
ಹಾಸನ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಾವಿರ ದಿನಗಳ ಸಂಭ್ರಮಾಚರಣೆಗೆ ಸಿದ್ಧತೆ ನಡೆಸುತ್ತಿದ್ದು, ಈ ಅವಧಿಯಲ್ಲಿ ಅಭಿವೃದ್ಧಿಗಿಂತ ಸಮಸ್ಯೆಗಳೇ ಹೆಚ್ಚಾಗಿವೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ದರೋಡೆ, ಕೊಲೆ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ ಎಂದು ಆರೋಪಿಸಿದರು.
ಸರ್ಕಾರ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಲೂಟಿ ನಡೆಸುತ್ತಿದೆ, ಗೃಹಲಕ್ಷ್ಮಿ ಯೋಜನೆಯಡಿ ತಿಂಗಳಿಗೆ ₹2ಸಾವಿರ ನೀಡುವುದಾಗಿ ಘೋಷಿಸಿದರೂ, ಅದು ಸಮಯಕ್ಕೆ ಸರಿಯಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ. ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ಗ್ಯಾರಂಟಿ ಹಣ ನೀಡಿಲ್ಲ. ₹42 ಸಾವಿರ ಕೋಟಿ ಪ್ರತ್ಯೇಕವಾಗಿ ಮೀಸಲಿಟ್ಟಿದ್ದೇವೆ ಎಂಬುದು ತಪ್ಪು ಮಾಹಿತಿ. ದಲಿತರು, ರೈತರು, ಹಿಂದುಳಿದ ವರ್ಗಗಳು ಹಾಗೂ ಸ್ವಸಹಾಯ ಸಂಘಗಳಿಗೆ ವಂಚನೆ ಆಗಿದೆ ಎಂದರು.
ಅಲ್ಪಸಂಖ್ಯಾತರಿಗೆ ₹718 ಕೋಟಿ ಒಂದು ಬಾರಿ ಸಾಲ ತಿರುವಳಿ ನೀಡಿರುವುದನ್ನು ಸ್ವಾಗತಿಸಿದ ನಾರಾಯಣಸ್ವಾಮಿ, ಇದೇ ರೀತಿಯಲ್ಲಿ ರೈತರು ಹಾಗೂ ಬಡ್ಡಿ ಹೊರೆ ಹೊತ್ತಿರುವ ಸ್ವಸಹಾಯ ಸಂಘಗಳಿಗೆ ಸಹ ಬಡ್ಡಿ ಮನ್ನಾ ಮಾಡಲಿ ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ, ಅಧಿಕಾರ ಬಿಡಲ್ಲ, ಕಿತ್ತುಕೊಳ್ಳುತ್ತೇನೆ ಎಂಬ ಜಂಜಾಟ ನಡೆಯುತ್ತಿದೆ. ಸಿಎಂ ಅಧಿಕಾರ ಬಿಡಲ್ಲ ಎನ್ನುತ್ತಾರೆ. ಡಿ.ಕೆ. ಶಿವಕುಮಾರ್ ಅಧಿಕಾರ ಕಿತ್ತುಕೊಳ್ಳುತ್ತೇನೆ ಎನ್ನುತ್ತಾರೆ. 30 ಶಾಸಕರು ಕುಟುಂಬ ಸಮೇತರಾಗಿ ವಿದೇಶ ಪ್ರವಾಸಕ್ಕೆ ತೆರಳುತ್ತಿರುವ ವಿಚಾರದಲ್ಲಿಯೂ ಗೊಂದಲವಿದ್ದು, ಅದು ವೈಯಕ್ತಿಕ ಹಣವೇ ಅಥವಾ ಸರ್ಕಾರದ ಹಣವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಸಾರಿಗೆ ಇಲಾಖೆಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಹಳೆಯ ಬಸ್ಗಳನ್ನು ರಸ್ತೆಗಿಳಿಸಿರುವುದರಿಂದ ಸರಿಯಾದ ಸೇವೆ ಸಿಗುತ್ತಿಲ್ಲ. ಶಾಲಾ ಮಕ್ಕಳನ್ನು ಟಿಪ್ಪರ್ ವಾಹನಗಳಲ್ಲಿ ಪ್ರವಾಸಕ್ಕೆ ಕರೆದೊಯ್ಯುತ್ತಿರುವ ಘಟನೆಗಳು ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.
ಇಂದಿರಾ ಕಿಟ್ ವಿತರಣೆ ವಿಳಂಬ, ರೈತರ ಸಮಸ್ಯೆಗಳ ಕಡೆ ನಿರ್ಲಕ್ಷ್ಯ ಹಾಗೂ ಜಾಹೀರಾತುಗಳಿಗೆ ಅತಿಯಾದ ಒತ್ತು ನೀಡುವ ಮೂಲಕ ಸರ್ಕಾರ ವೈಫಲ್ಯ ಕಂಡಿದೆ. ಕೆಲಸ ಮಾಡದೇ ಜಾಹೀರಾತುಗಳಿಂದ ಒಳ್ಳೆಯ ಹೆಸರು ಪಡೆಯಲು ಸಾಧ್ಯವಿಲ್ಲ. ರಾಜ್ಯದ ಜನರಿಗೆ ಈ ಸರ್ಕಾರ ಹೊರೆಯಾಗುತ್ತಿದೆ. ಜಾಹೀರಾತಿನ ಮೂಲಕ ಜನರ ತರಿಗೆ ಹಣ ಪೋಲು ಮಾಡಲಾಗುತ್ತಿದೆ ಎಂದು ದೂರಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್, ನಾರಾಯಣಗೌಡ, ಮೋಹನ್, ಚಂದ್ರಣ್ಣ, ಪ್ರಧಾನ ಕಾರ್ಯದರ್ಶಿ ಗಿರೀಶ್, ರೇಣುಕುಮಾರ್ ಇದ್ದರು.
ಮೈತ್ರಿ: ಕೇಂದ್ರ ನಾಯಕರ ತೀರ್ಮಾನವೇ ಅಂತಿಮ
ಮುಂದಿನ ಚುನಾವಣೆಗಳ ಮೈತ್ರಿ ಕುರಿತು ಕೇಂದ್ರ ನಾಯಕರೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು. ಜೆಡಿಎಸ್ ಕುರಿತು ಅನವಶ್ಯಕ ಚರ್ಚೆ ಅಗತ್ಯವಿಲ್ಲ. ನಾವು ಅವರನ್ನು ಗೌರವಿಸುವಂತೆ ಅವರೂ ನಮ್ಮನ್ನು ಗೌರವಿಸಬೇಕು. ಟಿಕೆಟ್ ನೀಡುವ ಅಧಿಕಾರ ಸ್ಥಳೀಯ ಮಟ್ಟದಲ್ಲಿ ಯಾರಿಗೂ ಇಲ್ಲ. ಎಲ್ಲವೂ ಮೇಲ್ಮಟ್ಟದಲ್ಲಿ ಹೈಕಮಾಂಡ್ ನಿರ್ಧಾರದಂತೆ ನಡೆಯುತ್ತದೆ. ಸಣ್ಣ ಕಾರಣಗಳನ್ನು ಹಿಡಿದು ಹೇಳಿಕೆ ನೀಡುವುದು ಸೂಕ್ತವಲ್ಲ ಎಂದರು. ಯಾರೇ ಹೇಳಿಕೆ ನೀಡಿದರೂ ಟಿಕೆಟ್ ಕೊಡುವುದು ಬಿಜೆಪಿ ಹೈಕಮಾಂಡ್. ಎಲ್ಲ ತೀರ್ಮಾನಗಳು ರಾಷ್ಟ್ರಮಟ್ಟದಲ್ಲೇ ಆಗುತ್ತವೆ. ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಜೆಡಿಎಸ್ ಪ್ರಭಾವ ಇರುವುದರಿಂದ ಅಪಸ್ವರಗಳು ಸಹಜ. ಅಂತಿಮವಾಗಿ ವರಿಷ್ಠರು ಕುಳಿತು ತೀರ್ಮಾನ ಮಾಡುತ್ತಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.