ಹೊಳೆನರಸೀಪುರ: ಪಟ್ಟಣದಲ್ಲಿ ಮಾರ್ಚ್ 12 ರಿಂದ 17 ರ ವರೆಗೆ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಪಟ್ಟಣದ ಹೇಮಾವತಿ ನದಿ ತೀರದಲ್ಲಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಾಯದಿಂದ ನೂತನವಾಗಿ ನಿರ್ಮಿಸಿರುವ ಅಯ್ಯಪ್ಪಸ್ವಾಮಿ ದೇವಾಲಯದ ಕುಂಭಾಭಿಷೇಕ, ವಿನಾಯಕ, ಸುಬ್ರಹ್ಮಣ್ಯಸ್ವಾಮಿ ಹಾಗೂ ದುರ್ಗಾದೇವಿ ಪರಿವಾರ ದೇವರುಗಳ ದೇವಸ್ಥಾನ ಉದ್ಘಾಟನೆ ನಡೆಯಲಿದೆ.
ಇದರ ಅಂಗವಾಗಿ ಸೋಮವಾರದಿಂದ ಪೂಜಾ ವಿಧಿ ವಿಧಾನಗಳು ಪ್ರಾರಂಭವಾಗಿವೆ. ಮಾ. 12 ರಂದು ವಾಸವಿ ಪೀಠಾಧ್ಯಕ್ಷ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಕುಂಭಾಭಿಷೇಕ ನೆರವೇರಿಸಲಿದ್ದಾರೆ. ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡ ಹಾಗೂ ಪತ್ನಿ ಚೆನ್ನಮ್ಮ ದೇವೇಗೌಡ ದೇವಾಲಯ ಉದ್ಘಾಟನೆ ನೆರವೇರಿಸಲಿದ್ದು, ಶಾಸಕ ಎಚ್.ಡಿ, ರೇವಣ್ಣ ಮತ್ತು ಭವಾನಿ ರೇವಣ್ಣ, ಅಯ್ಯಪ್ಪ ಭವನ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ 7 ಗಂಟೆಯಿಂದ ಅಯ್ಯಪ್ಪಸ್ವಾಮಿ ಸಾಂಸ್ಕೃತಿಕ ವೇದಿಕೆಯಲ್ಲಿ ಹಿನ್ನೆಲೆ ಗಾಯಕ ಶಶಿಧರ್ ಕೋಟೆ ಅವರಿಂದ ಅಯ್ಯಪ್ಪಸ್ವಾಮಿ ಭಕ್ತಿಗೀತೆಗಳ ಕಾರ್ಯಕ್ರಮ ನಡೆಯಲಿದೆ. ನಿತ್ಯ ಸಂಜೆ ಇದೇ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಂದ ಭಕ್ತಿಗೀತೆ ಹಾಗೂ ಕೀರ್ತನೆಗಳ ಕಾರ್ಯಕ್ರಮ ನಡೆಯಲಿದೆ.
‘ಮಾ.15 ರಂದು ಸಂಜೆ 6 ಗಂಟೆಯಿಂದ ನೂತನ ದೇವಾಲಯದ 18 ಮೆಟ್ಟಿಲುಗಳ ಪಡಿಪೂಜೆ ನಡೆಯಲಿದ್ದು, ಸಂಸದ ಶ್ರೇಯಸ್ ಪಟೇಲ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಾರ್ಚ್ 16 ರಂದು ವಿವಿಧ ಕಲಾತಂಡಗಳ ಜೊತೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಯ್ಯಪ್ಪಸ್ವಾಮಿ ಉತ್ಸವ ನಡೆಯಲಿದೆ’ ಎಂದು ಟ್ರಸ್ಟಿನ ಅಧ್ಯಕ್ಷ ಟಿ. ಶಿವಕುಮಾರ್, ಕಾರ್ಯದರ್ಶಿ ಜಿ.ಎಚ್. ಸುರೇಶ್ ತಿಳಿಸಿದ್ದಾರೆ.
ರಾಜ್ಯದ ವಿವಿಧೆಡೆಗಳಿಂದ ಬರಲಿರುವ ಭಕ್ತಾದಿಗಳು ವಾರಪೂರ್ತಿ ಪಟ್ಟಣದಲ್ಲಿ ಹಬ್ಬದ ವಾತಾವರಣ ಭರದ ಸಿದ್ಧತೆ ಆರಂಭಿಸಿರುವ ಆಯೋಜಕರು
13 ರಂದು ಲಕ್ಷ್ಮಿ ನರಸಿಂಹಸ್ವಾಮಿ ರಥೋತ್ಸವ
ಮಾ.13 ರಂದು ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ ನಡೆಯಲಿದೆ. ಬೆಳಿಗ್ಗೆ 7.52 ರಿಂದ 8.21 ರ ನಡುವೆ ಲಕ್ಷ್ಮೀನರಸಿಂಹಸ್ವಾಮಿ ರಥಾರೋಹಣ ಪೂಜಾ ವಿಧಿ ವಿಧಾನ ನಂತರ ಕೋಟೆ ರಥಬೀದಿಯಲ್ಲಿ ರಥೋತ್ಸವ ನಡೆಯಲಿದೆ ಅಯ್ಯಪ್ಪಸ್ವಾಮಿ ದೇವಾಲಯ ಉದ್ಘಾಟನೆ ಮತ್ತು ರಥೋತ್ಸವದ ಅಂಗವಾಗಿ ಪಟ್ಟಣವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಇಲ್ಲಿನ ಬಯಲು ರಂಗ ಮಂದಿರದ ಆವರಣದಲ್ಲಿ ಮನರಂಜನೆ ಪಾರ್ಕ್ ಸಿದ್ದವಾಗುತ್ತಿದೆ. ದೊಡ್ಡ ಜಾಯಿಂಟ್ ವೀಲ್ ಟೋರಾ ಟೋರಾ ಮಕ್ಕಳ ಪುಟಾಣಿ ರೈಲು ಸೇರಿದಂತೆ ಅನೇಕ ಮನರಂಜನೆಯ ಕ್ರೀಡೆಗಳಿವೆ. ಜಾತ್ರೆ ಅಂಗವಾಗಿ ಕೋಟೆ ಬೀದಿಯಲ್ಲಿ ಮಿಠಾಯಿ ಬತಾಸು ಖರ್ಜೂರ್ ಆಟಿಕೆಗಳ ಅಂಗಡಿಗಳು ತೆರೆದಿದ್ದು ಪಟ್ಟಣದಲ್ಲಿ ಜನದಟ್ಟಣೆ ಹೆಚ್ಚಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.