ADVERTISEMENT

ಹಾಸನ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲು ಮನವಿ

ಜನಪರ ಚಳವಳಿಗಳ ಒಕ್ಕೂಟ, ಮಹಿಳಾಪರ ಸಂಘಟನೆಗಳಿಂದ ಜಿಲ್ಲಾಧಿಕಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 1:50 IST
Last Updated 8 ಆಗಸ್ಟ್ 2025, 1:50 IST
ಮಹಿಳಾ ಪರ ಸಂಘಟನೆಗಳು ಮತ್ತು ಕಾರ್ಯಕರ್ತೆಯರ ನಿಯೋಗದಿಂದ ಗುರುವಾರ ಹಾಸನದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಮಹಿಳಾ ಪರ ಸಂಘಟನೆಗಳು ಮತ್ತು ಕಾರ್ಯಕರ್ತೆಯರ ನಿಯೋಗದಿಂದ ಗುರುವಾರ ಹಾಸನದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.   

ಹಾಸನ: ಹಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಶೀಘ್ರ ಕಾರ್ಯಾರಂಭ ಮಾಡಬೇಕು. ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸಬಲೀಕರಣಕ್ಕೆ ಒತ್ತಾಯಿಸಿ ಜನಪರ ಚಳವಳಿಗಳ ಒಕ್ಕೂಟ, ಮಹಿಳಾ ಪರ ಸಂಘಟನೆಗಳು ಮತ್ತು ಕಾರ್ಯಕರ್ತೆಯರ ನಿಯೋಗದಿಂದ ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

 ನಿಯೋಗದ ಸದಸ್ಯರು ಮಾತನಾಡಿ, ನಗರದಲ್ಲಿ ಹಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೂಡಲೇ ಆರಂಭಿಸುವಂತೆ ಹಾಗೂ ಜಿಲ್ಲೆಯ ಆರೋಗ್ಯ ವ್ಯವಸ್ಥೆಯನ್ನು ಭಾರತೀಯ ಸಾರ್ವಜನಿಕ ಆರೋಗ್ಯ ಮಾನದಂಡಗಳಿಗೆ (ಐಪಿಎಚ್ಎಸ್) ಅನುಗುಣವಾಗಿ ಸೌಲಭ್ಯಗಳನ್ನು ನೀಡಿ ಸಬಲೀಕರಣ ಮಾಡುವಂತೆ ಆಗ್ರಹಿಸಿ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟದ ನೇತೃತ್ವದಲ್ಲಿ ಜನಾರೋಗ್ಯಕ್ಕಾಗಿ ಜನಾಂದೋಲನ ಆರಂಭಿಸಲಾಗಿದೆ ಎಂದರು.

ಮೊದಲಿಗೆ ಜಿಲ್ಲೆಯ ವಿವಿಧ ಜನಪರ ಸಂಘಟನೆಗಳು, ಸಂಘ–ಸಂಸ್ಥೆಗಳು ಮತ್ತು ನಾಗರಿಕರಿಂದ ನಿರಂತರ ಸರಣಿ ಪ್ರತಿಭಟನೆಗಳನ್ನು ನಡೆಸಲಾಗುವುದು. ಅದರ ಭಾಗವಾಗಿ ಇಂದು ಮಹಿಳೆ ಮತ್ತು ಮಹಿಳಾ ಪರ ಸಂಘಟನೆಗಳ ವತಿಯಿಂದ ಈ ಹಕ್ಕೊತ್ತಾಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ADVERTISEMENT

ಆಗಸ್ಟ್ 14ರಂದು ಜಿಲ್ಲೆಯ ಜನರ ಪರವಾಗಿ ಜನಾರೋಗ್ಯದ ಹಕ್ಕೊತ್ತಾಯಗಳನ್ನು ತಮಗೆ ಸಲ್ಲಿಸಲಾಗುವುದು. ಆಗಸ್ಟ್ 15ರಂದು ನಡೆಯುವ 'ಜನಾರೋಗ್ಯದ ಸ್ವಾತಂತ್ರ್ಯಕ್ಕಾಗಿ ಸಾಮೂಹಿಕ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಿ ಬಂದು, ಜನಾರೋಗ್ಯದ ಹಕ್ಕೊತ್ತಾಯಗಳನ್ನು ಈಡೇರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದರು.

ನಮ್ಮ‌ 10 ಹಕ್ಕೊತ್ತಾಯಗಳನ್ನು ತುರ್ತಾಗಿ ಆದ್ಯತೆಯ ಮೇರೆಗೆ ಪರಿಗಣಿಸಬೇಕೆಂದು ಕೋರುತ್ತೇವೆ. ಈ ಬೇಡಿಕೆಗಳು ಈಡೇರುವವರೆಗೂ, ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವವರೆಗೂ ಜಿಲ್ಲೆಯ ಎಲ್ಲ ಜನಪರ ಸಂಘಟನೆಗಳು, ಸಂಘ ಸಂಸ್ಥೆಗಳು ಮತ್ತು ನಾಗರಿಕರು ನಿರಂತರ ಪ್ರತಿಭಟನೆ ನಡೆಸುತ್ತೇವೆ. ಅದ್ದರಿಂದ ನಮ್ಮ ಬೇಡಿಕೆ ಈಡೇರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದರು.

ಲೇಖಕಿ ರೂಪ ಹಾಸನ., ಮಹಿಳಾ ಸಂಘಟನೆಗಳ ಜಯಲಕ್ಷ್ಮಿ ರಾಜಣ್ಣಗೌಡ., ಬಿಜಿವಿಎಸ್‌ನ ಸಮತಾ ಸಂಚಾಲಕಿ ಮಮತಾ ಶಿವು, ಜನನಿ ಫೌಂಡೇಶನ್ ಅಧ್ಯಕ್ಷೆ ಭಾನುಮತಿ, ಲೇಖಕಿ ಸಿ. ಸುವರ್ಣ ಶಿವಪ್ರಸಾದ್, ಡಿವೈಎಫ್ಐ ಜಿಲ್ಲಾ ಘಟಕದ ಕಾರ್ಯದರ್ಶಿ ಪೃಥ್ವಿ ಎಂ.ಜಿ., ಜೀವನಧಾರಾ ಸೇವಾ ಕೇಂದ್ರದ ಹೇಮಾ, ಮುನೀರಾ ಬೇಗಂ, ಶೋಭಾ., ಹರಿಣಿ ಕುಮಾರಿ, ಪ್ರೇರಣಾ ಖಾನಾವಳಿಯ ಧರಣಿ, ಬಿಜಿವಿಎಸ್‌ನ ಸ್ವಾಮಿ ಚಿನ್ನೇನಹಳ್ಳಿ, ಪೌಲೋಸ್, ತೇಜಸ್, ಪ್ರಜ್ವಲ್ ಇತರರು ಇದ್ದರು.

ಆರೋಗ್ಯ ವ್ಯವಸ್ಥೆ ಬಲಪಡಿಸಲು ವಿವಿಧ ಸಂಘಟನೆಗಳ ಒತ್ತಾಯ | 10 ಬೇಡಿಕೆಗಳನ್ನು ಕೂಡಲೇ ಈಡೇರಿಸಲು ಆಗ್ರಹ | ಸಂಘ–ಸಂಸ್ಥೆ, ನಾಗರಿಕರಿಂದ ನಿರಂತರ ಪ್ರತಿಭಟನೆ
ಆಗಸ್ಟ್ 15ರಂದು ಹಾಸನದ ಹಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಮುಂದೆ ಜನಾರೋಗ್ಯದ ಸ್ವಾತಂತ್ರ್ಯಕ್ಕಾಗಿ ಸಾಮೂಹಿಕ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ.
ರೂಪ ಹಾಸನ ಲೇಖಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.