ADVERTISEMENT

ಕಾರಿನ ಚಕ್ರದ ಗಾಳಿ ಬಿಟ್ಟ ತಹಶೀಲ್ದಾರ್‌: ರಸ್ತೆಯಲ್ಲೇ ಕಾನ್‌ಸ್ಟೆಬಲ್‌ ಧರಣಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 16:47 IST
Last Updated 18 ಆಗಸ್ಟ್ 2020, 16:47 IST
ಸಕಲೇಶಪುರದಲ್ಲಿ ತಹಶೀಲ್ದಾರ್‌ ತನ್ನ ಕಾರಿನ ಚಕ್ರದ ಗಾಳಿ ಬಿಟ್ಟು ತನಗೆ ಅನ್ಯಾಯ ಮಾಡಿದ್ದು ನನಗೆ ನ್ಯಾಯಬೇಕು ಎಂದು ಆಗ್ರಹಿಸಿ ಹೆಡ್‌ಕಾನ್ಟೇಬಲ್‌ ದಯಾನಂದ್‌ ರಸ್ತೆ ಮಧ್ಯದಲ್ಲಿಯೇ ಗಾಂಧಿ ಫೋಟೊ ಹಿಡಿದು ಧರಣಿ ನಡೆಸಿದರು
ಸಕಲೇಶಪುರದಲ್ಲಿ ತಹಶೀಲ್ದಾರ್‌ ತನ್ನ ಕಾರಿನ ಚಕ್ರದ ಗಾಳಿ ಬಿಟ್ಟು ತನಗೆ ಅನ್ಯಾಯ ಮಾಡಿದ್ದು ನನಗೆ ನ್ಯಾಯಬೇಕು ಎಂದು ಆಗ್ರಹಿಸಿ ಹೆಡ್‌ಕಾನ್ಟೇಬಲ್‌ ದಯಾನಂದ್‌ ರಸ್ತೆ ಮಧ್ಯದಲ್ಲಿಯೇ ಗಾಂಧಿ ಫೋಟೊ ಹಿಡಿದು ಧರಣಿ ನಡೆಸಿದರು   

ಸಕಲೇಶಪುರ: ತಹಶೀಲ್ದಾರ್‌ ಅವರು ತನ್ನ ಕಾರಿನ ನಾಲ್ಕೂ ಚಕ್ರಗಳ ಗಾಳಿ ಬಿಟ್ಟು ಅನ್ಯಾಯ ಮಾಡಿದ್ದು, ನ್ಯಾಯಬೇಕು ಎಂದು ಆಗ್ರಹಿಸಿ ಪೊಲೀಸ್‌ ಹೆಡ್‌ ಕಾನ್‌ಸ್ಟೆಬಲ್‌ ಒಬ್ಬರು ಸಮವಸ್ತ್ರದಲ್ಲಿಯೇ ಗಾಂಧಿ ಫೋಟೊ ಹಿಡಿದು ರಸ್ತೆಯಲ್ಲಿಯೇ ಧರಣಿ ನಡೆಸಿದ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.

‘ಮೆಡಿಕಲ್‌ ಶಾಪ್‌ ಒಂದರ ಮುಂದೆ ಕಾರು ನಿಲ್ಲಿಸಿ ಔಷಧಿ ಖರೀದಿ ಮಾಡಿಕೊಂಡು ಬರುವಷ್ಟರಲ್ಲಿ ತಹಶೀಲ್ದಾರ್‌ ಕಾರಿನ ಚಕ್ರಗಳಿಂದ ಗಾಳಿ ತೆಗೆದಿದ್ದಾರೆ. ಹೇಳಿದ್ದರೆ ತಾನೇ ಕಾರನ್ನು ಅಲ್ಲಿಂದ ತೆಗೆಯುತ್ತಿದ್ದೆ. ಇಲ್ಲವೇ ಕಾನೂನು ಪ್ರಕಾರ ದಂಡ ಕಟ್ಟುತ್ತಿದ್ದೆ. ಆರೋಗ್ಯ ಸರಿ ಇಲ್ಲದ ನನಗೆ ಅನ್ಯಾಯ ಮಾಡಿ ಮನಸ್ಸಿಗೆ ನೋವು ಉಂಟು ಮಾಡಿದ್ದಾರೆ. ನ್ಯಾಯಬೇಕು ಎಂದು ಧರಣಿ ಕುಳಿತಿದ್ದಾಗಿ’ ದಯಾನಂದ್‌ ಸುದ್ದಿಗಾರರಿಗೆ ಹೇಳಿದರು.

ಧರಣಿ ಕುಳಿತ ವಿಷಯ ತಿಳಿಯುತ್ತಿದ್ದಂತೆ ಠಾಣೆಯಿಂದ ಸಹೋದ್ಯೋಗಿಗಳು ಸ್ಥಳಕ್ಕೆ ತೆರಳಿ ಅವರನ್ನು ಸಮಾಧಾನಪಡಿಸಿ ಠಾಣೆಗೆ ಕರೆದುಕೊಂಡು ಬಂದರು ಎನ್ನಲಾಗಿದೆ.

ADVERTISEMENT

‘ರಸ್ತೆ ನಿಯಮ ಉಲ್ಲಂಘಿಸಿ ಕಾರು ನಿಲ್ಲಿಸಲಾಗಿತ್ತು. ಇದರಿಂದ ವಾಹನದಟ್ಟಣೆ ಹೆಚ್ಚಾಗಿ ಟ್ರಾಫಿಕ್‌ ಜಾಮ್‌ ಸಮಸ್ಯೆ ಉಂಟಾಗಿತ್ತು. ಕಾರು ಯಾರು ನಿಲ್ಲಿಸಿರುವುದು ಎಂದು ಕೇಳಿದರೆ ಅಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಚಕ್ರಗಳಿಂದ ಗಾಳಿ ತೆಗೆಯಬೇಕಾಯಿತು. ನಿಯಮ ಉಲ್ಲಂಘನೆ ಮಾಡಿದವರು ಯಾರೇ ಆದರೂ ತಪ್ಪು ತಪ್ಪೇ’ ತಹಶೀಲ್ದಾರ್‌ ಮಂಜುನಾಥ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.