ADVERTISEMENT

ಶಾಸಕ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ಎಚ್‌.ಡಿ. ರೇವಣ್ಣ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 6:21 IST
Last Updated 26 ಫೆಬ್ರುವರಿ 2026, 6:21 IST
ಅರಸೀಕೆರೆಯ ತರಕಾರಿ ಮಾರುಕಟ್ಟೆಗೆ ಬುಧವಾರ ಭೇಟಿ ನೀಡಿದ ಶಾಸಕ ಎಚ್‌.ಡಿ. ರೇವಣ್ಣ, ವ್ಯಾಪಾರಿಗಳ ಜೊತೆ ಮಾತನಾಡಿದರು 
ಅರಸೀಕೆರೆಯ ತರಕಾರಿ ಮಾರುಕಟ್ಟೆಗೆ ಬುಧವಾರ ಭೇಟಿ ನೀಡಿದ ಶಾಸಕ ಎಚ್‌.ಡಿ. ರೇವಣ್ಣ, ವ್ಯಾಪಾರಿಗಳ ಜೊತೆ ಮಾತನಾಡಿದರು    

ಅರಸೀಕೆರೆ: ‘ಅಧಿಕಾರದ ಮದದಲ್ಲಿ ಬಡವರು ಹಾಗೂ ಬೀದಿ ಬದಿ ವ್ಯಾಪಾರಿಗಳನ್ನು ಗೋಳು ಹೊಯ್ಕೊ ಬೇಡ. ಜನ ಕಣ್ಣು ಬಿಟ್ಟರೆ ಯಾವ ಗಳಿಗೆಯಲ್ಲಿ ಏನಾಗುತ್ತೋ ಗೊತ್ತಿಲ್ಲ. ಗಿರಾಕಿಯ ಅಧಿಕಾರದ ಪರಮಾವಧಿಯಾಗಿದ್ದು, ಅಧಿಕಾರ ಎಂದಿಗೂ ಶಾಶ್ವತವಲ್ಲ. ಎಚ್ಚರಿಕೆ ಇರಲಿ’ ಎಂದು ಶಿವಲಿಂಗೇಗೌಡರ ಹೆಸರು ಪ್ರಸ್ತಾಪಿಸದೇ ಶಾಸಕ ಎಚ್.ಡಿ. ರೇವಣ್ಣ ವಾಗ್ದಾಳಿ ನಡೆಸಿದರು.

ನಗರದ ತರಕಾರಿ ಮಾರುಕಟ್ಟೆಗೆ ಬುಧವಾರ ಭೇಟಿ ನೀಡಿದ ಅವರು, ವ್ಯಾಪಾರಸ್ಥರ ಸಮಸ್ಯೆಗಳು ಹಾಗೂ ದೂರುಗಳನ್ನು ಆಲಿಸಿದ ನಂತರ ಮಾತನಾಡಿದರು.

‘ಈಗಿರುವ ತರಕಾರಿ ಮಾರುಕಟ್ಟೆಯನ್ನು ಫುಡ್‌ ಕೋರ್ಟ್‌ ಮಾಡಲು ಹೊರಟಿದ್ದಾರೆ. ಹಲವಾರು ದಶಕಗಳಿಂದ ಫುಟ್‌ಪಾತ್‌ಗಳಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ನಿರ್ವಹಿಸುತ್ತಿರುವ ಬಡವರ ಮೇಲೆ ಶಾಸಕರು ತೆಗೆದುಕೊಂಡಿರುವ ತೀರ್ಮಾನ ಖಂಡನೀಯ. ಫುಡ್‌ ಕೋರ್ಟ್‌ ಮಾಡಲಿ. ಆದರೆ ಬೇರೆ ಕಡೆ ಸೂಕ್ತ ಸ್ಥಳದಲ್ಲಿ ಮಾಡಲಿ. ಅಲ್ಲಿರುವ ಎಲ್ಲ ಕುಟುಂಬಗಳ ಬಳಿ ಚರ್ಚಿಸಿ ಅವರ ಜೀವನ ಉತ್ತಮ ಪಡಿಸುವ ನಿಟ್ಟಿನಲ್ಲಿ ಇವರ ಹೋರಾಟ ಇರಬೇಕು’ ಎಂದರು.

ADVERTISEMENT

‘ಎಚ್‌ಡಿಸಿಸಿ ಬ್ಯಾಂಕ್‌ನಿಂದ ಅರಸೀಕೆರೆಗೆ ಇವತ್ತಿನವರೆಗೆ ₹220 ಕೋಟಿ ಸಾಲ ನೀಡಿದ್ದೇವೆ. ಮೊದಲ ಸ್ಥಾನ ಹಾಸನ, ಎರಡನೇ ಚನ್ನರಾಯಪಟ್ಟಣ, ಮೂರನೇ ಸ್ಥಾನದಲ್ಲಿ ಅರಸೀಕೆರೆ ಕ್ಷೇತ್ರ ಇದೆ. ನಾವು ಎಂದಿಗೂ ಅರಸೀಕೆರೆ ಕ್ಷೇತ್ರ ಕೈ ಬಿಟ್ಟಿಲ್ಲ. ರೈತರಿಗೆ ₹40 ಸಾವಿರಕ್ಕೆ ಟಿ.ಸಿ ಕೊಟ್ಟಾಗ ಇವರಿದ್ದರಾ? ಕೆಇಬಿ ಡಿವಿಜನ್‌, ಬಾಣಾವಾರ, ಗಂಡಸಿ ಉಪವಿಭಾಗ, ಕುಡಿಯುವ ನೀರು, ಎಂಜಿನಿಯರಿಂಗ್‌ ಕಾಲೇಜು ಸೇರಿದಂತೆ ಇನ್ನಿತರ ಕೆಲಸಗಳಿಗೆ ದೇವೇಗೌಡರ ಕೊಡುಗೆ ಇದೆ’ ಎಂದರು.

‘ರಾಜಕೀಯವಾಗಿ ಉಳಿಸಿ ಬೆಳೆಸಿದ ದೇವೇಗೌಡರೇ ಜನಗಳು ನಿಮ್ಮ ಮುಖ ನೋಡಿ ಮತ ಹಾಕುವುದಿಲ್ಲ. ದುಡ್ಡು ಇದ್ದರೆ ಮತ ಹಾಕುವುದು ಎಂದು ಬಹಿರಂಗವಾಗಿ ಹೇಳಿದ್ದಾರೆ. ಜನರನ್ನು ಹಣದಿಂದ ಅಳೆಯುತ್ತಾನೆ ಈ ಗಿರಾಕಿ. ದೇವೇಗೌಡರು ಹಾಗೂ ರೇವಣ್ಣ ರಾಜಕೀಯ ಮುಗಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ’ ಎಂದು ಹೇಳಿದರು.

‘1991 ರಲ್ಲಿ ದೇವೇಗೌಡರ ಲೋಕಸಭಾ ಚುನಾವಣೆಯಲ್ಲಿ ಈ ಗಿರಾಕಿ ಎಲ್ಲಿ ಇದ್ದ. ನಾನು ಹಿಂಬಾಗಿಲ ರಾಜಕಾರಣ ಮಾಡಿಲ್ಲ. ನಾವೇನು ಜಲ್ಲಿ ಕ್ರಷರ್‌, ಸಿಮೆಂಟ್‌, ಮರಳಿನ ಫ್ಯಾಕ್ಟರಿ ಇಟ್ಟುಕೊಂಡಿಲ್ಲ. ದೇವೇಗೌಡರು ಅರಸೀಕೆರೆಯ ಎಲ್ಲ ಸಮುದಾಯಕ್ಕೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಬಿಟ್ಟರೆ, ಹತ್ತು ವರ್ಷಗಳಿಂದ ಕಾಂಗ್ರೆಸ್‌ ಅಥವಾ ಬಿಜೆಪಿ ಸರ್ಕಾರ ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ. ಈ ಬಾರಿ ಬಜೆಟ್‌ ಕಾದು ನೋಡೋಣ’ ಎಂದರು.

ಮಾಜಿ ಶಾಸಕ ಜಿ.ಎಸ್.ಪರಮೇಶ್ವರಪ್ಪ, ಜಿಪಂ ಮಾಜಿ ಸದಸ್ಯ ಬಾಣಾವಾರ ಅಶೋಕ್‌, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ರಾಂಪುರ ಶೇಖರಪ್ಪ, ಮುಖಂಡರಾದ ವಿವೇಕ್‌, ಕೆಂಕರೆ ಕೇಶವಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಸಿ.ಗಿರೀಶ್‌, ಸದಸ್ಯ ಹರ್ಷವರ್ಧನ್‌, ಲಾಳನಕೆರೆ ಯೋಗಿಶ್‌, ಬಂಡಿಗೌಡ್ರ ರಾಜಣ್ಣ ಇನ್ನಿತರರು ಇದ್ದರು.

ಮೈತ್ರಿ ಕುರಿತು ದೇವೇಗೌಡರು ಕುಮಾರಸ್ವಾಮಿ ರಾಜ್ಯ ನಾಯಕರು ತೀರ್ಮಾನಿಸುತ್ತಾರೆ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಮುಂಬರುವ ಜಿ.ಪಂ. ತಾ.ಪಂ. ನಗರಸಭೆ ಚುನಾವಣೆ ಮಾಡುತ್ತೇವೆ.

–ಎಚ್‌.ಡಿ. ರೇವಣ್ಣ ಶಾಸಕ

‘ಟಿಕೆಟ್ ನೀಡಿ ತಪ್ಪು ಮಾಡಿದೆ’

ಈ ಕ್ಷೇತ್ರದಲ್ಲಿ ಲಿಂಗಾಯತ ಸಮಾಜ ಅಪಾರ ಪ್ರಮಾಣದಲ್ಲಿ ಇದೆ. ಅವರಿಗೇ ಟಿಕೆಟ್‌ ಕೊಡಬೇಕು ಎಂದು ದೇವೇಗೌಡರು ಹೇಳಿದ್ದರು. ಆದರೆ ಈ ಗಿರಾಕಿ ಬೆಳೆಸೋಣ ಎಂದು ಇವರಿಗೆ ಟಿಕೆಟ್‌ ನೀಡಿ ತಪ್ಪು ಮಾಡಿಬಿಟ್ಟೆವು ಎಂದು ಎಚ್‌.ಡಿ. ರೇವಣ್ಣ ಹೇಳಿದರು. 3 ಬಾರಿ ಜೆಡಿಎಸ್‌ ಪಕ್ಷದಿಂದ ಗೆದ್ದಿದ್ದು ದೇವೇಗೌಡರ ಕುಟುಂಬದಿಂದ ಎಷ್ಟು ಹಣ ಕೊಟ್ಟಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ. ₹10 ಹಾಕಿದ್ದೇನೆ ಎಂದು ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಮೇಲೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು. 2028 ರ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವಿಗಾಗಿ ಹೋರಾಟ ಎನ್ನುತ್ತಾರೆ ಶಿವಲಿಂಗೇಗೌಡರು. ಇವರ ಕ್ಷೇತ್ರದ ಬಗ್ಗೆ ಮೊದಲು ನೋಡಲಿ. ಜನತೆ ಬುದ್ಧಿವಂತರು. ರಾಜ್ಯ ಹಾಗೂ ದೇಶದಲ್ಲಿ ನರೇಂದ್ರ ಮೋದಿ ಬಲಪಡಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ಹಾಗೂ ಪ್ರಯತ್ನ ಮುಂದುವರಿಯಲಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.