪರಿಗಣಿಸಿ ಸೂಕ್ತ ಪರಿಹಾರ ಒದಗಿಸಲು ಮುಂದಾಗಬೇಕು. ಇಲ್ಲವಾದರೆ ರೈತರ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಗೋಪಾಲೇಗೌಡ, ನಾಗೇಶ್, ಲೋಕೇಶ್, ವಿರೂಪಾಕ್ಷ ಇದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.