ADVERTISEMENT

ಬೇಡಿಕೆ ಈಡೇರಿಕೆಗೆ ಜಿಲ್ಲಾ ಪಂಚಾಯಿತಿ ಎದುರು ಗ್ರಾ.ಪಂ ನೌಕರರ ಪ್ರತಿಭಟನೆ

ಕನಿಷ್ಠ ವೇತನ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 8:56 IST
Last Updated 6 ಜೂನ್ 2020, 8:56 IST
ಹಾಸನ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಗ್ರಾಮ ಪಂಚಾಯಿತಿ ನೌಕರರು ಪ್ರತಿಭಟನೆ ನಡೆಸಿದರು
ಹಾಸನ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಗ್ರಾಮ ಪಂಚಾಯಿತಿ ನೌಕರರು ಪ್ರತಿಭಟನೆ ನಡೆಸಿದರು   

ಹಾಸನ: ಕನಿಷ್ಠ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಹಾಗೂ ಗ್ರಾಮ ಪಂಚಾಯಿತಿ ನೌಕರರ ಸಂಘದ ಆಶ್ರಯದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಶೇಕಡಾ 10ರಷ್ಟು 14ನೇ ಹಣಕಾಸು ಅನುದಾನ ಮತ್ತು ತೆರಿಗೆ ಸಂಗ್ರಹದ ನಿಧಿಗಳನ್ನು ಸಮರ್ಪಕವಾಗಿ ಬಳಸಿ ಬಹುತೇಕ ಪಂಚಾಯಿತಿಗಳಲ್ಲಿ ನೌಕರರಿಗೆ ಪ್ರತಿ ತಿಂಗಳು ವೇತನ ನೀಡುತ್ತಿಲ್ಲ. ನೌಕರರಿಗೆ ಹಲವಾರು ತಿಂಗಳ ವೇತನ ಬಾಕಿ ಉಳಿದಿದೆ ಎಂದು ಆರೋಪಿಸಿದರು.

ಅಲ್ಲದೇ 14ನೇ ಹಣಕಾಸು ಆಯೋಗದ ಅನುದಾನದಲ್ಲಿ ಶೇಕಡಾ 10ರಷ್ಟು ಹಣ ಮತ್ತು ತೆರಿಗೆ ಸಂಗ್ರಹದ ನಿಧಿಯಲ್ಲಿ ಶೇಕಡಾ 40ರಷ್ಟು ಹಣವನ್ನು ನೌಕರರ ವೇತನಕ್ಕೆ ಬಳಸಿಕೊಳ್ಳಲು ಆದೇಶ ನೀಡಬೇಕು. ಇಎಫ್ಎಂಎಸ್ ಸೇರ್ಪಡೆಗೆ ಬಾಕಿ ಉಳಿದಿರುವ ನೌಕರರನ್ನು ಸೇರ್ಪಡೆ ಮಾಡಬೇಕು ಎಂದರು.

ಗ್ರಾಮ ಪಂಚಾಯಿತಿ ನೌಕರರಿಗೂ ಕಡ್ಡಾಯವಾಗಿ ನೌಕರರ ಸೇವಾ ಪುಸ್ತಕ ತೆರೆದು ನಿರ್ವಹಿಸಬೇಕು. ನೀರುಗಂಟಿ ಹುದ್ದೆಯಿಂದ ಬಿಲ್‌ ಕಲೆಕ್ಟರ್ ಹುದ್ದೆಗೆ ಬಡ್ತಿ ನೀಡಬೇಕು. ಅರ್ಹ ನೌಕರರ ಜೇಷ್ಟತಾ ಪಟ್ಟಿ ಬಿಡುಗಡೆ ಮಾಡಿ ಬಿಲ್‍ಕಲೆಕ್ಟರ್ ಮತ್ತು ಕ್ಲರ್ಕ್‍ಗಳಿಗೆ ಕಾರ್ಯದರ್ಶಿ-2 ಹಾಗೂ ಲೆಕ್ಕ ಸಹಾಯಕ್ಕ ಹುದ್ದೆಗೆ ಬಡ್ತಿ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಅನುಕಂಪದ ನೇಮಕಾತಿಗಳನ್ನು ಮಾಡಿಕೊಳ್ಳಲು ಸೂಕ್ತ ನಿರ್ದೇಶನ ನೀಡಬೇಕು. ಮರಣ ಅಥವಾ ನಿವೃತ್ತಿ ಹೊಂದಿದ ನೌಕರರ ಅಥವಾ ಅವಲಂಬಿತರಿಗೆ ಗ್ರಾಚ್ಯುಟಿ ಹಣ ಪಾವತಿಸಿಲ್ಲ. ಕಾನೂನು ಬಾಹಿರವಾಗಿ ಅಕ್ರಮ ನೇಮಕಾತಿ ತಡೆಯಬೇಕು. ಈಗಾಗಲೇ ಮಾಡಿಕೊಂಡವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ನೇಮಕಾತಿ ರದ್ದು ಮಾಡಬೇಕು ಎಂದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್, ಖಜಾಂಚಿ ಕುಮಾರಸ್ವಾಮಿ, ಕಾರ್ಯದರ್ಶಿ ಕೆ.ಟಿ.ಹೊನ್ನೇಗೌಡ, ಜಿಲ್ಲಾ ಉಪಾಧ್ಯಕ್ಷ ಕರಿಯಪ್ಪ, ಅಶೋಕ್ ಅತ್ನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.