ADVERTISEMENT

ಹಾಸನ: ಸಂತೋಷ್‌ ಲಾಡ್ ಜನ್ಮದಿನದ ಅಂಗವಾಗಿ ಆರೋಗ್ಯ ತಪಾಸಣೆ ಶಿಬಿರ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 5:32 IST
Last Updated 28 ಫೆಬ್ರುವರಿ 2026, 5:32 IST
ಹಾಸನದ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಕಾರ್ಮಿಕ ಅಧಿಕಾರಿ ಅನುಪಮಾ, ಪಾಲಿಕೆ ಎಂಜಿನಿಯರ್‌ ಕವಿತಾ ಜಂಟಿಯಾಗಿ ಉದ್ಘಾಟಿಸಿದರು 
ಹಾಸನದ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಕಾರ್ಮಿಕ ಅಧಿಕಾರಿ ಅನುಪಮಾ, ಪಾಲಿಕೆ ಎಂಜಿನಿಯರ್‌ ಕವಿತಾ ಜಂಟಿಯಾಗಿ ಉದ್ಘಾಟಿಸಿದರು    

ಹಾಸನ: ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿಗೆ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದು, ಅರ್ಹ ಕಾರ್ಮಿಕರು ನೋಂದಣಿ ಮಾಡಿಕೊಳ್ಳುವ ಮೂಲಕ ಸೌಲಭ್ಯ ಪಡೆಯುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಯಮುನಾ ತಿಳಿಸಿದರು.

ನಗರದ ಜಿಲ್ಲಾ ವಿದ್ಯುತ್ ಕಾರ್ಮಿಕರ ಸಂಘದಿಂದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರ ಜನ್ಮದಿನದ ಪ್ರಯುಕ್ತ ಶುಕ್ರವಾರ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆ (ಪಿಎಂಎಸ್‌ವೈಎಂ) ಹಾಗೂ ಇ-ಶ್ರಮ್ ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.

ADVERTISEMENT

ಕೋವಿಡ್-19 ಸಂದರ್ಭದಲ್ಲಿ ಆರಂಭವಾದ ಇ-ಶ್ರಮ್ ನೋಂದಣಿಯಿಂದ ಕಾರ್ಮಿಕರ ನಿಖರ ಮಾಹಿತಿ ಲಭ್ಯವಾಗುತ್ತಿದ್ದು, ಇದರಿಂದ ಯಾವ ವರ್ಗದ ಕಾರ್ಮಿಕರು ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ತಿಳಿದು ಸರ್ಕಾರಗಳು ಅಗತ್ಯ ಯೋಜನೆ ರೂಪಿಸಲು ಸಾಧ್ಯವಾಗಲಿದೆ ಎಂದರು.

ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದು ಅತ್ಯಂತ ಮಹತ್ವವಾಗಿದ್ದು, ನೋಂದಣಿ ಮಾಡಿದ ತಕ್ಷಣವೇ ಸೌಲಭ್ಯ ಸಿಗದಿದ್ದರೂ, ಅವಶ್ಯಕತೆ ಉಂಟಾದ ಸಂದರ್ಭದಲ್ಲಿ ಖಂಡಿತ ಲಭ್ಯವಾಗಲಿದೆ ಎಂದು ಭರವಸೆ ನೀಡಿದರು.

ಪಿಎಂಎಸ್‌ವೈಎಂ ಪಿಂಚಣಿ ಯೋಜನೆಯಡಿ 18ರಿಂದ 40 ವರ್ಷದೊಳಗಿನ ಅಸಂಘಟಿತ ಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರು ವಯೋಮಾನಕ್ಕೆ ಅನುಗುಣವಾಗಿ ತಿಂಗಳಿಗೆ ₹55ರಿಂದ ₹200ರವರೆಗೆ ವಂತಿಕೆ ಪಾವತಿಸಬೇಕು. ಕಾರ್ಮಿಕರು ಪಾವತಿಸುವ ವಂತಿಕೆಗೆ ಸಮಾನ ಮೊತ್ತವನ್ನು ಕೇಂದ್ರ ಸರ್ಕಾರವೂ ಪಾವತಿಸಲಿದೆ. ಈ ಮೊತ್ತ ಪಿಂಚಣಿ ಖಾತೆಯಲ್ಲಿ ಸಂಗ್ರಹವಾಗುತ್ತದೆ ಎಂದು ವಿವರಿಸಿದರು.

ಕಾರ್ಮಿಕರು 60 ವರ್ಷ ಪೂರೈಸಿದ ಬಳಿಕ ತಿಂಗಳಿಗೆ ₹3ಸಾವಿರ ಪಿಂಚಣಿ ನೇರವಾಗಿ ಖಾತೆಗೆ ಜಮೆಯಾಗಲಿದೆ. ಮರಣ ಹೊಂದಿದಲ್ಲಿ ನಾಮನಿರ್ದೇಶಿತರಿಗೆ ಶೇ 50ರಷ್ಟು ಆರ್ಥಿಕ ನೆರವು ಸಿಗಲಿದೆ. ವಂತಿಕೆ ಪಾವತಿಯನ್ನು ಮಧ್ಯದಲ್ಲಿ ನಿಲ್ಲಿಸಿದರೂ, ಬಡ್ಡಿ ಸೇರಿಸಿ ಹಣ ವಾಪಸ್ ಪಡೆಯಲು ಅವಕಾಶವಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಎಂಜಿನಿಯರ್ ಕೆ.ಆರ್. ಕವಿತಾ, ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಆರ್. ಕೆಂಚೇಗೌಡ, ಕಾರ್ಮಿಕ ಇಲಾಖೆ ಇನ್‌ಸ್ಪೆಕ್ಟರ್ ಆನಂದ್‌ರಾಮ್, ನಾಗರಾಜ್ ಹೆತ್ತೂರು, ಸ್ಕೌಟ್ಸ್‌ ಅಂಡ್ ಗೈಡ್ಸ್‌ನ ಕಾಂಚನಮಾಲ, ಸ್ವಾಮಿ, ರಾಮೇಗೌಡ, ಬಾಬು, ವರಪ್ರಸಾದ್, ಬಾಲಸುಬ್ರಹ್ಮಣ್ಯ, ಸಂದೀಪ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.