
ಹಳೇಬೀಡು: ಬೇಸಿಗೆ ಬಂದರೆ ಪುಷ್ಪಗಿರಿ ತಪ್ಪಲಿನಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ಸಹಜವಾಗಿದೆ. ಶನಿವಾರ ಸಂಜೆಯಿಂದ ಬಯಲು ರಂಗ ಮಂದಿರ ರಸ್ತೆ ಬದಿಯಲ್ಲಿ ಕುರುಚಲು ಗಿಡಗಳು ಬೆಂಕಿಯಲ್ಲಿ ಹೊತ್ತು ಉರಿದವು. ಭಾನುವಾರ ಸಹ ಗಿಡಗಳನ್ನು ಸುಟ್ಟು ಬೂದಿ ಮಾಡಿದ ಬೆಂಕಿ ಬೇರೆ ಗಿಡಗಳಿಗೆ ವ್ಯಾಪಿಸಿತ್ತು.
ಪುಷ್ಪಗಿರಿ ತಪ್ಪಲಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಕಟ್ಟಡಗಳು ಪಾಳು ಬಿದ್ದಿದ್ದು, ಅಕ್ರಮ ಚಟುವಟಿಕೆ ನಡೆಸುವವರು ತಾಣವನ್ನಾಗಿ ಮಾಡಿಕೊಂಡಿದ್ದಾರೆ.
ಧೂಮಪಾನ ಮಾಡಿ ಎಲ್ಲೆಂದರಲ್ಲಿ ಬಿಡಿ, ಸಿಗರೇಟ್ ತುಂಡುಗಳನ್ನು ಎಸೆಯುವುದರಿಂದ ಕುರುಚಲು ಗಿಡಗಳಲ್ಲಿ ಬೆಂಕಿ ಹತ್ತಿಕೊಂಡು ವ್ಯಾಪಿಸುತ್ತಿದೆ.
ಪುಷ್ಪಗಿರಿ ಬೆಟ್ಟದಲ್ಲಿ ಅರಣ್ಯ ಪ್ರದೇಶ ಇದೆ. ಹೊಸದಾಗಿ ಗಿಡ ನೆಟ್ಟು ಅರಣ್ಯ ಬೆಳೆಸಲಾಗುತ್ತಿದೆ. ಬೆಂಕಿ ನಿಯಂತ್ರಿಸದಿದ್ದರೆ ಅದು ಅರಣ್ಯಕ್ಕೆ ಆವರಿಸುವ ಸಾಧ್ಯತೆ ಇದೆ. ಬೆಂಕಿ ನಂದಿಸುವ ಜತೆಗೆ, ಅಕ್ರಮ ಚಟುವಟಿಕೆ ನಡೆಸಲು ಬರುವವರನ್ನು ಅರಣ್ಯ ಇಲಾಖೆಯವರು ನಿಯಂತ್ರಿಸಬೇಕು ಎಂದು ಹಳೇಬೀಡಿನ ಆನಂದ ವಿನಂತಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.