ಹೆತ್ತೂರು: ಮಲೆನಾಡು ಭಾಗದಲ್ಲಿ ವಾರದಿಂದ ತುಂತುರು ಸಹಿತ ಧಾರಾಕಾರ ಸುರಿದ ಮಳೆ ಮಂಗಳವಾರ ತುಸು ಬಿಡುವು ಕೊಟ್ಟಿದೆ. ಮೋಡ ಮುಸುಕಿದ ವಾತಾವರಣ, ಶೀತ ಗಾಳಿ ಇದ್ದು, ನಾಲ್ಕು ದಿನಕ್ಕೆ ಹೋಲಿಸಿದರೆ ಮಳೆ ಕಡಿಮೆಯಾಗಿದೆ. ಮಲೆನಾಡಿಗರು ಸ್ವಲ್ಪ ನಿರಾಳರಾಗಿದ್ದಾರೆ.
ಸಾಮಾನ್ಯವಾಗಿ ಹೋಬಳಿಯಲ್ಲಿ ಜೂನ್, ಜುಲೈನಲ್ಲಿ ಹೆಚ್ಚು ಮಳೆ ಸುರಿಯುತ್ತದೆ. ಆದರೆ ಈ ಬಾರಿ ಮೂರು ತಿಂಗಳಿನಿಂದ ಸತತ ಮಳೆಯಾಗುತ್ತಿದೆ. ಆಗಸ್ಟ್ ಮೊದಲ ವಾರ ಸ್ವಲ್ಪ ಕಡಿಮೆಯಾಗಿತ್ತು. ಆಗಸ್ಟ್ 14ರಿಂದ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದ ಪರಿಣಾಮ ಕಾಫಿ, ಕಾಳುಮೆಣಸು, ಅಡಿಕೆ, ಭತ್ತ, ಶುಂಠಿ, ಏಲಕ್ಕಿ ಬೆಳೆಗೆ ತೀವ್ರ ಹಾನಿ ಉಂಟಾಗಿದೆ.
ಬಿರುಗಾಳಿಗೆ ತೋಟಗಳಲ್ಲಿನ ಮರಗಳು ಮುರಿದು ಬಿದ್ದಿದ್ದವು. ಸತತ ಮಳೆ ಸುರಿದು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಹೆತ್ತೂರು, ಯಸಳೂರು ಹೋಬಳಿಯ ಗ್ರಾಮಗಳಲ್ಲಿ ವಿದ್ಯುತ್, ಮೊಬೈಲ್ ಸಂಪರ್ಕ ಕೈಕೊಟ್ಟು ವಿದ್ಯಾರ್ಥಿಗಳು, ಬ್ಯಾಂಕ್ ಸೇರಿದಂತೆ ಆನ್ ಲೈನ್ ಕೆಲಸಗಳಿಗೆ ತೊಂದರೆ ಆಗುತ್ತಿತ್ತು. ಮಳೆಯಿಂದ ಜನರು ಕಿರಿಕಿರಿ ಅನುಭವಿಸುತ್ತಿದ್ದು, ಮನೆಯಿಂದ ಹೊರಬರಲಾಗದೇ ಪರದಾಡುವಂತಾಗಿತ್ತು.
ಮಂಗಳವಾರ ಮಳೆ ತುಸು ಬಿಡುವುದ್ದಷ್ಟೇ ಅಲ್ಲದೇ ಆಗಾಗ ಸೂರ್ಯನ ಕಿರಣಗಳು ಕಾಣಿಸಿಕೊಂಡು, ಜನರು ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ. ಹೋಬಳಿಯ ಯರಗಳ್ಳಿ ಗ್ರಾಮದಲ್ಲಿ ಪ್ರಸ್ತುತ ವರ್ಷದಲ್ಲಿ 580 ಸೆಂ.ಮೀ. ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.