ADVERTISEMENT

ಕಾಡಾನೆ–ಮಾನವ ಸಂಘರ್ಷ | ಥರ್ಮಲ್‌ ಡ್ರೋನ್‌ ಕಣ್ಗಾವಲು: ಆನೆಗಳ ಚಲನವಲನದ ಮೇಲೆ ನಿಗಾ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 18:54 IST
Last Updated 11 ಆಗಸ್ಟ್ 2025, 18:54 IST
ರಾತ್ರಿ ವೇಳೆ ಥರ್ಮಲ್‌ ಡ್ರೋನ್‌ ಸೆರೆ ಹಿಡಿದ ಆನೆಗಳ ಚಿತ್ರ
ರಾತ್ರಿ ವೇಳೆ ಥರ್ಮಲ್‌ ಡ್ರೋನ್‌ ಸೆರೆ ಹಿಡಿದ ಆನೆಗಳ ಚಿತ್ರ   

ಹಾಸನ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಾಡಾನೆ–ಮಾನವ ಸಂಘರ್ಷ ನಿವಾರಣೆಗೆ ಮುಂದಾಗಿರುವ ಅರಣ್ಯ ಇಲಾಖೆ ಇದೀಗ, ಜಿಲ್ಲೆಯ ಆನೆಗಳ ಮೇಲೆ ನಿಗಾ ಇಡಲು ಥರ್ಮಲ್‌ ಡ್ರೋನ್‌ ಸ್ಕ್ವಾಡ್‌ ಆರಂಭಿಸಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ, ಭಾನುವಾರ ರಾತ್ರಿ ಹಾಸನ ಜಿಲ್ಲಾ ಆನೆ ಕಾರ್ಯಪಡೆಯ ಸಮಗ್ರ ತಂತ್ರಜ್ಞಾನ ಆಧಾರಿತ ಥರ್ಮಲ್ ಡ್ರೋನ್ ಸ್ಕ್ವಾಡ್ ಅನ್ನು ಉದ್ಘಾಟಿಸಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 60–80 ಕಾಡಾನೆಗಳು ಜನವಸತಿ ಪ್ರದೇಶಗಳಿಗೆ ಬಂದಿದ್ದು, ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿವೆ. ಅದರಲ್ಲೂ ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿಯೇ ಇವುಗಳ ಆವಾಸ ಸ್ಥಾನವಾಗಿದೆ. ಹಾಗಾಗಿ ಆನೆ ಕಾರ್ಯಪಡೆಯ ಕಚೇರಿಯಲ್ಲಿ ಬಿಕ್ಕೋಡಿಗೆ ಸ್ಥಳಾಂತರಿಸಲಾಗಿದೆ. ಇದೀಗ ಈ ಕಚೇರಿಗೆ ಥರ್ಮಲ್‌ ಡ್ರೋನ್‌ ಸ್ಕ್ವಾಡ್ ಅನ್ನು ಒದಗಿಸಲಾಗಿದೆ.

ಹಗಲು ಮತ್ತು ರಾತ್ರಿ ಎನ್ನದೇ ಕಾಡಾನೆಗಳ ಚಲನವಲನ ಸೆರೆ ಹಿಡಿಯಬಲ್ಲ ಸಾಮರ್ಥ್ಯವಿರುವ ಅತ್ಯಾಧುನಿಕ ಥರ್ಮಲ್‌ ಡ್ರೋನ್‌ ಇದಾಗಿದ್ದು, ಇದನ್ನು ಬಳಸಲು ಕಾರ್ಯಪಡೆಯ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.

ADVERTISEMENT

ಅತ್ಯಾಧುನಿಕ ಥರ್ಮಲ್‌ ಡ್ರೋನ್‌ ಕ್ಯಾಮೆರಾವನ್ನು ಮೊದಲ ಬಾರಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ತರಿಸಲಾಗಿತ್ತು. ಅಲ್ಲಿಂದ ವಿವಿಧೆಡೆ ಈ ಡ್ರೋನ್‌ ಸ್ಕ್ವಾಡ್ ಆರಂಭಿಸಲಾಗಿದ್ದು, ಇದೀಗ ಹಾಸನ ಜಿಲ್ಲೆಯಲ್ಲೂ ಕಾರ್ಯಾರಂಭ ಮಾಡಿದಂತಾಗಿದೆ.

ಥರ್ಮಲ್‌ ಡ್ರೋನ್‌ ಕ್ಯಾಮೆರಾಗೆ ಮೂರು ಬ್ಯಾಟರಿಗಳಿದ್ದು, ತಲಾ 40 ನಿಮಿಷದವರೆಗೆ ಚಾರ್ಜ್ ಇರುತ್ತವೆ. ಆನೆಗಳು ಎಲ್ಲಿವೆ ಎಂಬುದರ ಆಧಾರದ ಮೇಲೆ ರಾತ್ರಿ ಮತ್ತು ಹಗಲು ಕ್ಯಾಮೆರಾ ಚಾಲನೆ ಮಾಡಲಾಗುತ್ತದೆ. ಆನೆಗಳು ಪತ್ತೆಯಾದ ತಕ್ಷಣ ಕ್ಯಾಮೆರಾದಲ್ಲಿ ಲೊಕೇಷನ್‌ ಸಹಿತ ಚಿತ್ರ ಸೆರೆ ಹಿಡಿದು, ಅರಣ್ಯ ಇಲಾಖೆ ಸಿಬ್ಬಂದಿಗೆ ಕಳಿಸಲಾಗುತ್ತದೆ. ಕೂಡಲೇ ಅವರು ಕಾರ್ಯಪ್ರವೃತ್ತರಾಗಿ ಆನೆಗಳನ್ನು ಮರಳಿ ಕಾಡಿಗೆ ಕಳುಹಿಸುವ ಕೆಲಸ ಮಾಡುತ್ತಾರೆ. ಅಲ್ಲದೇ ಸ್ಥಳೀಯರಿಗೂ ಮುನ್ನೆಚ್ಚರಿಕೆ ನೀಡಲು ಅನುಕೂಲ ಆಗಲಿದೆ.

ಹಗಲಿನಲ್ಲಿ ಡ್ರೋನ್‌ ಮೂಲಕ ಸೆರೆ ಹಿಡಿದ ಆನೆಗಳ ಚಿತ್ರ

ಜಿಪಿಎಸ್‌ ಮೂಲಕ ಲೊಕೇಷನ್‌ ನಿಗದಿ ಮಾಡಿದರೆ, ಥರ್ಮಲ್‌ ಡ್ರೋನ್‌ ಅಲ್ಲಿಯವರೆಗೂ ನಿರಾಯಾಸವಾಗಿ ಪ್ರಯಾಣಿಸುತ್ತದೆ. ಜೇನು ನೊಣದ ಮಾದರಿಯಲ್ಲಿಯೇ ಶಬ್ದ ಮಾಡುವುದರಿಂದ ಆನೆ, ಹುಲಿ ಸೇರಿದಂತೆ ಯಾವುದೇ ಪ್ರಾಣಿಗಳಿಗೂ ತೊಂದರೆ ಆಗುವುದಿಲ್ಲ. ಆನೆಗಳ ನಿರ್ದಿಷ್ಟ ಜಾಗದ ಚಿತ್ರದ ಸೆರೆ ಹಿಡಿದ ಕೂಡಲೇ ಆನೆ ಕಾರ್ಯಪಡೆಗೆ ರವಾನಿಸಲಾಗುತ್ತದೆ.

ಹಾಸನದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಭಾನುವಾರ ರಾತ್ರಿ ಥರ್ಮಲ್‌ ಡ್ರೋನ್ ಸ್ಕ್ವಾಡ್ ಉದ್ಘಾಟಿಸಿದರು. ಶಾಸಕ ಸಿ.ಎನ್‌. ಬಾಲಕೃಷ್ಣ ಡಿಸಿಎಫ್‌ ಸೌರಭ್‌ಕುಮಾರ್‌ ಇದ್ದರು.

ಸ್ಕ್ವಾಡ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು, ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮೋಹನ ವಿ.ಎಸ್., ಮಧುಸೂಧನ್, ಜಿಲ್ಲೆಯ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಬೇಲೂರಿನ ಆನೆ ಕಾರ್ಯಪಡೆಗೆ ನಿಯೋಜಿಸಿರುವ ಥರ್ಮಲ್‌ ಡ್ರೋನ್‌ ಸ್ಕ್ವಾಡ್ ಹೊಂದಿರುವ ಜೀಪು.
ಡ್ರೋನ್ ಸ್ಕ್ವಾಡ್ ವಾಹನವು ಥರ್ಮಲ್ ಡ್ರೋನ್ ನೊಂದಿಗೆ ಕಂಪ್ಯೂಟರ್ ಸಿಸ್ಟಮ್ ಅನ್ನು ಒಳಗೊಂಡಿದ್ದು ಕಾಡಾನೆಗಳ ಚಲನವಲನಗಳನ್ನು ವಾಹನದಲ್ಲಿಯೇ ಗಮನಿಸಿಕೊಂಡು ಮಾಹಿತಿ ನೀಡಬಹುದಾಗಿದೆ
ಸೌರಭ್‌ಕುಮಾರ್‌ ಡಿಸಿಎಫ್‌
ಕೊಡಗು ಹಾಸನ ಜಿಲ್ಲೆಯಲ್ಲಿ ನೂರಾರು ಕಾಡಾನೆಗಳು ತೋಟಗಳಲ್ಲಿ ಉಳಿದುಕೊಂಡಿವೆ. ಮಾನವ–ಕಾಡಾನೆ ಸಂಘರ್ಷ ನಿವಾರಣೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು ಹಾಸನ ಜಿಲ್ಲೆಯಲ್ಲಿ ಸ್ಕ್ವಾಡ್‌ ಆರಂಭಿಸಲಾಗಿದೆ
ಈಶ್ವರ್‌ ಖಂಡ್ರೆ ಅರಣ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.