ADVERTISEMENT

ಜಕಣಾಚಾರ್ಯರ ಬೃಹತ್ ಪ್ರತಿಮೆ ನಿರ್ಮಾಣ: ವಿಧಾನಪರಿಷತ್ ಸದಸ್ಯ ರಘು ಆಚಾರ್

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 4:43 IST
Last Updated 1 ಫೆಬ್ರುವರಿ 2021, 4:43 IST
ಬೇಲೂರಿನದಲ್ಲಿ ವಿಶ್ವಕರ್ಮ ಸಮಾಜದಿಂದ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮವನ್ನು ಚಿತ್ರದುರ್ಗದ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಉದ್ಘಾಟಿಸಿದರು. ಶಿವಸುಜ್ಞಾನಮೂರ್ತಿ ಸ್ವಾಮೀಜಿ ಇತರರು ಇದ್ದರು
ಬೇಲೂರಿನದಲ್ಲಿ ವಿಶ್ವಕರ್ಮ ಸಮಾಜದಿಂದ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮವನ್ನು ಚಿತ್ರದುರ್ಗದ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಉದ್ಘಾಟಿಸಿದರು. ಶಿವಸುಜ್ಞಾನಮೂರ್ತಿ ಸ್ವಾಮೀಜಿ ಇತರರು ಇದ್ದರು   

ಬೇಲೂರು: ‘ಬೇಲೂರು- ಹಳೇಬೀಡು ಮಾರ್ಗದ ಮಧ್ಯದಲ್ಲಿ 10 ಎಕರೆ ವಿಶಾಲವಾದ ಜಾಗದಲ್ಲಿ ₹ 25 ರಿಂದ ₹ 30 ಕೋಟಿ ಯೋಜನೆಯಲ್ಲಿ ಜಕಣಾಚಾರ್ಯರ ಪಾರ್ಕ್ ನಿರ್ಮಿಸ ಲಾಗುವುದು’ ಎಂದು ಚಿತ್ರದುರ್ಗದ ವಿಧಾನಪರಿಷತ್ ಸದಸ್ಯ ರಘು ಆಚಾರ್ ಹೇಳಿದರು.

ಇಲ್ಲಿನ ವೈಷ್ಣವಗೋಷ್ಠಿ ಸಭಾಂಗಣದಲ್ಲಿ ತಾಲ್ಲೂಕು ವಿಶ್ವಕರ್ಮ ಸಮಾಜದಿಂದ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ವಿಶ್ವಕರ್ಮ ಸಮಾಜದವರು ಕೇವಲ ಒಂದು ಸಮಾಜಕ್ಕೆ ಸೀಮಿತರಾದವರಲ್ಲ. ಅವರು ಇಲ್ಲದಿದ್ದರೆ ಯಾವುದೇ ಕೆಲಸಗಳು ನಡೆಯುವುದಿಲ್ಲ. ಜಕಣಾಚಾರ್ಯರು ಕೆತ್ತಿದ ಶಿಲ್ಪ ಕಲೆಗಳು ವಿಶ್ವ ಪ್ರಸಿದ್ಧಿ ಪಡೆದಿರುವುದರಿಂದ ಸಮಾಜದ ಶಿವಸುಜ್ಞಾನ ಮೂರ್ತಿ ಸ್ವಾಮೀಜಿಯವರ ನೇತೃತ್ವದಲ್ಲಿ ಜಕಣಾಚಾರ್ಯ ಬೃಹತ್ ಪ್ರತಿಮೆಯನ್ನು ನಿರ್ಮಿಸಿ ಬೇಲೂರು ದೇಗುಲ ಇರುವವರೆಗೂ ಜಕಣಾಚಾರ್ಯರು ಇರುತ್ತಾರೆ ಎಂಬುದನ್ನು ಜಗತ್ತಿಗೆ ತೋರಿಸಿ ವಿಶ್ವವೇ ಇತ್ತ ತಿರುಗು ನೋಡುವಂತೆ ಮಾಡಬಹುದು. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ. ಸಮಾಜದವರು ತಮ್ಮಲ್ಲಿರುವ ಗುಂಪುಗಳನ್ನು ಬಿಟ್ಟು ಎಲ್ಲರೂ ಒಂದಾಗಿ’ ಎಂದು ಮನವಿ ಮಾಡಿದರು.

ADVERTISEMENT

ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಮಾತನಾಡಿ, ‘ಬೇಲೂರಿನಲ್ಲಿ ಜಕಣಾಚಾರ್ಯರ ಪ್ರತಿಮೆ ಸ್ಥಾಪಿಸುವುದಕ್ಕೆ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕೊಡುವುದರೊಂದಿಗೆ ವಿಶ್ವಕರ್ಮ ಸಮಾಜದ ಏಳಿಗೆಗೆ ಕೈಲಾದ ಸಹಕಾರ ನೀಡುತ್ತೇನೆ. ಹಾಗೂ ಸಮಾಜದ ಬಂಧುಗಳು, ಯುವಕರು ಹಿರಿಯರ ಸಲಹೆ ಸಹಕಾರದೊಂದಿಗೆ ಸಂಘಟಿತರಾಗಬೇಕು’ ಎಂದರು.

ಈ ಸಂದರ್ಭ ವಿಶ್ವಕರ್ಮ ಸಮಾಜದ ಶಿವಸುಜ್ಞಾನ ಮೂರ್ತಿ ಸ್ವಾಮೀಜಿ, ವಿಶ್ವಕರ್ಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ಪುರುಷೋತ್ತಮಾಚಾರ್, ಕಾರ್ಯದರ್ಶಿ ಉಮೇಶ್, ಖಜಾಂಚಿ ಟೀನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ನಿಶಾಂತ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.