ADVERTISEMENT

ಹಾಸನದ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ವೇಗ: 2-3 ತಿಂಗಳಲ್ಲಿ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 4:50 IST
Last Updated 2 ಫೆಬ್ರುವರಿ 2026, 4:50 IST
ಹಾಸನದ ಚನ್ನಪಟ್ಟಣದ ಬಳಿ ನಿರ್ಮಿಸುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದು 
ಹಾಸನದ ಚನ್ನಪಟ್ಟಣದ ಬಳಿ ನಿರ್ಮಿಸುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದು    

ಹಾಸನ: ವರ್ಷಗಳ ಕಾಲ ನಗರದ ಪ್ರಮುಖ ಸಮಸ್ಯೆಯಾಗಿರುವ ರೇಲ್ವೆ ಮೇಲ್ಸೇತುವೆ ಕಾಮಗಾರಿ ಇದೀಗ ಸ್ವಲ್ಪ ವೇಗವಾಗಿದೆ. ವಾಹನ ದಟ್ಟಣೆಗೆ ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ 2018ರಲ್ಲಿ ಆರಂಭಿಸಲಾದ ಈ ಮೇಲ್ಸೇತುವೆ ಕಾಮಗಾರಿ, ರಾಜಕೀಯ ಮೇಲಾಟ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕುಂಟುತ್ತಲೇ ಸಾಗುತ್ತಿದೆ.

ಈ ಮಹತ್ವದ ಯೋಜನೆಯನ್ನು 2 ವರ್ಷದೊಳಗೆ ಪೂರ್ಣಗೊಳಿಸುವ ಭರವಸೆ ನೀಡಲಾಗಿತ್ತು. ಅಂದುಕೊಂಡಂತೆ ಎಲ್ಲವೂ ನಡೆದಿದ್ದರೆ, ಈ ವೇಳೆಗೆ ಮೇಲ್ಸೇತುವೆಯ ನಾಲ್ಕು ಪಥಗಳಲ್ಲೂ ವಾಹನ ಸಂಚಾರ ಆರಂಭವಾಗಿ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಬೇಕಿತ್ತು. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ಜಟಾಪಟಿ, ಅನುದಾನ ಬಿಡುಗಡೆ ವಿಳಂಬ ಹಾಗೂ ನಿರಂತರ ನಿರ್ಲಕ್ಷ್ಯದಿಂದ ಕಾಮಗಾರಿ ವರ್ಷಗಳ ಕಾಲ ವಿಳಂಬವಾಗುತ್ತಿದ್ದು, ವಾಹನ ಸವಾರರ ಸಮಸ್ಯೆ ಮುಂದುವರಿದೇ ಇದೆ.

ಒಂದು ಹಂತದಲ್ಲಿ ಮೇಲ್ಸೇತುವೆಗೆ ಅಗತ್ಯವಿರುವ ಅನುದಾನ ಕೊಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೇಳಿತ್ತು. ನಂತರ ಜೆಡಿಎಸ್‌ ನಾಯಕರು, ರೈಲ್ವೆ ಸಚಿವರನ್ನು ಭೇಟಿಯಾಗಿ ಮೇಲ್ಸೇತುವೆಗೆ ಅನುದಾನ ಒದಗಿಸುವಂತೆ ಮನವಿ ಮಾಡಿದ್ದರು. ಅದಾದ ನಂತರ ಎರಡು ಸಮಾವೇಶ ನಡೆಸಿದ ಕಾಂಗ್ರೆಸ್‌ ಮುಖಂಡರು, ಜನರ ಒತ್ತಾಯಕ್ಕೆ ಮಣಿದು ಅನುದಾನ ಒದಗಿಸಿದ್ದಾರೆ.

ADVERTISEMENT

ಇದೀಗ ಬಹಳ ತಡವಾದರೂ ಯೋಜನೆಯ ಒಂದು ಹಂತದವರೆಗೆ ಬಂದಿದ್ದು, ಎರಡು ಪಥಗಳ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಮತ್ತೊಂದು ಬದಿಯ ಮೇಲ್ಸೇತುವೆ ಕಾಮಗಾರಿ ಶೇ. 80ರಷ್ಟು ಮುಗಿದಿದ್ದು, ಉಳಿದ ಕೆಲಸಗಳು ಪ್ರಗತಿಯಲ್ಲಿವೆ.

ಪ್ರಸ್ತುತ ರೈಲ್ವೆ ಟ್ರ್ಯಾಕ್ ಮೇಲಿನ ಭಾಗದಲ್ಲಿ ಸ್ಟೀಲ್‌ನ ಬೃಹತ್ ಕಮಾನು ಅಳವಡಿಕೆ ಕಾರ್ಯ ನಡೆಯುತ್ತಿದ್ದು, ಎರಡು ಕ್ರೇನ್‌ಗಳು ಹಾಗೂ ಜೆಸಿಬಿ ಸಹಾಯದಿಂದ ಕಮಾನು ಅಳವಡಿಸಲಾಗುತ್ತಿದೆ. ಈ ಕಾಮಗಾರಿ ಪೂರ್ಣಗೊಂಡರೆ ಮುಂದಿನ 2–3 ತಿಂಗಳೊಳಗೆ ನಾಲ್ಕು ಪಥಗಳಲ್ಲೂ ವಾಹನ ಸಂಚಾರ ಆರಂಭವಾಗುವ ಸಾಧ್ಯತೆ ಇದೆ.

ಮೇಲ್ಸೇತುವೆ ಕಾಮಗಾರಿ ವಿಳಂಬದಿಂದ ನಗರದಲ್ಲಿ ನಿತ್ಯ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು, ವಕೀಲರು, ನ್ಯಾಯಾಲಯಕ್ಕೆ ತೆರಳುವವರು ಹಾಗೂ ವಿವಿಧ ಇಲಾಖೆಗಳ ಕಚೇರಿಗಳಿಗೆ ಹೋಗುವವರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ.

ಎರಡೂ ಬದಿಯ ಮೇಲ್ಸೇತುವೆ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾದರೆ ನ್ಯಾಯಾಲಯ ಸೇರಿದಂತೆ ಪ್ರಮುಖ ಪ್ರದೇಶಗಳಿಗೆ ತೆರಳಲು ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹಿರಿಯ ವಕೀಲ ಮೋಹನ್ ಅಭಿಪ್ರಾಯಪಟ್ಟಿದ್ದಾರೆ.

ಕ್ರೇನ್ ಸಹಾಯದಿಂದ ರೈಲ್ವೆ ಮೇಲ್ಸೇತುವೆಗೆ ಸ್ಟೀಲ್‌ ಕಮಾನು ಅಳವಡಿಸಲಾಯಿತು 
ರಾಜ್ಯ ಸರ್ಕಾರದಿಂದ ಮೇಲ್ಸೇತುವೆ ಕಾಮಗಾರಿಗೆ ಅಗತ್ಯ ಅನುದಾನ ಈಗಾಗಲೇ ಬಿಡುಗಡೆಯಾಗಿದ್ದು ಜೂನ್ ಅಂತ್ಯದೊಳಗೆ ಕಾಮಗಾರಿ ಸಂಪೂರ್ಣವಾಗಿ ಮುಗಿಸಲಾಗುವುದು.
ಶ್ರೇಯಸ್ ಪಟೇಲ್ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.