ಅರಕಲಗೂಡು: ‘ಎಚ್.ಡಿ. ಕುಮಾರಸ್ವಾಮಿ ಅವರು ನನ್ನ ಸಲಹೆ ಒಪ್ಪಿಕೊಂಡಿದ್ದರೆ ಇನ್ನೂ ಸಿ.ಎಂ ಆಗಿ ಇರುತ್ತಿದ್ದರು’ ಎಂದು ಶಾಸಕ ಎ.ಟಿ.ರಾಮಸ್ವಾಮಿ ಹೇಳಿದರು.
ತಾಲ್ಲೂಕಿನ ಮಲ್ಲಿತಮ್ಮನಹಳ್ಳಿಯಲ್ಲಿ ನಿರ್ಮಿಸಿರುವ ದೇವಮ್ಮದೇವಿ ಮತ್ತು ಗ್ರಾಮದೇವತೆಗಳ ನೂತನ ದೇಗುಲ ಉದ್ಘಾಟನೆ ಹಾಗೂ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.
‘ನಾನು ಕೊಟ್ಟ ಸಲಹೆ ಕೇಳಿದ್ರೆ ಶಾಶ್ವತ ಮುಖ್ಯಮಂತ್ರಿ ಆಗಿರುತ್ತಿದ್ರು. ನೂರು ಬಾರಿಹೇಳಿದ್ದನ್ನು ನೀವು ಯಾಕೆ ಕೇಳಿಲ್ಲವೋ ಗೊತ್ತಿಲ್ಲ. ಬಹುಶಃ ರೇವಣ್ಣನ ಮಾತು ಕೇಳಿದ್ರೋ ಏನೋ. ಅಧಿಕಾರಕ್ಕಾಗಿ, ಹಣಕ್ಕಾಗಿ ಎಂದು ರಾಜಕೀಯ ಮಾಡಿಲ್ಲ’ ಎಂದು ತಿಳಿಸಿದರು.
ಈ ನಡುವೆ ಎದ್ದು ಬಂದು ಮಾತನಾಡಿದ ಶಾಸಕ ಎಚ್.ಡಿ. ರೇವಣ್ಣ, ‘ಅಭಿವೃದ್ಧಿಯಲ್ಲಿ ರಾಮಸ್ವಾಮಿ ಅವರನ್ನು ಮೀರಿಸಲು ಆಗಲ್ಲ. 25 ವರ್ಷ ಶಾಸಕ ಆಗಿದ್ದೀನಿ, ಸಚಿವನೂ ಆಗಿದ್ದೀನಿ. ಒಂದು ಬಾರಿ ನಿಮ್ಮನ್ನ ಮಂತ್ರಿ ಮಾಡಬೇಕೆಂಬ ಆಸೆ ಇದೆ’ ಎಂದರು.
ಮಾತು ಮುಂದುವರಿಸಿದ ರಾಮಸ್ವಾಮಿ, ‘ಸಚಿವನಾಗಬೇಕೆಂದು ಬಯಸಿದವನು ಅಲ್ಲ. ಬಯಸಿದ್ದರೆ ಎಂದೋ ಆಗಬಹುದಿತ್ತು’ ಎಂದು ರೇವಣ್ಣಗೆ ಮನದಟ್ಟು ಮಾಡಿದರು.
ಎಚ್.ಡಿ.ಕುಮಾರ ಸ್ವಾಮಿ ಮಾತನಾಡಿ, ‘ಬೆಂಗಳೂರಿನಲ್ಲಿ ಲಕ್ಷಾಂತರ ಕೋಟಿರೂಪಾಯಿ ಸರ್ಕಾರಿ ಭೂಮಿ, ಆಸ್ತಿ ಕಬಳಿಕೆ ಮಾಡಲಾಗಿದೆ. ಆ ದಾಖಲೆಗಳನ್ನು ಇನ್ನೂ ನನ್ನ ಹಾಗೂ ರಾಮಸ್ವಾಮಿ ಬಳಿ ಇದೆ. ಸರ್ಕಾರಕ್ಕೆ ಒಂದು ಸೆಟ್ ಮಾಹಿತಿ ಕೊಡಲಾಗಿದೆ. ₹ 4-5 ಲಕ್ಷ ಕೋಟಿ ಆಸ್ತಿ ಸರ್ಕಾರದ ಒಂದು ವರ್ಷದ ಬಜೆಟ್ಗಿಂತ ಹೆಚ್ಚಿನ ಆಸ್ತಿ ಕಬಳಿಕೆಯಾಗಿದೆ’ ಎಂದರು.
‘ಅರಕಲಗೂಡಿನ ಸ್ಥಳೀಯ ರಾಜಕೀಯ ವಾತಾವರಣ ಅವರ ಮನಸ್ಸಿನ ಮೇಲೆ ಸ್ವಲ್ಪನೋವು ಉಂಟು ಮಾಡಿದೆ. ಎಚ್.ಡಿ. ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಮೇಲೆ ರಾಮಸ್ವಾಮಿ ಇನ್ನೂ ಗೌರವ ಉಳಿಸಿ ಕೊಂಡಿದ್ದಾರೆ. ಅಧಿಕಾರ ಹಾಗೂ ಮಂತ್ರಿ ಸ್ಥಾನಬೇಡಿ ಯಾರ ಮನೆ ಮುಂದೆ ಹೋದವರಲ್ಲ ಎಂದು ನುಡಿದರು.
ಕಾರ್ಯಕ್ರಮದ ಆಯೋಜಕ ಉದ್ಯಮಿ ಎಂ.ಡಿ.ರಮೇಶ್ ಗೌಡ, ಶ್ರವಣಬೆಳಗೊಳಶಾಸಕ ಸಿ.ಎನ್.ಬಾಲಕೃಷ್ಣ, ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಇದ್ದರು.
ಇದಕ್ಕೂ ಮುನ್ನ ಪಟ್ಟಣದ ಹೊಳೆನರಸೀಪುರ ರಸ್ತೆ ಚನ್ನಬಸವೇಶ್ವರ ಕಲ್ಯಾಣಮಂಟಪದ ಬಳಿ ಕಾರ್ಯ ಕರ್ತರು ಕುಮಾರಸ್ವಾಮಿ ಅವರನ್ನು ಸ್ವಾಗತಿಸಿದರು. ಪಕ್ಷ ಹಾಗೂ ನಾಯಕರ ಪರ ಘೋಷಣೆ ಕೂಗಿ ಸಂಭ್ರಮಿಸಿದರು.
ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಕೆ.ಸತೀಶ್, ಮುಖಂಡರಾದ ಮುದ್ದನಹಳ್ಳಿ ರಮೇಶ್, ಗೌರೀಶ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.