
ಹಾಸನ: ‘ಪ್ರತಿಯೊಂದು ಘಟನೆ ಮತ್ತು ಉತ್ಪಾದನೆಯ ಹಿಂದೆಯೂ ವೈಜ್ಞಾನಿಕ ಕಾರಣಗಳಿರುತ್ತವೆ. ವಿಜ್ಞಾನದಿಂದ ಮಾತ್ರ ಈ ಜಗತ್ತು ಅಭಿವೃದ್ಧಿ ಹೊಂದಲು ಸಾಧ್ಯ’ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ (ಬಿಜಿವಿಎಸ್) ಜಿಲ್ಲಾ ಘಟಕದ ಕಾರ್ಯದರ್ಶಿ, ಸಾಹಿತಿ ಚಿನ್ನೇನಹಳ್ಳಿ ಸ್ವಾಮಿ ಅಭಿಪ್ರಾಯಪಟ್ಟರು.
ದೊಡ್ಡಗೇಣಿಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿಜಿವಿಎಸ್ ಹಾಗೂ ಶಾಲೆಯ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಅವರು ಉಪನ್ಯಾಸ ನೀಡಿದರು.
‘ಸಂವಿಧಾನದ ಆಶಯದಂತೆ ಪ್ರತಿಯೊಬ್ಬರೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಹಾಗೂ ಇತರರಿಗೆ ಪ್ರೇರೇಪಿಸುವುದು ನಮ್ಮ ಮೂಲಭೂತ ಕರ್ತವ್ಯ. ವಿದ್ಯಾರ್ಥಿಗಳು ಯಾವುದನ್ನೂ ಕುರುಡಾಗಿ ನಂಬದೇ, ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು.
‘ನಮಗೆ ಸಂಸ್ಕೃತಿ ಮತ್ತು ಸಂಪ್ರದಾಯಗಳು ಬೇಕು. ಆದರೆ ಮೌಢ್ಯ ಬೇಡ. ಮೊದಲು ನಿಮ್ಮನ್ನು ನೀವು ನಂಬಿ. ಪೋಷಕರ ಮೇಲೆ ಸಂಪೂರ್ಣ ಅವಲಂಬಿತರಾಗದೇ ಬದುಕಲು ಕಲಿಯಿರಿ. ಬಸವಣ್ಣನವರ ಕಾಯಕವೇ ಕೈಲಾಸ ತತ್ವವನ್ನು ಅಳವಡಿಸಿಕೊಳ್ಳಿ. ಪ್ರಕೃತಿ ನಮಗೆ ನೀಡಿರುವ ಸಂಪನ್ಮೂಲಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಚಿಂತಿಸಬೇಕು’ ಎಂದು ಸಲಹೆ ನೀಡಿದರು.
ಪ್ಲಾಸ್ಟಿಕ್ ತ್ಯಾಜ್ಯದಿಂದ ಇಟ್ಟಿಗೆ ತಯಾರಿಕೆ: ಇದೇ ಸಂದರ್ಭದಲ್ಲಿ ಶಾಲೆಯ ಇಕೋ ಕ್ಲಬ್ ವತಿಯಿಂದ ನಡೆದ ಕಸದಿಂದ ರಸ ಕಾರ್ಯಕ್ರಮದಲ್ಲಿ ಬಿಜಿವಿಎಸ್ ಜಿಲ್ಲಾ ಪ್ರಕಟಣಾ ಸಮಿತಿ ಸಂಚಾಲಕಿ ಮೋನಿಕಾ ಅವರು ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಿದರು.
‘ಭೂಮಿಯ ಪರಿಸರ ನಾಶಕ್ಕೆ ನಾವು ಎಲ್ಲೆಂದರಲ್ಲಿ ಎಸೆಯುವ ಕಸವೇ ಮೂಲ ಕಾರಣ. ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿ ಮಾಡದ ಕಾರಣ, ಅವು ಮಣ್ಣು ಸೇರಿ ಮೈಕ್ರೋ ಪ್ಲಾಸ್ಟಿಕ್ ಆಗಿ ಪರಿವರ್ತನೆಗೊಂಡು, ಮತ್ತೆ ಮನುಷ್ಯನ ದೇಹ ಸೇರಿ ಕ್ಯಾನ್ಸರ್ನಂತಹ ಮಾರಕ ರೋಗಗಳಿಗೆ ಕಾರಣವಾಗುತ್ತಿವೆ. ಚಿಕ್ಕ ಪ್ಲಾಸ್ಟಿಕ್ ತುಂಡು ಕೂಡ ಭೂಮಿಗೆ ಸೇರದಂತೆ ತಡೆಯುವುದು ನಾವು ಸಮಾಜಕ್ಕೆ ಕೊಡುವ ಅತಿದೊಡ್ಡ ಕೊಡುಗೆ. ಕಸವನ್ನು ರಸವನ್ನಾಗಿ ಮಾಡುವ ಕಲೆಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ಅಲಂಕಾರಿಕ ಇಟ್ಟಿಗೆಗಳನ್ನು ತಯಾರಿಸುವ ಪ್ರಾತ್ಯಕ್ಷಿಕೆಯನ್ನು ಮೋನಿಕಾ ಅವರು ಮಾಡಿತೋರಿಸಿದರು. ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಆಶಾ ಕಿರಣ್, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
‘ವಿಜ್ಞಾನದ ಬಗ್ಗೆ ಕುತೂಹಲ ಬೆಳೆಸಿಕೊಳ್ಳಿ’
ಹಾಸನ: ಸರ್ ಸಿ.ವಿ. ರಾಮನ್ ಅವರ ನಾನ್ನುಡಿಯಂತೆ ಯುವಕರು ಸತತ ಪ್ರಯತ್ನ ಹಾಗೂ ವಿಜ್ಞಾನದ ಬಗ್ಗೆ ಸದಾ ಕುತೂಹಲ ಬೆಳೆಸಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಚ್.ಎಂ. ಶಿವಮೂರ್ತಿ ಹೇಳಿದರು. ನಗರದ ಆರ್.ಸಿ. ರಸ್ತೆ ಗಂಧದ ಕೋಠಿ ಆವರಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಕೇಂದ್ರ ಸರ್ಕಾರದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವ್ಯಾಪ್ತಿಯ ಮೈ ಭಾರತ ಕಲ್ಪಿತ ಜನಜಾಗೃತಿ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಂಸ್ಥೆ ವೈಭವ ಯುವತಿ ಸಾಂಸ್ಕೃತಿಕ ಸಮಾಜ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನದಲ್ಲಿ ಅವರು ಮಾತನಾಡಿದರು. ನಾವೆಲ್ಲರೂ ವಿಜ್ಞಾನದ ಹಾದಿಯಲ್ಲಿ ಸಾಗಬೇಕಾಗಿದ್ದು ವಿಜ್ಞಾನ ಲೋಕದಲ್ಲಿನ ವಿಸ್ಮಯಗಳ ಬಗ್ಗೆ ಜ್ಞಾನ ಹೊಂದಬೇಕು. ವಿಜ್ಞಾನ ಎಂಬ ಪದದಲ್ಲಿಯೇ ಜ್ಞಾನ ಅಡಗಿದ್ದು ನಮ್ಮ ಯುವ ಸಮೂಹ ಜ್ಞಾನ ಸಂಪಾದನೆಯ ಕಡೆಗೆ ಹೆಚ್ಚು ಒತ್ತು ನೀಡಬೇಕು. ಪಠ್ಯದ ರೂಪದಲ್ಲಿ ಜ್ಞಾನದ ಜೊತೆಗೆ ನಮ್ಮ ಸುತ್ತ ನಡೆಯುವ ವಿಸ್ಮಯ ಸಂಗತಿಗಳನ್ನು ವಿಜ್ಞಾನದ ದೃಷ್ಟಿಕೋನದಲ್ಲಿ ನೋಡುವುದರೊಂದಿಗೆ ಅವುಗಳನ್ನು ಪ್ರಶ್ನಿಸಿ ಪ್ರಯೋಗದ ಮೂಲಕ ಸತ್ಯಾಸತ್ಯೆಗಳ ಬಗ್ಗೆ ಜನ ಸಾಮಾನ್ಯರಿಗೆ ಅರ್ಥ ಮಾಡಿಸಬೇಕಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಮಾತನಾಡಿ ಭಾರತದಲ್ಲಿ ವಿಜ್ಞಾನ ಕ್ಷೇತ್ರ ಸಾಕಷ್ಟು ಬೆಳೆದಿದ್ದರೂ ಮೂಢನಂಬಿಕೆ ಆಚರಣೆಗಳು ಜಾರಿಯಲ್ಲಿವೆ. ಇದನ್ನು ಹೋಗಲಾಡಿಸುವ ಮೂಲಕ ವಿಜ್ಞಾನದ ಹಾದಿಯಲ್ಲಿ ಯುವ ಜನತೆ ಸಾಗಬೇಕಿದೆ ಎಂದರು. ಮೈ ಭಾರತ ಸಂಸ್ಥೆಯ ಹರೀಶ್ ಕಾಲೇಜಿನ ಸಹ ಪ್ರಾಧ್ಯಾಪಕ ನಂದನ್ ಉಪನ್ಯಾಸಕ ಪುಟ್ಟರಾಜು ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.