
ಹಾಸನ: ‘ವೈದ್ಯರು, ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ನಾವೆಲ್ಲರೂ ಸೇವೆ ಮಾಡುವುದು ರೋಗಿಗಳ ಜೀವನ ಉಳಿಸಲು ಮಾತ್ರ. ರೋಗಿಗಳ ಜೊತೆಯಲ್ಲಿ ವೈದ್ಯರಿಗಿಂತ ಹೆಚ್ಚಾಗಿ ನರ್ಸ್ಗಳೇ ಸೇವೆ ಮಾಡುತ್ತಾರೆ’ ಎಂದು ಹಿಮ್ಸ್ ಪ್ರಭಾರ ನಿರ್ದೇಶಕ ಡಾ. ರಾಜಣ್ಣ ಹೇಳಿದರು.
ನಗರದ ಜನಪ್ರಿಯ ಫೌಂಡೇಶನ್ನ ಅಂಗ ಸಂಸ್ಥೆಗಳಾದ ಜನಪ್ರಿಯ ನರ್ಸಿಂಗ್ ಮತ್ತು ಜನಪ್ರಿಯ ಪ್ಯಾರಾ ಮೆಡಿಕಲ್ ಕಾಲೇಜುಗಳ ಆಶ್ರಯದಲ್ಲಿ ನೂತನವಾಗಿ ವ್ಯಾಸಂಗಕ್ಕೆ ಬಂದಿರುವ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪರಿವರ್ತನಾ ಪಠ್ಯಕ್ರಮ ಜನಪ್ರಿಯ ಆರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಜನಪ್ರಿಯ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಉತ್ತಮ ಶಿಕ್ಷಣ ನೀಡುತ್ತಿದ್ದು, ಡಾ.ಬಶೀರ್ ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಯಶಸ್ಸು ದೊರಕಬೇಕಾದರೆ ನಾವು ಅವರನ್ನು ಅನುಸರಿಸಬೇಕು. ಶಿಕ್ಷಣದ ಕಡೆ ಹೆಚ್ಚು ಗಮನ ನೀಡಬೇಕು’ ಎಂದರು.
ರೆಡ್ ಕ್ರಾಸ್ ಜಿಲ್ಲಾ ಸಮಿತಿ ಸಭಾಪತಿ ಎಚ್.ಪಿ. ಮೋಹನ್ ಮಾತನಾಡಿ, ‘ಡಾ.ಅಬ್ದುಲ್ ಬಶೀರ್ ಪರಿಶ್ರಮದಿಂದ ಇಂತಹ ಉತ್ತಮ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದಾರೆ. ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಸೇವೆ ಮತ್ತು ಸಮರ್ಪಣೆ ಮನೋಭಾವ ಬೆಳೆಸಿಕೊಳ್ಳಬೇಕು. ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಶಿಕ್ಷಣದ ಕಡೆ ಹೆಚ್ಚಿನ ಗಮನ ಹರಿಸಲಿ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜನಪ್ರಿಯ ಫೌಂಡೇಶನ್ ಅಧ್ಯಕ್ಷ ಡಾ.ವಿ.ಕೆ. ಅಬ್ದುಲ್ ಬಶೀರ್ ಮಾತನಾಡಿ, ‘3 ವರ್ಷಗಳ ಹಿಂದೆ ಜನಪ್ರಿಯ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜು ಆರಂಭಿಸಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದೇವೆ. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಮತ್ತು ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ’ ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಅತೀಖುರ್ ರಹಮಾನ್, ಕೆ.ಬಿ. ಮಂಜುನಾಥ್ ಮತ್ತು ನಂದನ್ ಪುಟ್ಟಣ ಅವರನ್ನು ಗೌರವಿಸಲಾಯಿತು. ಜನಪ್ರಿಯ ಫೌಂಡೇಶನ್ ಉಪಾಧ್ಯಕ್ಷೆ ಫಾತಿಮಾ ನಸ್ರೀನ್ ಬಶೀರ್, ರಾಯಲ್ ಅಪೋಲೋ ಶಾಲೆಯ ಪ್ರಾಂಶುಪಾಲ ಡಾ. ರವಿಕುಮಾರ್, ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಸದಸ್ಯ ಡಾ. ಕಿರಣ್ ಕುಮಾರ್, ಜನಪ್ರಿಯ ಸೆಂಟ್ರಲ್ ಶಾಲೆಯ ಪ್ರಾಂಶುಪಾಲ ಲಿಬಿನ್ ಝೇವಿಯರ್, ಜನಪ್ರಿಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರವೀಣ್ ಕುಮಾರ್, ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.