ADVERTISEMENT

ಹಾಸನ | ಹೆಚ್ಚು ಸಮಯ ಗ್ರಂಥಾಲಯದಲ್ಲಿ ಕಳೆಯಿರಿ: ಕೆ.ಟಿ. ನಾಗರಾಜು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 11:32 IST
Last Updated 10 ಮಾರ್ಚ್ 2025, 11:32 IST
ಹಾಸನದ ಆರ್.ಸಿ. ರಸ್ತೆ ಗಂಧದಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗ್ರಂಥಾಲಯದ ಮಹತ್ವ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಲೂರು ನಗರ ಗ್ರಂಥಾಲಯದ ಗ್ರಂಥಪಾಲಕ ಕೆ.ಟಿ. ನಾಗರಾಜು ಉದ್ಘಾಟಿಸಿದರು.
ಹಾಸನದ ಆರ್.ಸಿ. ರಸ್ತೆ ಗಂಧದಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗ್ರಂಥಾಲಯದ ಮಹತ್ವ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಲೂರು ನಗರ ಗ್ರಂಥಾಲಯದ ಗ್ರಂಥಪಾಲಕ ಕೆ.ಟಿ. ನಾಗರಾಜು ಉದ್ಘಾಟಿಸಿದರು.   

ಹಾಸನ: ವಿದ್ಯಾರ್ಥಿಗಳು ಪಾಠ ಪ್ರವಚನಗಳ ಜೊತೆಗೆ ಹೆಚ್ಚು ಸಮಯವನ್ನು ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದಲು ಬಳಸಿಕೊಳ್ಳಬೇಕು ಎಂದು ಆಲೂರು ನಗರ ಗ್ರಂಥಾಲಯದ ಗ್ರಂಥಪಾಲಕ ಕೆ.ಟಿ. ನಾಗರಾಜು ಹೇಳಿದರು.

ನಗರದ ಆರ್.ಸಿ. ರಸ್ತೆ ಗಂಧದಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯ ವಿಭಾಗದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಗ್ರಂಥಾಲಯದ ಮಹತ್ವ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿನಲ್ಲಿ ಇರುವ ಒಳ್ಳೆಯ ದೇವಾಲಯವೆಂದರೆ ಅದುವೇ ಗ್ರಂಥಾಲಯ. ಗ್ರಂಥಾಲಯ ಎನ್ನುವುದು ಜ್ಞಾನದ ಕೇಂದ್ರ. ಗ್ರಂಥಾಲಯದಲ್ಲಿ ಪುಸ್ತಕವನ್ನು ಓದಿ ಜ್ಞಾನವನ್ನು ವೃದ್ದಿ ಮಾಡಿಕೊಳ್ಳಬೇಕು. ಪುಸ್ತಕಕ್ಕೆ ಮನುಷ್ಯನನ್ನು ಬದಲಾಯಿಸುವ ಶಕ್ತಿ ಇದೆ. ಸರಿಯಾದ ರೀತಿಯಲ್ಲಿ ಪುಸ್ತಕವನ್ನು ಬಳಸಿಕೊಳ್ಳುವ ಮೂಲಕ ಗ್ರಂಥಾಲಯದ ಸದ್ಬಳಕೆ ಮಾಡಿಕೊಳ್ಳಬಹುದು. ಅಧ್ಯಯನದಿಂದ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಮಾತನಾಡಿ, ಗ್ರಂಥಾಲಯ ಎನ್ನುವುದನ್ನು ಜ್ಞಾನಕೋಶ ಎಂದರೆ ತಪ್ಪಾಗದು. ಗ್ರಂಥಾಲಯ ಪುಸ್ತಕಗಳ ಆಲಯ. ಶಾಲಾ-ಕಾಲೇಜುಗಳಲ್ಲಿ ಶೇ 60 ರಷ್ಟು ಜ್ಞಾನ ಗ್ರಂಥಾಲಯದಲ್ಲಿ ಸಿಗುತ್ತದೆ. ಗ್ರಂಥಾಲಯವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ವಿದ್ಯಾರ್ಥಿಗಳ ಕರ್ತವ್ಯ. ಅತಿ ಹೆಚ್ಚು ಅಧ್ಯಯನ ಮಾಡುವುದರಿಂದ ಸಾಧನೆಯ ಮೆಟ್ಟಿಲನ್ನು ತಲುಪಲು ಸಾಧ್ಯವಾಗುತ್ತದೆ. ಪುಸ್ತಕವನ್ನು ಓದುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳ ಜ್ಞಾನಾರ್ಜನೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಗ್ರಂಥಾಲಯ ವಿಭಾಗದ ಮುಖ್ಯಸ್ಥೆ ಎಂ.ವಿ. ಹೇಮಾವತಿ, ಗ್ರಂಥಪಾಲಕಿ ಡಿ.ಎನ್. ಸ್ಮಿತಾ, ಐ.ಕ್ಯೂ.ಎ.ಸಿ. ಸಂಚಾಲಕ ಜಿ.ಆರ್. ಮೋಹನ್ ಕುಮಾರ್, ಉಪನ್ಯಾಸಕರು, ವಿದ್ಯಾರ್ಥಿನಿಯರು  ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.