ಹೊಳೆನರಸೀಪುರ: ‘ತಾಲ್ಲೂಕಿನ ಕೆಲ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಇದೆ. ಉಪನ್ಯಾಸಕ ನೇಮಕ ಸಂಬಂಧ ಸರ್ಕಾರದ ಗಮನ ಸೆಳೆದಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ’ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ, ಕ್ರೀಡಾ, ಎನ್ಎಸ್ಎಸ್, ಎನ್ಸಿಸಿ ರೋವರ್ಸ್ ಅಂಡ್ ರೇಂಜರ್ಸ್, ಯುವ ರೆಡ್ಕ್ರಾಸ್ ಘಟಕ ಮತ್ತು ಪರಂಪರೆ ಕೂಟದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
‘ಚೆನ್ನಾಗಿ ಓದಲಿ ಎನ್ನುವ ಉದ್ದೇಶದಿಂದ ನಿಮ್ಮನ್ನು ಕಾಲೇಜಿಗೆ ಕಳುಹಿಸುತ್ತಾರೆ. ನೀವು ಚೆನ್ನಾಗಿ ಓದಿ ನಿಮ್ಮ ಉತ್ತಮ ಬದುಕು ರೂಪಿಸಿಕೊಳ್ಳಬೇಕು. ಪೋಷಕರಿಗೆ ಗೌರವ ತಂದುಕೊಡಬೇಕು. ಪಾಠದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸದಾ ಕಾಲ ಕ್ರಿಯಾಶೀಲರಾಗಿರಬೇಕು’ ಎಂದು ಕಿವಿಮಾತು ಹೇಳಿದರು.
ನಿವೃತ್ತ ಪ್ರಾಂಶುಪಾಲ ಡಾ.ನಿರ್ವಾಣೇಗೌಡ ಅವರನ್ನು ಸನ್ಮಾನಿಸಲಾಯಿತು.
ಪ್ರಾಂಶುಪಾಲ ಡಾ. ಕೆ.ಬಾಷಾ, ಉಪನ್ಯಾಸಕರಾದ ಎಂ.ಅರುಣೇಶ್, ಕ್ಯಾಪ್ಟನ್ ಎನ್.ವಿ.ಶ್ರೀನಿವಾಸ, ನಟರಾಜ್, ಎಂ.ಎನ್.ಶಶಿಕಲಾ, ಎಸ್.ಕಿರಣ್ ರಾವತ್, ಆರ್.ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.