
ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ನಿರ್ದೇಶಕ ಸ್ಥಾನಕ್ಕೆ ನಡೆಯುವ ಚುನಾವಣೆಗೆ ನುಗ್ಗೇಹಳ್ಳಿ ಹೋಬಳಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಎಚ್ ಬಿ ರಂಗಸ್ವಾಮಿ ( ಅಣ್ಣಯ್ಯ) ಅವರನ್ನು ಶಾಸಕ ಸಿಎನ್ ಬಾಲಕೃಷ್ಣ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಯಿತು
ನುಗ್ಗೇಹಳ್ಳಿ: ಮುಂಬರುವ ಏಪ್ರಿಲ್ನಲ್ಲಿ ನಡೆಯುವ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ನೂತನ ಆಡಳಿತ ಮಂಡಳಿ 5 ವರ್ಷದ ಅವಧಿಗೆ ನಿರ್ದೇಶಕ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಹೋಬಳಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಎಚ್.ಬಿ. ರಂಗಸ್ವಾಮಿ (ಅಣ್ಣಯ್ಯ) ಅವರನ್ನು ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ ಶಾಸಕ ಸಿಎನ್ ಬಾಲಕೃಷ್ಣ ತಿಳಿಸಿದರು.
ಹೋಬಳಿ ಕೇಂದ್ರದ ಹಿರೀಸಾವೆ ರಸ್ತೆಯಲ್ಲಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಆರ್. ನಟರಾಜ್ ಅವರ ಮನೆಯಲ್ಲಿ ಹೋಬಳಿ ಅಭ್ಯರ್ಥಿ ಆಯ್ಕೆ ಕುರಿತು ನಡೆದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ರೈತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಬಾರಿಯ ಚುನಾವಣೆಯಲ್ಲೂ ಎಲ್ಲಾ 13 ಸ್ಥಾನಗಳಲ್ಲೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದು ಎಲ್ಲಾ ಅಭ್ಯರ್ಥಿಗಳು ಅತ್ಯಧಿಕ ಮತದೊಂದಿಗೆ ಜಯಗಳಿಸಲಿದ್ದಾರೆ ಎಂಬ ವಿಶ್ವಾಸವಿದೆ.
ಹೇಮಾವತಿ ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆ ಮಾಜಿ ಪ್ರಧಾನಿಗಳಾದ ಎಚ್ ಡಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಎಚ್.ಡಿ. ರೇವಣ್ಣ ಸೇರಿದಂತೆ ಎಲ್ಲರ ಪರಿಶ್ರಮ ಇದೆ. ಇಂದು ಕಾರ್ಖಾನೆ ಲಾಭದಲಿದೆ. ಸದ್ಯ ಸಕ್ಕರೆ ಕಾರ್ಖಾನೆ ಖಾಸಗಿ ಸಹಭಾಗಿತ್ವದಲ್ಲಿ ನಡೆಯುತ್ತಿದೆ. ಪ್ರಸ್ತುತ ಕಾರ್ಖಾನೆ ಖಾತೆಯಲ್ಲಿ ಎಚ್ಡಿಸಿಸಿ ಬ್ಯಾಂಕ್ನಲ್ಲಿ ₹24 ಕೋಟಿ ನಿವ್ವಳ ಲಾಭದ ಹಣ ಇದೆ. ಜೊತೆಗೆ ಚನ್ನರಾಯಪಟ್ಟಣದ ಹೌಸಿಂಗ್ ಬೋರ್ಡ್ ಬಳಿ ₹150 ಕೋಟಿ ಬೆಲೆಬಾಳುವ 18 ಎಕರೆ ಜಾಗವಿದ್ದು, ಕಾರ್ಖಾನೆಗೆ ಸಂಬಂಧಪಟ್ಟ ಎಲ್ಲಾ ಆಸ್ತಿಗಳನ್ನು ಜೆಡಿಎಸ್ ಪಕ್ಷದ ಅಧಿಕಾರ ಅವಧಿಯಲ್ಲಿ ಉಳಿಸಿ ಸಂರಕ್ಷಿಸುವ ಕೆಲಸವನ್ನು ಮಾಡಲಾಗಿದೆ ಎಂದರು.
ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ತಾಲೂಕಿನ 5 ಕ್ಷೇತ್ರಗಳಿಗೆ ಪಕ್ಷದ ಮುಖಂಡರ ಕಾರ್ಯಕರ್ತರ ರೈತರ ಸಭೆ ನಡೆಸುವ ಮೂಲಕ ಅಭ್ಯರ್ಥಿಗಳ ಆಯ್ಕೆಯನ್ನು ಮಾಡಲಾಗುತ್ತಿದೆ. ತಾಲ್ಲೂಕಿನ ಹಾಗೂ ಇನ್ನುಳಿದ ಕ್ಷೇತ್ರಗಳಿಗೆ ಬೇರೆ ತಾಲ್ಲೂಕುಗಳಲ್ಲಿ ಸ್ಪರ್ಧೆ ಮಾಡುತ್ತಿರುವ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸುವಂತೆ ಸಭೆಯಲ್ಲಿ ಮನವಿ ಮಾಡಿದರು.
ಕಾರ್ಖಾನೆ ಉಳಿವಿಗೆ ಎಲ್ಲರೂ ಕೈಜೋಡಿಸಿ: ವಾರ್ಷಿಕ 8 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯುವ ಗುರಿ ಹೊಂದಲಾಗಿದೆ. ಎಲ್ಲಾ ಶೇರುದಾರ ರೈತರ ಪರವಾಗಿ ಜೆಡಿಎಸ್ ಬೆಂಬಲಿತ ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿದೆ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ನಂತರ ಕಾರ್ಖಾನೆ ಶೇರುದಾರ ರೈತರಿಗೆ 25 ಕೆಜಿ ಸಕ್ಕರೆ ಕೊಡುವುದಾಗಿ ತಿಳಿಸಿದರು.
ಹೋಬಳಿ ನಿರ್ದೇಶಕ ಸ್ಥಾನಕ್ಕೆ ನಡೆದ ಸಭೆಯಲ್ಲಿ ಅಭ್ಯರ್ಥಿಗಳಾಗಿ ಜಯಲಿಂಗೇಗೌಡ, ಕೆ. ಚೌಡನಹಳ್ಳಿ ವಾಸು, ಬಸವನಪುರ ಪ್ರಕಾಶ್, ಗಣೇಶ್, ಶಿವಣ್ಣ, ಎಚ್ ಬಿ ರಂಗಸ್ವಾಮಿ ಆಕಾಂಕ್ಷಿಗಳೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಶಾಸಕರು ಪ್ರತ್ಯೇಕವಾಗಿ ನಡೆಸಿದ ಸಭೆಯಲ್ಲಿ ಕೊನೆಗೆ ಎಲ್ಲರ ಅಭಿಪ್ರಾಯದಂತೆ ಎಚ್.ಬಿ ರಂಗಸ್ವಾಮಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಯಿತು.
ರಂಗಸ್ವಾಮಿ ಮಾತನಾಡಿ, ಹೋಬಳಿಯ ವ್ಯಾಪ್ತಿಯ ಎಲ್ಲಾ ಜೆಡಿಎಸ್ ಕಾರ್ಯಕರ್ತರು, ಮುಖಂಡರುಗಳು ಪಕ್ಷದ ಅಭ್ಯರ್ಥಿಯಾದ ನನಗೆ ಹೆಚ್ಚಿನ ಸಹಕಾರ ಕೊಡುವ ಮೂಲಕ ಚುನಾವಣೆಯಲ್ಲಿ ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಜಿ.ಪಂ ಮಾಜಿ ಉಪಾಧ್ಯಕ್ಷ ಎಚ್.ಎಂ. ನಟರಾಜ್, ಟಿಎಪಿಎಂಎಸ್ ನಿರ್ದೇಶಕ ತೋಟಿ ನಾಗರಾಜ್, ಕೃಷಿ ಪತ್ತಿನ ಅಧ್ಯಕ್ಷ ಪಟೇಲ್ ಕುಮಾರ್, ಮುಖಂಡರಾದ ಜಯ ಲಿಂಗೇಗೌಡ, ಓಬಳಾಪುರ ಬಸವರಾಜ್, ವಿ.ಎನ್ ಮಂಜುನಾಥ್, ವಿಕ್ಟರ್, ಪುಟ್ಟಸ್ವಾಮಿ, ಶಂಕರ್, ಶಿವಣ್ಣ, ಎನ್ ಆರ್ ನಟರಾಜ್, ಮೊಹಮ್ಮದ್ ಜಾವಿದ್, ಎನ್ಬಿ ಉಮೇಶ್, ಎನ್ ಡಿ ಶಂಕರ್, ಧರ್ಮರಾಜ್, ಹುಲಿಕೆರೆ ಸಂಪತ್ ಕುಮಾರ್, ಮುರಳಿ, ಮಧು, ರಮೇಶ್, ಬೆಟ್ಟಯ್ಯ, ಶಿವ ಸ್ವಾಮಿ, ಚಂದ್ರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.