
ಸಕಲೇಶಪುರ: ಶಾಸಕ ಸಿಮೆಂಟ್ ಮಂಜು ನೂರಾರು ಜನರಿಗೆ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ನೀಡುವ ಮೂಲಕ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿದ್ದಾರೆ ಎಂದು ಆದಿಚುಂಚನಗಿರಿ ಹಾಸನ ಶಾಖಾಮಠದ ಶಂಭುನಾಥಸ್ವಾಮೀಜಿ ಹೇಳಿದರು.
ಶಾಸಕ ಸೀಮೆಂಟ್ ಮಂಜು ಜನ್ಮದಿನದ ಅಂಗವಾಗಿ ಇಲ್ಲಿ ಮಂಗಳವಾರ ಶಾಸಕರ ಕುಟುಂಬ ಆಯೋಜಿಸಿದ್ದ ಉಚಿತ ಆರೋಗ್ಯ ತಾಪಸಣಾ ಶಿಬಿರ ಉದ್ಘಾಟಿಸಿ ಸ್ವಾಮೀಜಿ ಮಾತನಾಡಿದರು. ಬಡವರ ಸೇವೆಯಿಂದ ದೇವರ ಕೃಪೆಗೆ ಪಾತ್ರರಾಗ ಬಹುದು ಎಂದರು.
ಯಸಳೂರು ತೆಂಕಲಗೂಡು ಬೃಹನ್ಮಠದ ಚನ್ನಸಿದ್ದೇಶ್ವರ ಶಿವಚಾರ್ಯ ಸ್ವಾಮೀಜಿ ಮಾತನಾಡಿ, ಬದುಕು ಮಾದರಿಯಾಗಿರಬೇಕು. ದೊಡ್ಡವರಾದಂತೆ ಸರಳತೆ ಮೈಗೂಡಿಸಿಕೊಳ್ಳಬೇಕು ಎಂದರು. ಕಿರಕೊಡ್ಲಿಮಠದ ಸದಾಶಿವ ಸ್ವಾಮೀಜಿ ಆಶೀವರ್ಚನ ನೀಡಿ, ಎಲ್ಲರಿಗೂ ಮಾದರಿಯಾಗುವಂತೆ ಒಳ್ಳೆಯ ಕಾರ್ಯಗಳು ನಡೆಯಲಿ ಎಂದರು. ಶಾಸಕ ಸಿಮೆಂಟ್ ಮಂಜು ಮಾತನಾಡಿ, ಸಾಮಾನ್ಯ ವ್ಯಕ್ತಿಯನ್ನು ಕ್ಷೇತ್ರ ಜನಶಾಸಕನಾಗಿ ಚುನಾಯಿಸಿದ್ದಾರೆ. ಈ ಹುದ್ದೆಯನ್ನು ಜನರ ಸೇವೆಗೆ ಮುಡಿಪಾಗಿಟ್ಟಿದ್ದೇನೆ ಎಂದರು. ಕಲ್ಮಠದ ಮಹಾಂತಸ್ವಾಮೀಜಿ, ಕಾರ್ಜುವಳ್ಳಿ ಹಿರೇಮಠದ ಸದಾಶಿವಶಿವಚಾರ್ಯ ಸ್ವಾಮೀಜಿ ಮಾತನಾಡಿದರು.
ಶಿಬಿರದಲ್ಲಿ 1500 ಹೆಚ್ಚು ಮಂದಿಗೆ ಆರೋಗ್ಯ ತಪಾಸಣೆ ಹಾಗೂ ಔಷಧಿ ನೀಡಲಾಯಿತು.
ಸಂಕಲಾಪುರಮಠದ ಕಿರಿಯ ಶಾಂತವೀರ ಮಲ್ಲಿಕಾರ್ಜುನ ಸ್ವಾಮೀಜಿ, ತಣ್ಣಿರುಹಳ್ಳಮಠದ ವಿಜಯಕುಮಾರಸ್ವಾಮೀಜಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್, ಅಮಿತ್ ಶೆಟ್ಟಿ, ಯಡೇಹಳ್ಳಿ ಆರ್. ಮಂಜುನಾಥ್, ವಿದ್ಯಾಶಂಕರ್, ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ಧರ್ಮಪ್ಪ, ಮುಖಂಡರಾದ ಪ್ರತಾಪ್, ವಳಲಹಳ್ಳಿ ಅಶ್ವಥ್, ನೇತ್ರಾವತಿ ಮಂಜುನಾಥ್ ಹಾಸನ ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ. ರಾಜಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.